ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಎನ್ ಶಶಿಕುಮಾರ್ ಅವರನ್ನು ನೇಮಿಸಿದ್ದು, ಧಾರವಾಡ ನಗರದ ಜನರಲ್ಲಿ ಕೆಲವು ಆಶಾಭಾವನೆಗಳು ಮೂಡುತ್ತಿವೆ.
ಜುಲೈ 3ರ ಮಂಗಳವಾರ ರಾತ್ರೋರಾತ್ರಿ ರಾಜ್ಯದ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಕಳೆದ ಕೆಲವು ತಿಂಗಳಿನಿಂದ ವಾಣಿಜ್ಯನಗರ ಹುಬ್ಬಳ್ಳಿಯಲ್ಲಿ ಕೊಲೆ, ಸುಲಿಗೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದು ಜನರಲ್ಲಿ ಅತಂಕ ಶುರುವಾಗಿದೆ. ನೇಹಾ, ಅಂಜಲಿ ಕೊಲೆಗಳಿಂದ ಬೇಸತ್ತು ಇಂತಹ ಅಪರಾಧಗಳಿಗೆ ಕೊನೆ ಯಾವಾಗವೆಂದು ಚಿಂತಿಸುತ್ತಿದ್ದ ಸ್ಥಳೀಯ ಜನಕ್ಕೆ ಎನ್ ಶಶಿಕುಮಾರ್ ಪೊಲೀಸ್ ಕಮೀಶನರ್ ಆಗಿ ನೇಮಕವಾಗಿರುವುದರಿಂದ ಅವರಿಂದಲಾದರೂ ಅಪರಾಧಗಳು ಕಡಿಮೆ ಆಗುತ್ತವೆಯೇ ಎಂಬ ಆಶಾಭಾವ ಮೂಡಿದೆಯೆಂದು ಹೇಳಬಹುದು.
ಈ ಮೊದಲಿದ್ದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ವರ್ಗಾವಣೆಯಾಗಿ ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾಗಿರುವ ಎನ್ ಶಶಿಕುಮಾರ್ 2007ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. ಪ್ರಸ್ತುತ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಮಳೆ ಹಾನಿ : ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಎನ್ ಶಶಿಕುಮಾರ್ ಅವರು ದಕ್ಷ ಮತ್ತು ಕಟ್ಟುನಿಟ್ಟಿನ ಆಡಳಿತ ನಡೆಸಿದ್ದರು. ತಮ್ಮ ಜನಸ್ನೇಹಿ ಆಡಳಿತದಿಂದ ಮಂಗಳೂರು ನಗರದ ಜನರ ಮನಗೆದ್ದಿದ್ದ ಇವರು ಹುಬ್ಬಳ್ಳಿ ಧಾರವಾಡ ಮಂದಿಯ ಮನಗೆಲ್ಲುವರೆ? ಅಪರಾಧಗಳಿಗೆ ಕಡಿವಾಣ ಹಾಕುವ ರೂಪರೇಶಗಳನ್ನು ಕಾರ್ಯರೂಪಕ್ಕೆ ತರುವರೆ? ಎಂದು ಕಾದುನೋಡಬೇಕಿದೆ.





