ಮೈಸೂರಿನ ಹೃದಯಭಾಗದಲ್ಲಿರುವ ‘ಡೋಪ್ಲಿನ್ ಕಾಂಪ್ಲೆಕ್ಸ್’ ಆಸ್ತಿ ವಶಕ್ಕೆ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಸಂತೇಪೇಟೆಯಲ್ಲಿನ ‘ಡೋಪ್ಲಿನ್ ಕಾಂಪ್ಲೆಕ್ಸ್’ ತೆರವು ಕುರಿತು ಮೈಸೂರು ಅಭಿವೃದ್ದಿ ಪ್ರಾಧಿಕಾರ (ಎಂಡಿಎ) ನೀಡಿರುವ ಗಡುವು ನಮಗೆ ಸಂಬಂಧಿಸಿದ್ದಲ್ಲ, ನಾವು ಮಾಲೀಕರೇ ಹೊರತು ಬಾಡಿಗೆದಾರರಲ್ಲ ಎಂದು ಕಾಂಪ್ಲೆಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗಿರೀಶ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಬೆಳಗ್ಗೆ ಕಾಂಪ್ಲೆಕ್ಸ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಮ್ಮ ಕಾನೂನು ತಜ್ಞರಿಗೆ ಹೈಕೋರ್ಟ್ ತೀರ್ಪಿನ ಪ್ರತಿ ನೀಡಿ ಪರಿಶೀಲನೆ ಮಾಡಿಸಿಕೊಂಡಿದ್ದೇವೆ. ಅವರಿಂದ ವಸ್ತುಸ್ಥಿತಿಯನ್ನು ಮನದಟ್ಟು ಮಾಡಿಕೊಂಡ ನಂತರ ವರ್ತಕರ ಅಸೋಸಿಯೇಷನ್ನಲ್ಲಿ ಈ ಕುರಿತು ಚರ್ಚೆ ಮಾಡಿದ್ದೇವೆ. ಕಾನೂನು ತಜ್ಞರ ಸಲಹೆಯನ್ನು ಪರಿಗಣಿಸಿ, ಈ ವಿಚಾರವಾಗಿ ವರ್ತಕರು ಯಾರೂ ಕೂಡ ಆತಂಕಗೊಳ್ಳಬಾರದೆಂದು ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಇಲ್ಲಿರುವವರೆಲ್ಲಾ 1980ನೇ ಇಸವಿಯಲ್ಲಿ ಈ ಸ್ಥಳ ಹಂಚಿಕೆಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲರೂ ಕ್ರಯಪತ್ರ ಮಾಡಿಸಿಕೊಂಡು ಮೂಲ ಮಾಲೀಕರೇ ಆಗಿರುತ್ತಾರೆ. ಪ್ರತಿವರ್ಷ ಕಂದಾಯವನ್ನೂ ಕಟ್ಟಿದ್ದೇವೆ. ಹೀಗಾಗಿ, ಇಲ್ಲಿ ಬಾಡಿಗೆದಾರರು ಎಂದು ಬಳಸಿರುವುದು ತಪ್ಪು ಮಾಹಿತಿ. ನಾವು ಮಾಲೀಕರೇ ಹೊರತು ಬಾಡಿಗೆದಾರರಲ್ಲ. ಡೋಪ್ಲಿನ್ ಕಾಂಪ್ಲೆಕ್ಸ್ ಎಂದು ಹೆಸರು ಬಂದ ಮೇಲೆ ನಮ್ಮ ಮಾರ್ಕೆಟ್ ರೆಪ್ಯುಟೇಷನ್ ಹಾಳಾಗಿದೆ. ನಮ್ಮ ಬಳಿ ವ್ಯವಹಾರ ಮಾಡಬೇಕೆಂದವರು ಒಂದು ಬಾರಿ ಯೋಚನೆ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಡೋಪ್ಲಿನ್ ಕಾಂಪ್ಲೆಕ್ಸ್ನಲ್ಲಿರುವ 51 ಅಂಗಡಿಗಳಲ್ಲಿ ಶೇ.70ರಷ್ಟು ವರ್ತಕರು ಅಂದಿನ ಮುಡಾಗೆ ಹಣ ಪಾವತಿಸಿ ನೋಂದಣಿ ಮಾಡಿಸಿಕೊಂಡು ಟೈಟಲ್ ಡೀಡ್ ಕೂಡ ಪಡೆದಿದ್ದೇವೆ. ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿಯನ್ನು ನಮ್ಮ ಕಾನೂನು ತಜ್ಞರಿಗೆ ತೋರಿಸಿ ಪರಿಶೀಲನೆ ನಡೆಸಿದ್ದೇವೆ. ಉಚ್ಚ ನ್ಯಾಯಾಲಯದ ತೀರ್ಪಿಗೂ ನಿಮಗೂ ಯಾವುದೇ ಸಂಬಂಧವಿಲ್ಲ ನೀವು ನಿಶ್ಚಿಂತೆಯಿಂದ ಇರಿ ಎಂದು ಸಲಹೆ ನೀಡಿದ್ದಾರೆ ಇಲ್ಲಿ ಶಾಪಿಂಗ್ ಕಾಂಪ್ಲೇಕ್ಸ್ ಮಾಡಿದರೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಇಲ್ಲಿ ನಾವು ಮೂಲ ಮಾಲೀಕರು. ನಮಗೆ ಇಲ್ಲಿ ಎಲ್ಲಾ ಹಕ್ಕುಗಳಿವೆ. ಹಾಗಾಗಿ, ಇಲ್ಲಿ ಕಾಂಪ್ಲೆಕ್ಸ್ ಹೇಗೆ ಮಾಡುತ್ತಾರೆ ಎಂದು ಮರು ಪ್ರಶ್ನಿಸಿದರು.

ಡೋಪ್ಲಿನ್ ಕಾಂಪ್ಲೆಕ್ಸ್ ಬಾಡಿಗೆದಾರರನ್ನು ಮಾರ್ಚ್ ಮೊದಲ ವಾರದಲ್ಲಿ ತೆರವು ಮಾಡಿಸುತ್ತೇವೆ ಎಂದು ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಿಂದ ಸಹಜವಾಗಿಯೇ ನಮ್ಮ ವರ್ತಕರು ಈ ಮೊದಲು ಆತಂಕಗೊಂಡಿದ್ದರು. ಅಲ್ಲದೆ, ಅಂಗಡಿ ಮಾಲೀಕರಾಗಿರುವ ನಮ್ಮನ್ನು ಹೇಗೆ ತೆರವುಗೊಳಿಸುತ್ತಾರೆ ಎಂಬ ಗೊಂದಲ ಕೂಡ ಕಾಡಿತು. ಈ ವಿಚಾರದ ಖಚಿತತೆ ಪಡೆಯಲು ನಿನ್ನೆ ನಮ ಕೆಲವು ವರ್ತಕರು ಎಂಡಿಎ ಕಚೇರಿಗೆ ಹೋದಾಗ ಅಲ್ಲಿನ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ, ಈಗ ನಮ್ಮ ಕಾನೂನು ತಜ್ಞರು ನೀಡಿರುವ ಸಲಹೆಯಿಂದ ನಾವು ನಿರಾತಂಕವಾಗಿದ್ದೇವೆ. ಎಂಡಿಎ ನೀಡಿರುವ ಗಡುವು ನಮಗೆ ಸಂಬಂಧಪಟ್ಟಿದ್ದಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು, ನಾವೆಲ್ಲಾ ಎಂದಿನಂತೆ ವ್ಯಾಪಾರದಲ್ಲಿ ತೊಡಗಿದ್ದೇವೆ ಎಂದು ತಿಳಿಸಿದರು.
ಅಸೋಸಿಯೇಷನ್ನ ಸುದೀಪ್ ಮಾತನಾಡಿ, ಅರ್ಜಿದಾರರಾದ ವಿವೇಕಾನಂದರವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಡ್ಯೂಪ್ಲೀನ್ ಕಾಂಪ್ಲೇಕ್ಸ್ನಲ್ಲಿ ಇರುವವರಲ್ಲಿ ಶೇ.75ರಷ್ಟು ಮೂಲ ಮಾಲೀಕರು. ಇಲ್ಲಿಯವರನ್ನು ಬಾಡಿಗೆದಾರರು ಎಂದು ಬಿಂಬಿಸುತ್ತಿದ್ದಾರೆ. ದಾಖಲೆಗಳ ಪ್ರಕಾರ ಒಂದು ಭಾಗಕ್ಕೆ ಭಕ್ಷಿ ಬಸಪ್ಪಾಜಿ ಅರಸ್ ಅನ್ನುವವರಿಗೆ ಬಾಡಿಗೆ ಕಟ್ಟುತ್ತಿದ್ದೇವು, ಇನ್ನೊಂದು ಭಾಗ ಮನ್ನಾರ್ಸ್ ಎಂಪೋರಿಯಂ ಅವರದ್ದು. ಮತ್ತೊಂದು ಭಾಗ ಭಾವಸಾರ್ ಸೈಕಲ್ ಅವರದ್ದು. ಸಿಐಟಿಬಿ ಅವರು ಇವರಿಂದ ಖರೀದಿ ಮಾಡಿ ಹಂಚಿಕೆ ಮಾಡುತ್ತೇವೆ ಎಂದಿದ್ದರು ಹಾಗೂ ಮಹಾರಾಜರ ಆಜ್ಞೆ ಮೇರೆಗೆ ತುಂಬಾ ಹಳಯವರಿಗೆ ಜಾಗ ನೀಡಲಾಯಿತು ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪತ್ರಿಕೋದ್ಯಮ ಸಮಾಜದ ಆಧಾರ ಸ್ತಂಭ
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಜಗದೀಶ್, ಖಜಾಂಚಿ ಎನ್. ಹರ್ಷ, ಕಾರ್ಯದರ್ಶಿ ಶ್ರೀನಿವಾಸನ್ ಇದ್ದರು.





