ಮೈಸೂರು ದಸರಾ ಮಹೋತ್ಸವದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ಸಾಮಾನ್ಯ ದೂರುಗಳಲ್ಲಿ ಸಂಚಾರ ನಿರ್ವಹಣೆಯ ಕೊರತೆಯೂ ಒಂದಾಗಿದೆ. ಅವೈಜ್ಞಾನಿಕ ತಿರುವುಗಳು ಮತ್ತು ಏಕಮುಖ ಸಂಚಾರವು ವಾಹನ ಚಾಲಕರಲ್ಲಿ ಸಾಕಷ್ಟು ಗೊಂದಲವನ್ನು ಸೃಷ್ಟಿಸುತ್ತಿದೆ ಎಂದು ಪ್ರವಾಸಿಗರು ಹೇಳಿದ್ದಾರೆ.
“ಸಂಜೆ 4ರ ಬಳಿಕ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಜಿಲ್ಲೆಯ ವ್ಯಾಪಾರ ಕೇಂದ್ರಕ್ಕೆ ಪ್ರಯಾಣಿಸುವುದು ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಆದರೆ ಆಟೋಗಳು ಮತ್ತು ಬಸ್ಸುಗಳಿಗೆ ಗೊತ್ತುಪಡಿಸಿದ ನಿಲ್ದಾಣಗಳಿಲ್ಲ” ಎಂದು ಪ್ರವಾಸಿಗರು ಆರೋಪಿಸಿದ್ದಾರೆ.
“ವಾಹನ ಸಂಚಾರವನ್ನು ಸುವ್ಯವಸ್ಥಿತಗೊಳಿಲು ಪ್ರಮುಖ ಸ್ಥಳಗಳ ಬಳಿ ಆಟೋ, ಕಾರುಗಳಲ್ಲಿ ಬರುವವರಿಗೆ ಪೊಲೀಸರು ಯಾವುದೇ ಪಿಕ್-ಅಪ್ ಅಥವಾ ಡ್ರಾಪ್ ಪಾಯಿಂಟ್ಗಳನ್ನು ಒದಗಿಸಿಲ್ಲ. ಇದು ಗೊಂದಲದ ಪರಿಸ್ಥಿತಿಗೆ ಕಾರಣವಾಗುತ್ತಿದೆ” ಎಂದು ಬೆಂಗಳೂರಿನ ಪ್ರವಾಸಿಯಬ್ಬರು ಹೇಳಿದ್ದಾರೆ.
“ಹೋಮ್ ಗಾರ್ಡ್ಸ್ ಮತ್ತು ಸಂಚಾರ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದರೂ, ಅವೈಜ್ಞಾನಿಕ ತಿರುವುಗಳು ಮತ್ತು ಏಕಮುಖ ನಿಯಮವು ದೊಡ್ಡ ಸಮಸ್ಯೆಯಾಗಿದೆ. ಮೈಸೂರು ರಸ್ತೆಗಳು ಅಗಲವಾಗಿದ್ದರೂ, ಟ್ರಾಫಿಕ್ ಜಾಮ್ ಸಮಸ್ಯೆಯಿಂದ ರಸ್ತೆಗಿಳಿಯಲು ಎಲ್ಲರೂ ಹೆದರುತ್ತಿದ್ದಾರೆ” ಎಂದು ಹೇಳಿದರು.
ಸಂಜೆ 6 ಗಂಟೆಯ ನಂತರ ಆಟೋ, ಟಾಂಗಾ ಸಂಚಾರ ಸ್ಥಗಿತ
“ನಗರದ ಬೆಳಕು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದರೂ, ಸಂಚಾರ ದಟ್ಟಣೆಯಿಂದಾಗಿ ಅನೇಕ ಆಟೋ ಚಾಲಕರು, ಟಾಂಗಾ ನಿರ್ವಾಹಕರು ಸಂಜೆ 6 ಗಂಟೆಯ ನಂತರ ಸೇವೆಯನ್ನು ನಿಲ್ಲಿಸುತ್ತಿದ್ದಾರೆ. ನಾವು ಪ್ರಮುಖ ವ್ಯಾಪಾರ ಪ್ರದೇಶವನ್ನು ಪ್ರವೇಶಿಸಿದರೆ, ಹೊರಬರುವುದು ಸುಲಭವಲ್ಲ. ಪ್ರತಿ ದಸರಾ ಸಮಯದಲ್ಲೂ ಇದೇ ಸಮಸ್ಯೆ ಇರುತ್ತದೆ. ಹೀಗಾಗಿ ಸಂಜೆ 6 ಗಂಟೆಯ ನಂತರ ಆಟೋ ಸಂಚಾರ ನಿಲ್ಲಿಸುತ್ತೇವೆ” ಎಂದು ಆಟೋ ಚಾಲಕ ರಂಗಸ್ವಾಮಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ
“ಸಂಚಾರ ತಿರುವು ಪ್ರತಿದಿನ ಗಲಾಟೆಗಳಿಗೆ ಕಾರಣವಾಗುತ್ತದೆ. ಈ ವರ್ಷ ತಿರುವುಗಳು ಅವೈಜ್ಞಾನಿಕವಾಗಿವೆ. ಪ್ರಮುಖ ರಸ್ತೆಗಳಲ್ಲಿ ಬಸ್ ಸಂಚಾರ ನಿಷೇಧಿಸುವುದು ಬುದ್ಧಿವಂತಿಕೆಯಲ್ಲ. ನಾವು ಅದನ್ನು ತಿಳಿಸಲು ಪ್ರಯತ್ನಿಸಿದರೆ, ನಮ್ಮ ವಿರುದ್ಧ ಪ್ರಕರಣಗಳು ದಾಖಲಾಗುತ್ತವೆಂದು ನಾವು ಏನೂ ಮಾತನಾಡುವುದಿಲ್ಲ” ಎಂದು ಕೆಎಸ್ಆರ್ಟಿಸಿ ಚಾಲಕರೊಬ್ಬರು ಹೇಳಿದ್ದಾರೆ.




