ಮೈಸೂರು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡುಮಾದನಹಳ್ಳಿ ಸರ್ವೆ ನಂಬರ್ 60, 68, 8, ಸರ್ಕಾರಿ ಜಮೀನಾಗಿದ್ದು, ಈ ಜಮೀನನ್ನು ರೈತರು 1960 ರಿಂದ ಉಳುಮೆ ಮಾಡುತ್ತಿದ್ದಾರೆ. ಆದರೇ, ಈಗ ನಿಮ್ಹಾನ್ಸ್ ಹಾಗು ಆಶ್ರಯ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಬಲವಾಗಿ ಖಂಡಿಸಿ ಪ್ರತಿಭಟನೆಗಿಳಿದಿದೆ.
ರೈತರಿಗೆ ಸಾಗುವಳಿ ನೀಡಿ, ಕಂದಾಯವನ್ನು ಕಟ್ಟಿಸಿಕೊಂಡು 1985ರಲ್ಲಿ ಪುನಃ ವಾಪಸ್ ಪಡೆದು ಗೋಮಾಳ ಎಂದು ಆರ್ಟಿಸಿಯಲ್ಲಿ ನಮೂದಿಸಿ ಕೊಂಡಿರುವುದಷ್ಟೇ. ಅಂದಿನಿಂದ ಇಂದಿನವರೆಗೂ ರೈತರು ಆ ಜಮೀನುಗಳಲ್ಲಿ ವ್ಯವಸಾಯ ಮಾಡುತಿದ್ದು, ತಂಗಿನ ಮರಗಳನ್ನು ಬೆಳೆಸಿರುತ್ತಾರೆ ಮತ್ತು ಭತ್ತ, ಹೈನುಗಾರಿಕೆಗೆ ಮಾಡುತ್ತಿದ್ದಾರೆ.
ಯಾವುದೇ ಮಾಹಿತಿ ನೀಡದೆ ಏಕಾಏಕಿ ಕಳೆದ ತಿಂಗಳುಗಳಿಂದ 20 ಎಕರೆ ಜಮೀನನ್ನು ನಿಮಾನ್ಸ್ ಗೆ ಮತ್ತು ಆಶ್ರಯಕ್ಕೆ ಮಂಜೂರು ಮಾಡಿ ಭೂ ಸ್ವಾಧೀನ ಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾದಾಗ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗುಡುಮಾದನಹಳ್ಳಿ ರೈತ ಹೋರಾಟಗಾರರು ಈ ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಆಗಮಿಸಿದ ಮೈಸೂರು ತಾಲ್ಲೂಕು ತಹಶೀಲ್ದಾರ್ ರವರು ಇದು ಸರ್ಕಾರಿ ಗೋಮಾಳವಾಗಿದ್ದು ಇದನ್ನು ನಿಮಾನ್ಸ್ ಗೆ ಕೊಟ್ಟಿದ್ದೇವೆ, ಜಾಗ ಬಿಟ್ಟು ಕೊಡಿ ಎಂದು ಪ್ರತಿಭಟನಾಕಾರರನ್ನು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರು ಈ ಜಾಗವನ್ನು ಯಾರು ಉಳುಮೆ ಮಾಡುತ್ತಿದ್ದಾರೆ ಎಂದು ಸರ್ವೆ ಆಗಲಿ. ಅದನ್ನ ಬಿಟ್ಟು ಸರ್ಕಾರ ರೈತರಿಗೆ ಅನ್ಯಾಯ ಮಾಡುವುದನ್ನು ಖಂಡಿಸುತ್ತೇವೆ. ಇದಕ್ಕೆಲ್ಲ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಾಗ ತಹಶೀಲ್ದಾರ್ ರವರು ಒಪ್ಪಿ ಸರ್ವೇ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಪ್ರಸ್ತಾವಿತ ಯೋಜನೆಯ ಸಾಧಕ-ಬಾಧಕಗಳೇನು?
ಪ್ರತಿಭಟನೆಯಲ್ಲಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಗುಡುಮಾದನಹಳ್ಳಿ ರೈತ ಸಂಘದ ಘಟಕ ಅಧ್ಯಕ್ಷ ಕುಮಾರ್, ಅಣ್ಣಯ್ಯ, ರಾಜೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.





