ವಿಜಯಪುರ ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನಗಳ ಕಾಲೇಜು (ಏಮ್ಸ್) ಸ್ಥಾಪನೆಯೇ ನನ್ನ ಗುರಿ. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಗೆಗಾಗಿ ಹೋರಾಟ ಸಮಿತಿ ನಿಯೋಗ ಸಚಿವರನ್ನು ನಗರದಲ್ಲಿ ಭೇಟಿ ಮಾಡಿ, ಜಿಲ್ಲೆಗೆ ರಾಜ್ಯ ಸರ್ಕಾರ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಘೋಷಣೆ ವಿರೋಧಿಸಿ ಮನವಿ ಸಲ್ಲಿಸಿತು. ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿ ವೈದ್ಯಕೀಯ ಕಾಲೇಜು ಆರಂಭಿಸುವುದಕ್ಕೆ ನಮ್ಮ ವಿರೋಧವಿದೆ. ಸರ್ಕಾರ ಖಾಸಗಿ ಸಹಭಾಗಿತ್ವದ ಉದ್ದೇಶದಿಂದ ಹಿಂದೆ ಸರಿಯಬೇಕು. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮೇಲೆ ಒತ್ತಡ ತರುವಂತೆ ನಿಯೋಗದ ಪ್ರಮುಖರು ಆಗ್ರಹಿಸಿದರು.
ಹೋರಾಟಗಾರರ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, “ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ವಿಷಯದಲ್ಲಿ ನಾನೂ ಬಹಿರಂಗವಾಗಿ ವಿರೋಧಿಸಿದ್ದೇನೆ. ವಿಜಯಪುರದಲ್ಲಿ ಸರ್ಕಾರಿ ಕಾಲೇಜು ಸ್ಥಾಪಿಸವಂತೆ 2022ರಲ್ಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇದೀಗ ಸರ್ಕಾರ ಘೋಷಿಸಿರುವ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜಿನ ಬದಲಾಗಿ ಅಖಿಲ ಭಾರತ ವೈದ್ಯ ವಿಜ್ಞಾನಗಳ ಕಾಲೇಜು (ಏಮ್ಸ್) ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶದಿಂದಲೇ ನಾನು ಆರೋಗ್ಯ ಸಚಿವನಾಗಿದ್ದಾಗ ಅಗತ್ಯ ಮೂಲ ಸಂಪನ್ಮೂಲ ಕಲ್ಪಿಸಲು ಮುಂದಾಗಿದ್ದೆ. ಸರ್ಕಾರಿ ಆಸ್ಪತ್ರೆಯಲ್ಲಿ 150 ಎಕರೆಗೂ ಮೀರಿದ ಜಮೀನಿದೆ. 100 ಹಾಸಿಗೆಗಳ ಟ್ರಾಮಾ ಸೆಂಟರ್ಮಂಜೂರಾಗಿದೆ. ಕಾರಣ ಇದೇ ವಿಷಯವಾಗಿ ನಾನು ಜಿಲ್ಲೆಯ ಜನರೊಂದಿಗೆ ಇರಲಿದ್ದೇನೆ” ಎಂದು ಹೋರಾಟಗಾರರ ನಿಯೋಗಕ್ಕೆ ಭರವಸೆ ನೀಡಿದರು.
ಇದನ್ನೂ ಓದಿ: ವಿಜಯಪುರ | ‘ಒಳಮೀಸಲಾತಿ ಜಾರಿಗೊಳಿಸಿದ ಸರ್ಕಾರದ ನಡೆ ಸ್ವಾಗತಾರ್ಹ’
ನಿಯೋಗದಲ್ಲಿ ಹೋರಾಟ ಸಮಿತಿಯ ಸಂಚಾಲಕ ಸಮಿತಿಯ ಬಿ.ಭಗವಾನರೆಡ್ಡಿ, ಅರವಿಂದ ಕುಲಕರ್ಣಿ, ನಾಸಿರ್, ಮಲ್ಲಿಕಾರ್ಜುನ ಕೆಂಗನಾಳ, ಎಚ್.ಗೀತಾ, ಎಚ್.ಟಿ.ಭರತಕುಮಾರ, ಬಾಬುರಾವ, ಫಯಾಜ್ ಕಲಾದಗಿ, ಸಿದ್ದಲಿಂಗ ಬಾಗೇವಾಡಿ, ಸಿದ್ದರಾಮ ಹಿರೇಮಠ, ಶ್ರೀಕಾಂತ, ಲಲಿತಾ ಬಿಜ್ಜರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





