ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಹಳಿಯಾಳ ತಾಲೂಕುಗಳಲ್ಲಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದು, ಓಸಿ ಜೂಜಾಟ ಹಾಗೂ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಂಡಗೋಡ ಪೊಲೀಸರು ಎರಡು ಪ್ರತ್ಯೇಕ ಮಟ್ಕಾ ದಾಳಿಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದರೆ, ಹಳಿಯಾಳದಲ್ಲಿ ಅಬಕಾರಿ ಕಾಯ್ದೆಯಡಿ ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ಆಲಹಳ್ಳಿ ಕ್ರಾಸ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಂತು ‘ಒಂದು ರೂಪಾಯಿಗೆ 80 ರೂಪಾಯಿ’ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆದು ಓಸಿ ಜೂಜಾಟ ನಡೆಸುತ್ತಿದ್ದ ಹಜರತಲಿ ಮಹಬೂಬಸಾಬ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದಾಳಿ ವೇಳೆ 790 ರೂಪಾಯಿ ನಗದು ಹಾಗೂ ಜೂಜಾಟದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಗ್ರಾಮದ ಬೊಮ್ಮನಳ್ಳಿ ಕ್ರಾಸ್ ಬಳಿ ಇಂತಹದ್ದೇ ಕೃತ್ಯದಲ್ಲಿ ತೊಡಗಿದ್ದ ನೀಲಪ್ಪ ಹುಚ್ಚಪ್ಪ ವರ್ದಿ ಎಂಬ 61 ವರ್ಷದ ವ್ಯಕ್ತಿಯನ್ನು ಸಿಪಿಐ ರಂಗನಾಥ ಮತ್ತು ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದು, ಆತನಿಂದ 700 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಪಾಳಾ ಗ್ರಾಮದಲ್ಲಿ ಅವ್ಯಾಹತವಾಗಿ ಸಾಗಿರುವ ಮಟ್ಕಾ ದಂಧೆ: ಪೊಲೀಸರು ಒಂದೆಡೆ ದಾಳಿ ನಡೆಸುತ್ತಿದ್ದರೂ, ಮುಂಡಗೋಡು ತಾಲೂಕಿನ ಪಾಳಾ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಟ್ಕಾ ದಂಧೆ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗಲು ಹೊತ್ತಿನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣ ಅಂಗಡಿಗಳನ್ನು ತೆರೆದು ಜನರನ್ನು ಕರೆದು ಹಣದ ಆಸೆ ತೋರಿಸಿ ಈ ದಂಧೆ ನಡೆಸಲಾಗುತ್ತಿದೆ. ಕಷ್ಟಪಟ್ಟು ದುಡಿದ ಕೂಲಿ ಹಣವನ್ನೆಲ್ಲ ಅಮಾಯಕ ಜನರು ಒಂದು ರೂಪಾಯಿಗೆ 80 ರೂಪಾಯಿ ಸಿಗುತ್ತದೆ ಎಂಬ ಆಸೆಗೆ ಬಿದ್ದು ಈ ಜೂಜಿನ ನಂಬರ್ಗಳಿಗೆ ಸುರಿಯುತ್ತಿದ್ದಾರೆ. ಇದರಿಂದ ನೂರಾರು ಕುಟುಂಬಗಳು ಬೀದಿಗೆ ಬರುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ ? ಭಟ್ಕಳ | ಕರ್ತವ್ಯ ಲೋಪ ಆರೋಪ: ಗ್ರಾಮೀಣ ಠಾಣೆಯ ಸಿಪಿಐ ಹಾಗೂ ಹೆಡ್ ಕಾನ್ಸ್ಟೇಬಲ್ ಅಮಾನತು!
ಕಠಿಣ ಕ್ರಮಕ್ಕೆ ಆಗ್ರಹ: ಪಾಳಾ ಭಾಗದಲ್ಲಿ ಬೇರೂರಿರುವ ಈ ಮಟ್ಕಾ ದಂಧೆಕೋರರ ವಿರುದ್ಧ ಪೊಲೀಸರು ಕೇವಲ ಹೆಸರಿಗಷ್ಟೇ ಪ್ರಕರಣ ದಾಖಲಿಸದೆ, ಅವರಲ್ಲಿ ಕಾನೂನಿನ ಭಯ ಹುಟ್ಟುವಂತೆ ಕಠಿಣ ಕ್ರಮ ಜರುಗಿಸಬೇಕಿದೆ. ಈ ಭಾಗದಲ್ಲಿ ಮಟ್ಕಾ ದಂಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಬಡವರ ಬದುಕನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಪೋಲಿಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಹಳಿಯಾಳದಲ್ಲಿ ಅಕ್ರಮ ಮದ್ಯ ಸೇವನೆಗೆ ಕಡಿವಾಣ: ಹಳಿಯಾಳದ ಮುರ್ಕವಾಡ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅನುವು ಮಾಡಿಕೊಡುತ್ತಿದ್ದ ಅಡ್ಡೆಗಳ ಮೇಲೆ ಹಳಿಯಾಳ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕಾಶ ಹರಿಶ್ಚಂದ್ರ ಶೇಡೆಕಾರ, ಸಂತೋಷ ಬಾಲಕೃಷ್ಣ ಶೆಡೆಕರ ಹಾಗೂ ಸಂಜು ಯಲ್ಲಪ್ಪ ಪಿಂಪಳ್ಕರ್ ಎಂಬುವವರು ತಮ್ಮ ಅಂಗಡಿ ಹಾಗೂ ಗೂಡಂಗಡಿಗಳ ಪಕ್ಕದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಬಂಧಿತರಾಗಿದ್ದಾರೆ. ಇವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪಿಎಸ್ಐ ಕೃಷ್ಣಗೌಡ ಅರಕೇರಿ ಮತ್ತು ಬಸವರಾಜ ಮಬನೂರ ಅವರು ಪ್ರಕರಣ ದಾಖಲಿಸಿದ್ದಾರೆ.





