ಕೋಲಾರ: ತಾಲ್ಲೂಕಿನ ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳಿಗೆ ನಿರಾಸೆ ಆಗಿದೆ.
ಸಂಘದ ಕಚೇರಿಯಲ್ಲಿ ಬುಧವಾರ ರಾತ್ರಿ ನಡೆದ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಸೊಸೈಟಿ ಹಾಲಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು ನೇತೃತ್ವದ ತಂಡವು ಮತ್ತೊಂದು ಬಾರಿಗೆ ಗೆದ್ದಿದೆ. ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ. ಏಕೈಕ ಸ್ಥಾನವನ್ನು ಮೈತ್ರಿಕೂಟ ಗೆದ್ದಿದೆ. ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಬೆಂಬಲಿತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖಾಜಿಕಲ್ಲಹಳ್ಳಿ ಮುನಿರಾಜು, ನಮ್ಮ 11 ಅಭ್ಯರ್ಥಿಗಳು ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇವೆ. ಸಂಘಕ್ಕೆ ದೊಡ್ಡ ಕಟ್ಟಡ ಕಟ್ಟಿದ್ದು ಇದಕ್ಕೆ ಕಾರಣ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 1,005 ವೋಟುಗಳು ಚಲಾವಣೆ ಆಗಿವೆ. ಅದರಲ್ಲಿ 125 ವೋಟು ತಿರಸ್ಕೃತವಾಗಿವೆ. 880 ವೋಟುಗಳ ಪೈಕಿ 670 ವೋಟು ನನಗೆ ಬಂದಿದೆ’ ಎಂದರು.
ಎದುರಾಳಿಗಳು ನಿತ್ಯ ಖ್ಯಾತೆ ತೆಗೆಯುತ್ತಿದ್ದರು. ಈ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ ಕಿತ್ತುಕೊಳ್ಳಲು ಸಂಚು ರೂಪಿಸಿದ್ದರು. ಸಂಘದ ಹಣ ಲೂಟ ಮಾಡಲಾಗಿದೆ ಎಂದು ನನ್ನ ಮೇಲೆ ಆರೋಪಿಸಿದರು. ಪ್ರತಿಭಟನೆ ಮಾಡಿದರು. ಆದರೆ, ಈಗ ಜನರು ನಮ್ಮನ್ನು ಗೆಲ್ಲಿಸುವ ಮೂಲಕ ವಿರೋಧಿಗಳನ್ನು ತಿರಸ್ಕರಿಸಿದ್ದಾರೆ. ನನ್ನನ್ನು ಆರೋಪ ಮುಕ್ತರನ್ನಾಗಿ ಮಾಡಿದ್ದಾರೆ ಎಂದರು.
ನನ್ನ ಮೇಲೆ ಸುಳ್ಳು ವಿಡಿಯೊ ಹಾಕಿದ್ದು, ದೂರು ನೀಡಿದ್ದೇನೆ. ನನ್ನನ್ನು ತೇಜೋವದೆ ಮಾಡಿ ಅವಮಾನ ಮಾಡಿದ್ದಾರೆ. 10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಖಾಜಿಕಲ್ಲಹಳ್ಳಿ ಮುನಿರಾಜು ತಿಳಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಜರಿದ್ದು ವಿಜಯೋತ್ಸವ ಆಚರಿಸಿದರು.
ಇದನ್ನು ಓದಿದ್ದೀರಾ..? ಜೈಲಿನಲ್ಲಿ ಮೊದಲನೇ ದಿನ ಕಳೆದ ರಾಜೀವ್ ಗೌಡ
ನರಸಾಪುರ ಸಂಘಕ್ಕೆ ಚುನಾಯಿತರು
ಕಾಂಗ್ರೆಸ್ ಬೆಂಬಲಿತರು: ಖಾಜಿಕಲ್ಲಹಳ್ಳಿ ಮುನಿರಾಜು, ಪೆಮ್ಮಶೆಟ್ಟಹಳ್ಳಿ ಸುರೇಶ್, ಚಂದ್ರೇಗೌಡ (ಅಣ್ಣಯ್ಯ), ಎಂ.ನಾರಾಯಣಸ್ವಾಮಿ, ಕೆ.ಕೆ.ಮಂಜು (ಸಾಮಾನ್ಯ ಕ್ಷೇತ್ರ), ಆಂಜಿನಮ್ಮ, ಜಮುನಾ (ಮಹಿಳಾ ಕ್ಷೇತ್ರ), ಗಣೇಶ್, ಮೋಟಪ್ಪ (ಬಿಸಿಎಂ ಎ ಕ್ಷೇತ್ರ), ಆದಿಮೂರ್ತಿ (ಎಸ್ಸಿ ಕ್ಷೇತ್ರ), ವೆಂಕಟಪ್ಪ (ಎಸ್ಟಿ ಕ್ಷೇತ್ರ).
ಮೈತ್ರಿಕೂಟ: ಚಂದ್ರಶೇಖರ್ (ಷೇರುದಾರರ ಕ್ಷೇತ್ರ–ಸಾಲಗಾರರಲ್ಲದ ಕ್ಷೇತ್ರ)





