ಮೈಸೂರು ನಗರದ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಪ್ರವೇಶ ಶುಲ್ಕ ಹೆಚ್ಚಳವಾಗಿದ್ದು, ಅರಮನೆ ನೋಡಲು ಬರುವ ವಿದೇಶಿ ಪ್ರವಾಸಿಗರು ಇನ್ಮುಂದೆ ಭಾರೀ ಮೊತ್ತದ ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ.
ಅರಮನೆ ಪ್ರವೇಶಕ್ಕೆ ₹100 ಇದ್ದ ಶುಲ್ಕವನ್ನು ಅರಮನೆ ಆಡಳಿತ ಮಂಡಳಿ ಏಕಾಏಕಿ ಬರೋಬ್ಬರಿ ₹1,000ಕ್ಕೆ ಏರಿಕೆ ಮಾಡಿದೆ.
ಇದರಿಂದ ವಿದೇಶಿ ಪ್ರವಾಸಿಗರಿಗೆ ತೊಂದರೆಯಾಗಲಿದ್ದು, ಅರಮನೆ ವೀಕ್ಷಣೆಗೆ ವಿದೇಶಿ ಪ್ರವಾಸಿಗರು ಹಿಂದೇಟು ಹಾಕುವ ಸಂಭವವಿದೆ.
ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಪ್ರವೇಶ ಶುಲ್ಕ ಹೆಚ್ಚಿಸಿದ್ದು, ಇದರಿಂದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಸಾಧ್ಯತೆಗಳಿದ್ದು, ಅರಮನೆ ಮಂಡಳಿಯ ತೀರ್ಮಾನಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.
ದುಬಾರಿ ಶುಲ್ಕದ ಪರಿಣಾಮವಾಗಿ ವಿದೇಶಿಗರ ಸಂಖ್ಯೆ ಇಳಿಮುಖವಾದರೆ ಅದರ ನೇರ ಹೊಡೆತ ಟ್ರಾವೆಲ್ಸ್, ಟೂರಿಸಂ, ಹೋಟೆಲ್ ಉದ್ದಿಮೆ ಎಲ್ಲದರ ಮೇಲೂ ಪರಿಣಾಮ ಬೀರಲಿದ್ದು, ಇದನ್ನೇ ನಂಬಿಕೊಂಡಿರುವವರಿಗೆ ತೊಂದರೆಯಾಗಲಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪನವರ ಜನ್ಮದಿನಾಚರಣೆ
ಅರಮನೆ ಆಡಳಿತ ಮಂಡಳಿ ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಏರಿಸುವ ನಿರ್ಧಾರದ ಬಗ್ಗೆ ಯಾರೊಡನೆಯೂ ಚರ್ಚೆ ಮಾಡದೆ ತೀರ್ಮಾನ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮತ್ತೊಮ್ಮೆ ಪರಿಶೀಲನೆ ನಡೆಸಬೇಕೆನ್ನುವ ಆಗ್ರಹ ಕೇಳಿಬರುತ್ತಿದೆ.
ಕೊರೊನಾ ಸಮಯದಲ್ಲಿ ಪ್ರವಾಸೋದ್ಯಮ ಕುಸಿದಿದ್ದು, ಈಗತಾನೇ ಚೇತರಿಕೆ ಕಂಡಿದೆ. ಇದೀಗ ವಿದೇಶಿ ಪ್ರವಾಸಿಗರ ಪ್ರವೇಶ ಶುಲ್ಕ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.





