ಸಿನಿಮೀಯ ರೀತಿಯಲ್ಲಿ ಕುಖ್ಯಾತ ಆರೋಪಿಯನ್ನು ಹೆಡ್ ಕಾನ್ಸ್ಟೇಬಲ್ ಓರ್ವರು ಬಂಧನ ಮಾಡಿರುವ ಘಟನೆ ಬೆಂಗಳೂರಿನ ಸದಾಶಿವ ನಗರದಲ್ಲಿ ನಡೆದಿದೆ.
ಮಂಜೇಶ್ ಅಲಿಯಾಸ್ ಚೌಟ್ರಿ ಮಂಜ, ಹೊಟ್ಟೆ ಮಂಜ ಬಂಧಿತ ಆರೋಪಿ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಆರೋಪಿಯನ್ನು ಹಿಂಬಾಲಿಸಿ ಬಂಧಿಸಿದ್ದಾರೆ.
ಸಿಗ್ನಲ್ ನಲ್ಲಿ ಬೈಕ್ ಅಡ್ಡಗಟ್ಟಿದಾಗ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಕಾಲುಬಿಗಿ ಹಿಡಿದು ಜಗ್ಗಿದ ಕೊರಟಗೆರೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯ ಎಂಬುವರನ್ನ ರಸ್ತೆಯಲ್ಲಿ 20 ಮೀಟರ್ ಎಳೆದೊಯ್ಯಲು ಯತ್ನಿಸಿದ್ದಾನೆ. ಆದರೂ, ಕೈಬಿಡದ ಪೊಲೀಸ್ ಸಿಬ್ಬಂದಿ, ಕೊನೆಗೂ ಸಾರ್ವಜನಿಕರು ಹಾಗೂ ಇತರೆ ಸಿಬ್ಬಂದಿಯ ನೆರವಿನಿಂದ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ದೃಶ್ಯ ಸಿಗ್ನಲ್ನಲ್ಲಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ವೃದ್ಧಾಪ್ಯ ವೇತನ ಕೊಡಿಸುವುದಾಗಿ ವೃದ್ದೆಯ ಮೖಮೇಲಿದ್ದ ಒಡವೆಗಳನ್ನ ದೋಚಿಕೊಂಡು ಪರಾರಿಯಾಗಿದ್ದನು. ಆರೋಪಿ ಹೊಟ್ಟೆ ಮಂಜನ ವಿರುದ್ಧ ತುಮಕೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇರಿದಂತೆ ರಾಜ್ಯಾದ್ಯಂತ 32 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಪೊಲೀಸ್ ಸಿಬ್ಬಂದಿ ದೊಡ್ಡಲಿಂಗಯ್ಯ ಅವರ ಕಾರ್ಯಕ್ಕೆ ತುಮಕೂರು ಎಸ್. ಪಿ. ಅಶೋಕ್ ಕೆ.ವಿ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






