ರಾಜ್ಯದಲ್ಲಿ ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ರೈತಪರ ಯೋಜನೆಗಳು ಜಾರಿಯಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ದಾವಣಗೆರೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಅತಿವೃಷ್ಟಿಯಿಂದ ರೈತರ ಬೆಳೆ ನಾಶವಾದಾಗಲೂ ಕಾಂಗ್ರೆಸ್ ಸರ್ಕಾರ ಸ್ಪಂದಿಸಿಲ್ಲ. ಅಷ್ಟು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೂ ಇಲಾಖೆಗಳ ಸಚಿವರು ಪರಿಹಾರ ಒದಗಿಸಲು ಮುಂದೆ ಬಂದಿಲ್ಲ. ಸಾಲದು ಎಂಬಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತಪರ ಯೋಜನೆಗಳಿಗೆ ಕಲ್ಲು ಹಾಕುತ್ತಿದೆ. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರೈತರ ಅಳಲು ಕೇಳಲು ಮುಂದಾಗುತ್ತಿಲ್ಲ. ಟಿಬಿ ಡ್ಯಾಂ ಸೇರಿದಂತೆ ಹಲವು ಅಣೆಕಟ್ಟುಗಳ ಗೇಟ್ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಂಡಿಲ್ಲ. ಅದರಿಂದ ಬೆಳೆಗೆ ಸರಿಯಾದ ನೀರು ಪೂರೈಕೆ ಆಗಿಲ್ಲ. ಒಂದೆಡೆ ಅತಿವೃಷ್ಟಿಯಾದರೆ, ಇನ್ನೊಂದೆಡೆ ಅನಾವೃಷ್ಟಿ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರ ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಚುನಾವಣೆಗಳು ಹತ್ತಿರ ಬಂದಾಗ ಗ್ಯಾರಂಟಿ ಹಣ ಪಾವತಿಸಿ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ 45 ಲಕ್ಷ ಮೆ.ಟನ್ ಮೆಕ್ಕೆಜೋಳ ದಾಸ್ತಾನು ಇದೆ. ಆದರೆ ಸರ್ಕಾರ, ಖರೀದಿ ಕೇಂದ್ರವನ್ನೂ ತೆರೆಯದೆ, ಬೆಂಬಲ ಬೆಲೆಯನ್ನೂ ನೀಡದೆ ರೈತರಿಗೆ ಅನ್ಯಾಯ ಎಸಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಡಿಸೆಂಬರ್ 1 ಹಾಗೂ 2ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತರು ಹೋರಾಟಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.


“ಮುಂದಿನ ಬೆಳಗಾವಿ ಅಧಿವೇಶನದಲ್ಲಿ ರೈತರೇ ಇದಕ್ಕೆ ತಕ್ಕ ಪಾಠ ಕಲಿಸಬೇಕು. ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕು. ರೈತರ ಹೋರಾಟ ವಿಧಾನಸೌಧ ತಲುಪುವ ಮುನ್ನ, ಅಧಿವೇಶನಕ್ಕೆ ಮುನ್ನ ರೈತರ ಸಮಸ್ಯೆ ಬಗೆಹರಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ದಾವಣಗೆರೆ | ಅಂತರ್ಜಾತಿ ವಿವಾಹ ಅಂದು ಕಲ್ಯಾಣ ಕ್ರಾಂತಿಗೆ ಇಂದು ಮರ್ಯಾದಾ ಹತ್ಯೆಗೆ ದಾರಿ: ಎಚ್ಎಲ್ ಪುಷ್ಪ
ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ, “ಯಡಿಯೂರಪ್ಪನವರು ಅಧಿಕಾರದಲ್ಲಿದ್ದ ಅಂದಿನಿಂದಲೂ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ನೀಡಿದ್ದರು. ರೈತರ ಪರವಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ಇದರ ವಿರುದ್ಧ ಮುಂದೆ ಬೇರೆ ಬೇರೆ ರೀತಿಯ ಹೋರಾಟ ಪ್ರಾರಂಭವಾಗಲಿದೆ” ಎಂದು ಎಚ್ಚರಿಸಿದರು.
ಬಿಜೆಪಿ ನಾಯಕರಾದ ಲೋಕಿಕೆರೆ ನಾಗರಾಜ್, ಮಾಜಿ ಸಚೇತಕ ಶಿವಯೋಗಿಸ್ವಾಮಿ, ಅಜಯ್ ಕುಮಾರ್, ಸಿಟಿ ರವಿ, ರೇಣುಕಾಚಾರ್ಯ, ಸತೀಶ್, ಜಿಲ್ಲಾಧ್ಯಕ್ಷ ರಾಜಶೇಖರ , ಮಾಜಿ ಶಾಸಕ ಎಎಸ್ ನಡಹಳ್ಳಿ, ಚಂದ್ರಶೇಖರ ಪೂಜಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





