ಸುಂದರ ಕರಾವಳಿಯ ಉಡುಪಿ ಜಿಲ್ಲೆಯ ವಾಯು ಗುಣಮಟ್ಟ ದಿನೇದಿನೇ ಹದಗೆಡುತ್ತಿದ್ದು, ವಾಯುಮಾಲಿನ್ಯ ಸೂಚ್ಯಂಕ (AQI) 80 ಕ್ಕೂ ಹೆಚ್ಚು ಮಟ್ಟ ತಲುಪಿರುವ ಈ ಸಂದರ್ಭದಲ್ಲಿ, ದಿನನಿತ್ಯದ ಬದುಕಿನಲ್ಲಿ ಮಾಸ್ಕ್ ಧರಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ಎಚ್ಚರಿಸಿದ್ದಾರೆ.

ಉಡುಪಿಯ ಮಣಿಪಾಲ್ ಇನ್ ನಲ್ಲಿ “ಪರಿಸರ ಉಳಿಸಿ, ಉಡುಪಿ ಬೆಳೆಸಿ” ಎಂಬ ವಿಷಯದಡಿ ನಡೆದ ದುಂಡು ಮೇಜಿನ ಚರ್ಚೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ವಾಯು ಮಾಲಿನ್ಯ ಏರಿಕೆ, ನೀರಿನ ಮಟ್ಟ ಕುಸಿತ, ತ್ಯಾಜ್ಯ ವಿಲೇವಾರಿಯ ಸಮಸ್ಯೆ ಮತ್ತು ಮೀನುಗಾರಿಕೆಯಲ್ಲಿ ಇಳಿಮುಖವಾದ ಉತ್ಪಾದನೆ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು.
ನಿಯಂತ್ರಣವಿಲ್ಲದ ರೆಸಾರ್ಟ್ಗಳ ವಿಸ್ತರಣೆ ಪರಿಸರ ವ್ಯವಸ್ಥೆಗೆ ದೊಡ್ಡ ಹಾನಿ ಮಾಡುತ್ತಿದೆ. CRZ–3 ನಿಂದ CRZ–2 ಗೆ ಮಾನದಂಡ ಬದಲಾವಣೆಯು ಸಮುದ್ರ ಪರಿಸರಕ್ಕೆ ಒಳಿತಲ್ಲ. ಹಲವೆಡೆ ಬಾವಿಗಳ ತಾಜಾ ನೀರು ಉಪ್ಪು ನೀರಿನ ನುಗ್ಗುವಿಕೆಯಿಂದ ಹಾಳಾಗುವ ಅಪಾಯ ಎದುರಾಗಿದೆ ಎಂದು ಹೇಳಿದರು.
ಕೊಡಚಾದ್ರಿ ಕೇಬಲ್ ಕಾರ್ ಮೊದಲಾದ ಪರಿಸರಕ್ಕೆ ಹೊಂದಿಕೊಳ್ಳದ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಪಂಚಾಯಿತಿ ಮಟ್ಟದಿಂದ ನಗರಸಭೆ ಮಟ್ಟದವರೆಗೆ ಪ್ರಾಯೋಗಿಕ ಸಸ್ಥಿರ ಉಡುಪಿ ಕಾರ್ಯಪಥ ರೂಪಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ಅಭಿಯಾನದ ಸಂಯೋಜಕ ನಿಹಾಲ್ ಕಿದಿಯೂರು ರವೀಂದ್ರನಾಥ ಟಗೋರ್ ರವರ ಕವನವನ್ನು ಉಲ್ಲೇಖಿಸಿ, ನಾವು ಮಾಡಬೇಕಾದ ಜವಾಬ್ದಾರಿಯನ್ನು ಸಮಾಜದ ಮೇಲಕ್ಕೆ ಹರಿಸಿ ಬಿಡಲಾಗುತ್ತಿರುವ ಪ್ರವೃತ್ತಿಯೇ ಈ ಸಂಕಷ್ಟಕ್ಕೆ ಕಾರಣವೆಂದು ಅವರು ಎಚ್ಚರಿಸಿದ್ದರು. ಸಮಾಜವೇ ತನ್ನ ಕಲ್ಯಾಣಕ್ಕೆ ಜವಾಬ್ದಾರಿಯಾಗಬೇಕಾದ ಸಂದರ್ಭದಲ್ಲಿ, ಜನರು ತಮ್ಮ ಹೊಣೆಗಾರಿಕೆಯನ್ನು ಸಮಾಜದ ಮೇಲೆ ತಳ್ಳುತ್ತಿರುವುದನ್ನು ಟಾಗೋರ್ ಟೀಕಿಸಿದ್ದರು. ಈ ಮನೋಭಾವವನ್ನು ಪುನರ್ಸ್ಮರಿಸಿಕೊಂಡು, ಪರಿಸರದ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದೇ ಆಗಿದ್ದು, ನಮ್ಮ ನೆರೆಹೊರೆಯೇ ಪರಿಸರ ಸಮಸ್ಯೆಗಳ ವಿರುದ್ದ ಜಾಗೃತಿಯಿಂದ ಹೋರಾಡುವ ಮನೋಭಾವ ಹೊಂದಿರಬೇಕು ಎಂದು ಹೇಳಿದರು.
ಪ್ರೊ. ಅಬ್ದುಲ್ ಅಝೀಝ್ ಅವರು ಸಭೆಯಲ್ಲಿ “ಸಸ್ಥಿರ ಉಡುಪಿ”ಗಾಗಿ ತಯಾರಿಸಿದ ರಸ್ತೆನಕ್ಷೆ ಮತ್ತು ಕಾರ್ಯಪಥವನ್ನು ಪರಿಚಯಿಸಿ, ಈ ಚರ್ಚೆಯನ್ನು ಮುಂದುವರಿಸಿ ಪೂರ್ಣ ಪ್ರಮಾಣದ ಪರಿಸರ ಚಳವಳಿಯನ್ನಾಗಿ ರೂಪಿಸುವುದಾಗಿ ತಿಳಿಸಿದರು.

ಉಡುಪಿಯಲ್ಲಿ ಪರಿಸರ ಸಂರಕ್ಷಣೆಗಾಗಿ ಸೇವೆ ಸಲ್ಲಿಸಿದ ಸಮಾಜಸೇವಕ ನಿತ್ಯಾನಂದ ಓಳಕಾಡು, ಸಂತೋಷ ಕೆಮ್ಮಣ್ಣು, ನಮನ ಶ್ರೀ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ರಾಷ್ಟ್ರ ಮಟ್ಟದ ‘ಆದರ್ಶ ನೆರೆಹೊರೆಯ’ ಅಭಿಯಾನದ ಅಂಗವಾಗಿ ನಡೆಸಿದ ಈ ಚರ್ಚೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು.





