ಶಿಕ್ಷಣ ಎಂದರೆ ಕೇವಲ ಜ್ಞಾನ ಸಂಪಾದನೆಯಲ್ಲ, ಅದು ವ್ಯಕ್ತಿಯ ಚಿಂತನೆ, ನೈತಿಕತೆ ಹಾಗೂ ಜೀವನದ ದೃಷ್ಟಿಕೋನ ರೂಪಿಸುವ ಪ್ರಕ್ರಿಯೆ. ನಿಜವಾದ ಶಿಕ್ಷಣವು ಏನು ಯೋಚಿಸಬೇಕು ಎನ್ನುವುದಕ್ಕಿಂತ ಹೇಗೆ ಯೋಚಿಸಬೇಕು ಎನ್ನುವುದನ್ನು ಕಲಿಸುತ್ತದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಸಿದ್ದು ಪಿ. ಅಲಗೂರ್ ಹೇಳಿದರು.
ಅವರು ಇಂದು ಕಾರ್ಕಳದ ಸದಾನಂದ ಆಡಿಟೋರಿಯಂ ನಿಟ್ಟೆ ಕ್ಯಾಂಪಸ್ನಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಶಿಕ್ಷಣವು ತರಗತಿಯ ಕೋಣೆಗೆ ಸೀಮಿತವಲ್ಲ ಅದು ಅಂಕ ಅಥವಾ ಪ್ರಮಾಣಪತ್ರಗಳಿಂದ ಅಳೆಯಲಾಗದ ಪರಿವರ್ತನೆ. ಕೃತಕ ಬುದ್ಧಿಮತ್ತೆ ಹಾಗೂ ಡೇಟಾ ಯುಗದಲ್ಲಿ ಜ್ಞಾನ ಅಗಾಧವಾಗಿದ್ದು, ತಂತ್ರಜ್ಞಾನವು ವರ್ಚುವಲ್ ಮತ್ತು ನೈಜ ಜೀವನದ ನಡುವಿನ ಅಂತರವನ್ನು ಅಸ್ಪಷ್ಟಗೊಳಿಸಿದೆ. ಹೊಸ ಶತಮಾನದಲ್ಲಿ ಡಿಜಿಟಲ್ ಸಾಕ್ಷರತೆಯ ಜೊತೆಗೆ ನೈತಿಕ ಸ್ಪಷ್ಟತೆ, ತಾಂತ್ರಿಕ ಪರಿಣತಿಯೊಂದಿಗೆ ಭಾವನಾತ್ಮಕ ಬುದ್ಧಿವಂತಿಕೆ, ಜಾಗತಿಕ ಅರಿವಿನೊಂದಿಗೆ ಸ್ಥಳೀಯ ಬದ್ಧತೆಯೂ ಅಗತ್ಯ ಎಂದು ಹೇಳಿದರು.

ತಂತ್ರಜ್ಞಾನ ತಟಸ್ಥವಾಗಿದ್ದು, ಅದು ಪ್ರಗತಿಗೆ ಪೂರಕವಾಗಬೇಕಾದರೆ ಮಾನವ ಉದ್ದೇಶ, ಸೃಜನಶೀಲತೆ ಮತ್ತು ಬುದ್ಧಿವಂತಿಕೆ ಅವಶ್ಯ. ತಂತ್ರಜ್ಞಾನವನ್ನು ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ, ಇಂಧನ, ಕೃಷಿ, ಆರೋಗ್ಯ ಹಾಗೂ ಸಮಾನ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಬಳಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ (ಆಸ್ಪತ್ರೆ ನಿರ್ವಹಣೆ) ಡಾ. ಶಾಂತಾರಾಮ ಶೆಟ್ಟಿ, ವಿಜ್ಞಾನವು ಆವಿಷ್ಕಾರದ ಕಲ್ಪನೆಯನ್ನು ನೀಡುತ್ತದೆ, ತಾಂತ್ರಿಕ ಜ್ಞಾನವು ಉಪಕರಣದ ಸೃಷ್ಟಿಗೆ ನೆರವಾಗುತ್ತದೆ. ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ನಡತೆ ನೀಡುವುದು ಶಿಕ್ಷಣ ಸಂಸ್ಥೆಯ ಕರ್ತವ್ಯ. ಪೋಷಕರು, ಗುರುಗಳು, ವಿದ್ಯಾಲಯ ಮತ್ತು ಜನ್ಮಭೂಮಿ ನಮ್ಮ ಏಳಿಗೆಗೆ ಕಾರಣ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ವೇದಿಕೆಯಲ್ಲಿ ಸಹಕುಲಾಧಿಪತಿ (ಆಡಳಿತ) ವಿಶಾಲ್ ಹೆಗ್ಡೆ, ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಡಾ. ಚಂದ್ರಶೇಖರ್ ಶೆಟ್ಟಿ, ಕುಲಸಚಿವ ಡಾ. ಹರ್ಷಾ ಹಾಲಹಳ್ಳಿ, ಪರೀಕ್ಷಾಂಗ ಮುಖ್ಯಸ್ಥ ಡಾ. ಪ್ರಸಾದ್ ಬಿ. ಶೆಟ್ಟಿ, ವಿವಿಧ ಕಾಲೇಜುಗಳ ಮುಖ್ಯಸ್ಥರು ಹಾಗೂ ಎಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.
ಆಫ್ ಕ್ಯಾಂಪಸ್ ಸೆಂಟರ್ನ ಪರೀಕ್ಷಾ ನಿಯಂತ್ರಕ ಡಾ. ಸುಬ್ರಹ್ಮಣ್ಯ ಭಟ್ ಕೆ. ಘಟಿಕೋತ್ಸವ ಮೆರವಣಿಯ ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಸುವರ್ಣ ಪದಕ ವಿಜೇತರನ್ನು ಗೌರವಿಸಲಾಯಿತು. ಒಟ್ಟು 646 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು ಇದರಲ್ಲಿ 38 ಮಂದಿ ಎಂ.ಟೆಕ್., 178 ಮಂದಿ ಎಂಸಿಎ, 179 ಮಂದಿ ಎಂಬಿಎ ಪದವಿ ಪಡೆದರು. ಪದವಿ ವಿಭಾಗದಲ್ಲಿ 52 ಬಿಬಿಎ, 54 ಬಿಕಾಂ, 51 ಬಿಕಾಂ (ಪ್ರೊಫೆಶನಲ್), 65 ಬಿಸಿಎ ಹಾಗೂ 29 ಬಿಎಸ್ಸಿ (ಡೇಟಾ ಅನಾಲಿಟಿಕ್ಸ್) ವಿದ್ಯಾರ್ಥಿಗಳಿಗೆ ಪದವಿಗಳು ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಡಾ. ಸುಧೀರ್ ರಾಜ್ ಕೆ. ಹಾಗೂ ಪ್ರೇಮಿತಾ ಕಾಮತ್ ನಿರೂಪಿಸಿದರು.






