ಮದ್ಯದಗಂಡಿ ತೆರವಿಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಮೈಸೂರು ಗ್ರಾಮಾಂತರ ಅಬಕಾರಿ ಇಲಾಖೆ ಆಯುಕ್ತರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಜಿಲ್ಲೆಯ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಿದ್ದಯ್ಯನಹುಂಡಿ ಗೇಟ್ ಬಳಿ ಬೇರೆ ಕಡೆಯಿಂದ ಸ್ಥಳಾಂತರ ಮಾಡಿ ಸದರಿ ಸ್ಥಳದಲ್ಲಿ ಮದ್ಯದಂಗಡಿ ತೆರೆದಿರುವುದು ಖಂಡನೀಯ. ಇದನ್ನು ಕೂಡಲೇ ತೆರವುಗೊಳಿಸಬೇಕು” ಎಂದು ರೈತಸಂಘ, ಕಸುವಿನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದರು.
“ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಮಹಿಳೆಯರು ಮದ್ಯದಂಗಡಿ ಮುಖಾಂತರವೇ ಹೋಗುವುದರಿಂದ ಮದ್ಯದಂಗಡಿಯನ್ನು ತೆರವುಗೊಳಿಸದಿದ್ದರೆ ತುಂಬಾ ತೊಂದರೆ ಉಂಟಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸುಮಾರು 16 ದಿನಗಳಿಂದ ಸದರಿ ಗ್ರಾಮಸ್ಥರೊಂದಿಗೆ ಶಾಂತಿಯುತವಾಗಿ ಚಳವಳಿಯನ್ನು ನಡೆಸಿಕೊಂಡು ಬರುತ್ತಿದ್ದು, ಡಿಸೆಂಬರ್ 28ರಂದು ಮದ್ಯದಂಗಡಿಯ ಮಾಲೀಕರು ಹಾಗೂ ಸಿಬ್ಬಂದಿಗಳು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಅನ್ಯವ್ಯಕ್ತಿಗಳನ್ನು ಕರೆದುಕೊಂಡು ಬಂದು ಮಹಿಳಾ ಹೊರಾಟಗಾರರಿಗೆ ಪೊಲೀಸರ ಸಮ್ಮುಖದಲ್ಲೇ ಅಸಭ್ಯವಾಗಿ ವರ್ತಿಸಿದ್ದು, ಕೈ ಹಿಡಿದು ಎಳೆದಾಡಿ ಹಲ್ಲೆಗೆ ಯತ್ನಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ” ಎಂದು ಆರೋಪಿಸಿದರು.
“ಪ್ರತಿಭಟನೆ ಸ್ಥಳದಲ್ಲಿದ್ದ ಅಂಬೇಡ್ಕರ್ ಮತ್ತು ಗಾಂಧೀಜಿ ಭಾವಚಿತ್ರವನ್ನು ಕಳವು ಮಾಡಿದ್ದಾರೆ. ಅಡುಗೆ ಪದಾರ್ಥಗಳ ಸಾಮಾನುಗಳನ್ನು ದೋಚಿದ್ದಾರೆ. ಈ ಸ್ಥಳದಲ್ಲಿ ಮದ್ಯದಂಗಡಿ ಬೇಡವೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ. ಹಾಗೂ ಸುತ್ತಮುತ್ತಲಿನ ಗ್ರಾಮದ ಮಹಿಳಾ ಸಂಘದವರು ಅಬಕಾರಿ ಇಲಾಖೆಗೆ ಪತ್ರವನ್ನೂ ಬರೆದಿದ್ದಾರೆ. ಸಮೀಪದಲ್ಲಿರುವ ಶಾಲಾ-ಕಾಲೇಜು ಮಕ್ಕಳು ತೊಂದರೆಯಾಗುತ್ತದೆಂದು ಮಾಧ್ಯಮದ ಮುಖಾಂತರವೂ ಹೇಳಲಾಗಿದೆ. ಈ ಎಲ್ಲವನ್ನೂ ಪರಿಗಣಿಸಿ ಮದ್ಯದಂಗಡಿ ನಡೆಸಲು ಅವಕಾಶ ಕೊಡಬಾರದು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಅಂಗನವಾಡಿ ಜಾಗ ಒತ್ತುವರಿ ಆರೋಪ; ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
“ಪ್ರತಿಭಟನೆ ಸ್ಥಳದಲ್ಲಿ ನಡೆದ ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ರೈತ ಮುಖಂಡ ಪಿ. ಮರಂಕಯ್ಯ, ಅಧ್ಯಕ್ಷ ಆನಂದೂರು ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಸೇರಿದಂತೆ ಬಹುತೇಕರು ಇದ್ದರು.




