ಮೈಸೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಎಐಡಿಎಸ್ಒ ನೇತೃತ್ವದಲ್ಲಿ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಿದ್ದಾರೆ.
“ವಿಧಾನಸಭೆ ಚುನಾವಣೆಗಾಗಿ ಕಾಲೇಜಿನ ಕಟ್ಟಡಗಳನ್ನು ಬಳಸಿಕೊಳ್ಳಲಾಗಿತ್ತು. ಹೀಗಾಗಿ ಪಾಠಗಳು ಸಮರ್ಪವಾಗಿ ನಡೆದಿಲ್ಲ. ಪದವಿ ಕಾಲೇಜುಗಳಲ್ಲಿ 4 ತಿಂಗಳು ಪಾಠ ಮಾಡಿ, ಪರೀಕ್ಷೆ ಮಾಡಬೇಕು. ಆದರೆ, ಕೇವಲ 2 ತಿಂಗಳು ಮಾತ್ರ ತರಗತಿಗಳು ನಡೆದಿವೆ. ಈವರೆಗೆ ಪಠ್ಯಕ್ರಮವೂ ಲಭ್ಯವಾಗಿಲ್ಲ. ಭಾನುವಾರ ಕೂಡ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ. ಕೇವಲ ಒಂದು ವಾರದಲ್ಲಿ ಎಲ್ಲ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ” ಎಂದು ಪ್ರತಿಭಟನೆ ನಡೆಸಿದ್ದರು.
ವಿದ್ಯಾರ್ಥಿಗಳ ಬೇಡಿಕೆಗೆ ಮೈಸೂರು ವಿವಿ ರಿಜಿಸ್ಟ್ರಾರ್ ಸ್ಪಂದಿಸಿದ್ದು, ಇನ್ನು ಎರಡು ದಿನಗಳಲ್ಲಿ ಪರೀಕ್ಷೆಗಳನ್ನು ಮುಂದೂಡಲು ತೀರ್ಮಾನಿಸುವಂತೆ ಭರವಸೆ ನೀಡಿದ್ದರು. ಮೂರು ದಿನಗಳು ಕಳೆದರೂ ಯಾವುದೇ ನಿಖರ ಮಾಹಿತಿ ದೊರೆಯದ ಕಾರಣ ವಿದ್ಯಾರ್ಥಿಗಳು ಕ್ರಾಫರ್ಡ್ ಹಾಲ್ ಎದುರು ಗುರುವಾರವೂ ಜಮಾಯಿಸಿದ್ದು, ಅಧಿಕೃತ ಸುತ್ತೋಲೆ ನೀಡುವಂತೆ ಒತ್ತಾಯಿಸಿದರು.
“ವಿದ್ಯಾರ್ಥಿಗಳ ಬೇಡಿಕೆಗೆ ವಿವಿ ರಿಜಿಸ್ಟ್ರಾರ್ ಪ್ರತಿಕ್ರಿಯಿಸಿದ್ದು, ʼಪದವಿ ಪರೀಕ್ಷೆಗಳನ್ನು ಆಗಸ್ಟ್ 1ಕ್ಕೆ ಮುಂದೂಡಲಾಗಿದೆʼ ಎಂದು ಘೋಷಿಸಿದರು. ಇದು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ ಸಂದ ಜಯವಾಗಿದೆ” ಎಂದು ಎಐಡಿಎಸ್ಒ ಮೈಸೂರು ಜಿಲ್ಲಾ ಸಮಿತಿಯು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಹೋರಾಟಗಾರರ ವಿರೋಧ; ಹಿಂಬಾಗಿಲಿನಿಂದ ಕಾರ್ಯಕ್ರಮಕ್ಕೆ ಹಾಜರಾದ ಅಜಿತ್ ಹನುಮಕ್ಕನವರ್
ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾಧ್ಯಕ್ಷ ಸುಭಾಷ್, ಕಾರ್ಯದರ್ಶಿ ಚಂದ್ರಕಲಾ, ಪದಾಧಿಕಾರಿಗಳಾದ ನಿತಿನ್, ಸ್ವಾತಿ, ಚಂದ್ರಿಕಾ, ಹೇಮಲತಾ ಹಾಗೂ ಮಹಾರಾಣಿ, ಮಹಾರಾಜ, ಕುವೆಂಪುನಗರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.




