ಕನ್ನಡಿಗರು ಹೃದಯವಂತರು, ಹಾಗಂತ ನಮ್ಮ ಭಾಷೆ, ನೆಲ, ಜಲದ ತಂಟೆಗೆ ಬಂದರೆ ಔದಾರ್ಯದಿಂದ ಮೆರೆಯುವ ಅಗತ್ಯ ಇಲ್ಲ. ಕನ್ನಡ ಭಾಷೆ , ನಾಡು, ನುಡಿ ರಕ್ಷಣೆಗೆ ಸದಾ ಸಿದ್ಧರಾಗಬೇಕಾಗಿದೆ ಎಂದು ತಾಲೂಕು ಕಸಾಪ ಉಪಾಧ್ಯಕ್ಷ ಬಸವಕುಮಾರ ಕವಟೆ ಹೇಳಿದರು.
ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಬೇಲೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ʼಕನ್ನಡ ಕಹಳೆʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗಡಿ ಭಾಗದಲ್ಲಿ ಅನ್ಯಭಾಷೆ ಹಾವಳಿ ಹೆಚ್ಚಾಗಿದೆ, ಈ ಮಧ್ಯೆ ನಮ್ಮ ಭಾಷೆ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಕಸಾಪ ರಾಜ್ಯ ಪ್ರತಿನಿಧಿ ಮಲ್ಲಮ್ಮ ಆರ್. ಪಾಟೀಲ್ ವಿಶೇಷ ಉಪನ್ಯಾಸ ನೀಡಿ, “ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿಜ್ಞಾನಿಗಳು, ಉನ್ನತ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಹಲವಾರು ಜನ ಉನ್ನತ ಹುದ್ದೆಗಳಲ್ಲಿದ್ದಾರೆ. ಅನ್ಯ ಭಾಷೆಯಲ್ಲಿ ಕಲಿತರು ನಮಗೆ ನೋವು ಹಂಚಿಕೊಳ್ಳುವುದು ಮಾತ್ರಭಾಷೆಯಲ್ಲಿ ಮಾತ್ರ, ಇಂತಹ ವಿಭಿನ್ನ ಸಂಸ್ಕೃತಿ ಹೊಂದಿರುವ ಕನ್ನಡ ನಾಡು ನುಡಿ ಹಾಗೂ ಭಾಷೆ ಕಾಪಿಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ ಹಾವಣ್ಣ ಅವರು ಮಾತನಾಡಿ, “ಕನ್ನಡ ಭಾಷೆಯ ಬಳಕೆಯಿಂದ ಭಾವನೆ ಹಂಚಿಕೊಳ್ಳಲು ಸಾಧ್ಯ, ಕನ್ನಡ ನುಡಿಗೆ ತನ್ನದೇ ಆದಂತಹ ಗೌರವ ಇದೆ. ಕನ್ನಡ ನುಡಿ ಸರಳವೂ ಸುಂದರವೂ ಆಗಿದೆ. ನವೆಂಬರ್ ತಿಂಗಳಲ್ಲಿ ಕಸಾಪ ವತಿಯಿಂದ ʼಕನ್ನಡ ಕಹಳೆʼ ಎಂಬ ವಿನೂತನ ಕಾರ್ಯಕ್ರಮ ತಾಲ್ಲೂಕಿನ ಪ್ರೌಢ ಶಾಲೆಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಗಡಿ ಗ್ರಾಮಗಳಲ್ಲಿ ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿಶ್ವ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ: ವಿಜಯರೆಡ್ಡಿ
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕರುಣಾಬಾಯಿ ಪರೆಪ್ಪಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಮುಖ್ಯಗುರು ಶರಣಬಸಪ್ಪ ಬಿರಾದರ, ಸೇರಿದಂತೆ ಪ್ರಮುಖರಾದ ಡಾ.ಧರ್ಮೇಂದ್ರ ಭೋಸ್ಲೆ, ಮಾಧವ ಸೂರ್ಯವಂಶಿ, ಮಾರುತಿ ಬೇಂದ್ರೆ, ಅಶೋಕ ರಾಜೋಳೆ ಹಾಗೂ ಕಸಾಪದ ಪದಾಧಿಕಾರಿಗಳಾದ ಸಚಿನ ಬಿರಾದಾರ, ಸಚಿನ ವೀರಣ್ಣ ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




