ಮೈಸೂರಿನ ಕಲಾ ಮಂದಿರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ʻ ಗೀತೋತ್ಸವ-2025 ʼ ರ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಅಧ್ಯಕ್ಷರಾದ ವೈ ಕೆ ಮುದ್ದುಕೃಷ್ಣ ಮಾತನಾಡಿ ‘ ಸಂಗೀತ ಹಾಗೂ ಸಾಹಿತ್ಯದ ಮಿಲನ ಜನರಲ್ಲಿ ಪ್ರೀತಿ, ಸೌಹಾರ್ದತೆ, ಜನಜೀವನವನ್ನು ಉಲ್ಲೇಖಿಸುವ ಕ್ಷೇತ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
” ಸಾಹಿತ್ಯ ಎಲ್ಲಿರುತ್ತದೆ ಅಲ್ಲಿ ಖಂಡಿತವಾಗಿ ಜಾನಪದ ಇರುತ್ತದೆ. ಜಾನಪದವೇ ಸಾಹಿತ್ಯದ ಬೇರು. ಓದಲು, ಬರೆಯಲು ಬಾರದ, ಅಕ್ಷರದ ಜ್ಙಾನವೇ ಇಲ್ಲದ ನಮ್ಮ ಪೂರ್ವಜರು ತಮ್ಮ ಜೀವನ ಶೈಲಿಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ರಾಷ್ಟ್ರಕವಿ ಕುವೆಂಪು , ಬೇಂದ್ರೆಯವರು ಸೇರಿದಂತೆ ಸಾಹಿತ್ಯ ಲೋಕದ ಅನೇಕ ದಿಗ್ಗಜರು ಜನಜೀವನವನ್ನು ಸಾಹಿತ್ಯಗಳಾಗಿ ಪರಿವರ್ತಿಸಿ ಲೋಕದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. “

” ಸಾಹಿತ್ಯದ ಜೊತೆಗೆ ಸಂಗೀತ ಸೇರಿ ಕೇಳುಗರಿಗೆ ಮುದವನ್ನು ನೀಡುವ ಪ್ರಯತ್ನ ಒಂದಡೆಯಾದರೆ, ಅವರ ಬದುಕಿನ ಸಂಕಷ್ಟಗಳ ಜೊತೆಗೆ ಮಿಲನವಾಗಿ ಅವರ ಪ್ರೀತಿ, ಉತ್ಸಾಹ, ಸೌಹಾರ್ದ ಬದುಕಿಗೆ ಪ್ರೇರಣೆಯಾಗಿದೆ. ಇಂತಹ ಸುಗಮ ಸಂಗೀತ ಕ್ಷೇತ್ರಕ್ಕೆ ವ್ಯಾಪಕ ಬೆಂಬಲ ದೊರೆತದ್ದು ಮೈಸೂರು ಅರಸರಿಂದ. ರಾಜಾಶ್ರಯದಿಂದ ಬೆಳದ ಈ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರ ಹೆಚ್ಚು ಅಭ್ಯುದಯವನ್ನು ಕಂಡು ಸಮಾಜವನ್ನು ತಿದ್ದಿ, ಯುವ ಸಮಾಜವನ್ನು ಸರಿದಿಕ್ಕಿನಲ್ಲಿ ಕೊಂಡೊಯ್ಯುವಲ್ಲಿ ಮತ್ತು ಸ್ವಾತಂತ್ರ್ಯದ ಉದ್ದೇಶ, ಸಂವಿಧಾನದ ಆಶಯ ಅರ್ಥೈಸಿ ಬಹುತ್ವವನ್ನು ರಕ್ಷಣೆ ಮಾಡುತ್ತಿದೆ ” ಎಂದರು.
ಮೈಸೂರು ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ ಮಾತನಾಡಿ ” ಸುಗಮ ಸಂಗೀತವನ್ನು ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಈ ಕಾರ್ಯಕ್ರಮಕ್ಕೆ ₹25 ಲಕ್ಷ ಅನುದಾನವನ್ನು ಒದಗಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರಮ ತೆಗೆದುಕೊಳ್ಳಲಾಗುವುದು ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯಡಿ ‘ ಕಲಾ ತರಬೇತಿ – 2025 ‘ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಮಹದೇವಪ್ಪ

ಕಾರ್ಯಕ್ರಮದಲ್ಲಿ ಪದ್ಮಭೂಷಣ ಡಾ. ಚಂದ್ರಶೇಖರ ಕಂಬಾರ, ಉಪ ಕುಲಪತಿ ನಾಗೇಶ್ ಬೆಟ್ಟಕೋಟೆ, ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ, ನ್ಯಾಯಮೂರ್ತಿ ಗೋಪಾಲಗೌಡ, ಶ್ರೀನಿವಾಸ ಉಡುಪ, ಡಾ. ಸಿದ್ದಲಿಂಗಪಟ್ಟಣ ಶೆಟ್ಟಿ,ಎನ್ ಎಸ್. ಪ್ರಸಾದ್ ಸೇರಿದಂತೆ ಹಲವರು ಇದ್ದರು.





