ಡ್ರಗ್ಸ್ ದಾಸರ ಕುರಿತು ಅಥವಾ ಡ್ರಗ್ಸ್ ಇರುವುದನ್ನು ಕಂಡವರು ತಮ್ಮ ಪಾಡಿಗೆ ತಾವು ಇರುವುದೇ ಅನಾಹುತಗಳಿಗೆ ಕಾರಣವಾಗಿದೆ. ನಮ್ಮ ಕರ್ತವ್ಯದ ಜತೆಗೆ ಸಮಾಜದ ಒಳಿತಿಗಾಗಿ ದುಡಿಯುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದೇವೆ, ಅದರಿಂದ ಪೊಲೀಸ್ ಎನ್ನುವಂತಹ ಒಂದು ಸಮಾಜದ ಆಯುಧ ತುಕ್ಕು ಹಿಡಿಯದಂತೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ಹೇಳಿದರು.
ಹಾಸನ ಜಿಲ್ಲೆಯ ಸಕಲೇಶಪುರ ನಗರದಲ್ಲಿ ಹಮ್ಮಿಕೊಂಡಿದ್ದ ʼಡ್ರಗ್ಸ್ ಮುಕ್ತ ಸಕಲೇಶಪುರʼ ಎರಡನೇ ವರ್ಷದ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಡ್ರಗ್ಸ್ ಸಂಬಂಧಿತ ವಿಷಗಳು ಕಂಡುಬಂದರೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸದೆ, ಮೌನ ವಹಿಸಿದರೆ ಪರೋಕ್ಷವಾಗಿ ನೀವೂ ಕೂಡ ಡ್ರಗ್ಸ್ ಸೇವನೆಗೆ ಪ್ರಚೋದಿಸಿದಂತಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಇಲಾಖೆಯೊಂದಿಗೆ ಸಹಕರಿಸಬೇಕು” ಎಂದು ಸಾರ್ವಜನಿಕರಲ್ಲಿ ಕೋರಿದರು.
ಬಿಇಒ ಪುಷ್ಪ ಮಾತನಾಡಿ, “ನನ್ನ ಸ್ನೇಹಿತರ ಮನೆಯಲ್ಲಿಯೇ ಅವರ ಮಗ ನಶೆಗೆ ದಾಸನಾಗಿದ್ದು, ತಂದೆ ತಾಯಿಯನ್ನು ವಿಪರೀತವಾಗಿ ಕಾಡುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ನಾವೂ ಕೂಡ ಪ್ರತಿ ಶಾಲೆಗಳಲ್ಲಿಯೂ ವ್ಯಸನ ಮುಕ್ತದ ಕುರಿತು ಶಿಕ್ಷಣ ನೀಡುವಂತಹ ಕಾರ್ಯಗಳನ್ನು ಕೈಗೊಂಡಿದ್ದೇವೆ. ಅದೇ ರೀತಿ ಮನೆಯಲ್ಲಿಯೂ ಕೂಡ ಪೋಷಕರು ಮಕ್ಕಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳುವ ಮೂಲಕ ವ್ಯಸನಮುಕ್ತಗೊಳಿಸಲು ಮುಂದಾಗಬೇಕು” ಎಂದು ಹೇಳಿದರು.
ಅಲಿಬಾಬಾ ಮಾತನಾಡಿ, “ನಮ್ಮ ಸಮಾಜದಲ್ಲಿ ಒಳ್ಳೆಯವರು ಸುಮ್ಮನಿದ್ದು, ಕೆಟ್ಟವರಿಗೆ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುವುದರಿಂದಲೇ ಇಂದು ಹೆಚ್ಚಿನ ಯುವಜನರು ನಶೆಗೆ ದಾಸರಾಗಿದ್ದಾರೆ. ಸಂವಿಧಾನದ ಪೀಠಿಕೆಯಲ್ಲಿ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಎನ್ನುವಂತಹ ಅಂಶಗಳಿವೆ. ಆದರೆ ವ್ಯಸನಗಳಿಗೆ ದಾಸರಾದಾಗ ಈ ಮೂರೂ ಪದಗಳ, ಸಂಬಂಧಗಳ ಅರ್ಥವೇ ಇಲ್ಲದಂತಾಗುತ್ತದೆ. ವ್ಯಸನಿಗಳಿಗೆ ಇದರ ಅರಿವೇ ಇಲ್ಲದಂತಾಗುತ್ತದೆ” ಎಂದರು.
“ಕಾನೂನಾತ್ಮ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಡ್ರಗ್ಸ್ ಮಾರಾಟಗಾರರಿಗೆ ಮತ್ತು ವ್ಯಸನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವ್ಯಸನ ಮುಕ್ತ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ
ಅತಿಥಿಗಳು ಉಪವಿಭಾಗಾಧಿಕಾರಿ ಎಚ್ ಡಿ ರಾಜೇಶ್, ತಹಶೀಲ್ದಾರ್ ಸುಪ್ರೀತ, ಡಿವೈಎಸ್ಪಿ ಪ್ರಮೋದ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಧರ್ಮಸ್ಥಳ ನಶಾ ಮುಕ್ತ ಕೇಂದ್ರದ ಡಾ. ನವೀನ್ ಚಂದ್ರಶೇಕರ್ ಇದ್ದರು. ಪತ್ರಕರ್ತ ಮಲ್ನಾಡ್ ಮೆಹಬೂಬ್ ಸ್ವಾಗತಿಸಿದರು, ಜೈ ಭೀಮ್ ಮಂಜು ಕಾರ್ಯಕ್ರಮದ ನಿರೂಪಣೆ ಮಾಡಿದರು.





