ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಪಡಿತರದಾರರಿಗೆ ಕಳಪೆ ಗುಣಮಟ್ಟದ ರಾಗಿ ವಿತರಿಸುತ್ತಿರುವುದರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಆಹಾರ ಇಲಾಖೆಯ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಿದರು.
ತಾಲ್ಲೂಕಿನಾದ್ಯಂತ 99 ನ್ಯಾಯಬೆಲೆ ಅಂಗಡಿಗಳಿದ್ದು, ಲಕ್ಷಾಂತರ ಪಡಿತರದಾರರಿಗೆ ತಿನ್ನಲು ಯೋಗ್ಯವಲ್ಲದ ಸಾವಿರಾರು ಕ್ವಿಂಟಾಲ್ ಕಳಪೆ ರಾಗಿ ವಿತರಿಸಲಾಗಿದೆ. ಪೂರೈಕೆಯಾಗಿರುವ ರಾಗಿಯಲ್ಲಿ ಕಲ್ಲು, ಮಣ್ಣು ಮತ್ತು ಧೂಳು ತುಂಬಿದ್ದು ಜಾನುವಾರುಗಳು ತಿನ್ನಲೂ ಯೋಗ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, “ಪಡಿತರದಾರರಿಗೆ ತಿನ್ನಲು ಯೋಗ್ಯವಲ್ಲದ ಕಳಪೆ ರಾಗಿ ಪೂರೈಕೆ ಮಾಡಿದ್ದಾರೆ. ಜನ ಬಳಕೆಗೆ ಯೋಗ್ಯವಲ್ಲದ ರಾಗಿಯನ್ನು ಆಹಾರ ಇಲಾಖೆ ಖರೀದಿಸಿದ್ದಾದರೂ ಏಕೆ?, ಕಳಪೆ ರಾಗಿ ಏಜೆನ್ಸಿಯಿಂದ ಪೂರೈಕೆಯಾಗಿದೆಯಾ?, ಆಥವಾ ಇಲಾಖೆಗೆ ಹಸ್ತಾಂತರವಾದ ನಂತರ ಅದಕ್ಕೆ ಕಲ್ಲು ಮಣ್ಣು ಬೆರಸಲಾಗಿದೆಯಾ? ಎನ್ನುವುದರ ತನಿಖೆಯಾಗಬೇಕು. ಕಳಪೆ ರಾಗಿ ವಿತರಣೆಯನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
ಕಳಪೆ ರಾಗಿ ಪೂರೈಕೆಯ ಹಿನ್ನೆಲೆಯಲ್ಲಿ ರೈತರೊಂದಿಗೆ ಚರ್ಚಿಸುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ರೈತಸಂಘಕ್ಕೆ ತಿಳಿಸಿದ್ದರು. ಆದರೆ, ಇಲಾಖೆಯ ಯಾವುದೇ ಅಧಿಕಾರಿ ಕಚೇರಿಗೆ ಬಂದು ಕಳಪೆ ರಾಗಿ ಪೂರೈಕೆಯ ಬಗ್ಗೆ ರೈತರ ದೂರು ಸ್ವೀಕರಿಸಿ ಪರಿಶೀಲನೆಗೆ ಮುಂದೆ ಬಂದಿಲ್ಲ. ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡುವವರೆಗೆ ಸ್ಥಳದಿಂದ ಕದುಲುವುದಿಲ್ಲ ಎಂದು ಕಚೇರಿಯ ಒಳಗಿದ್ದ ಸಿಬ್ಬಂದಿಗೆ ದಿಗ್ಬಂಧನ ಹಾಕಿ ಧರಣಿ ಆರಂಭಿಸಿದರು

ಸ್ಥಳದಲ್ಲಿದ್ದ ಆಹಾರ ಇಲಾಖೆಯ ನಿರೀಕ್ಷಕ ಎಂ. ನಟರಾಜು ಮಾತನಾಡಿ, ಇದುವರೆಗೂ ಯಾವುದೇ ರೀತಿಯ ದೂರು ಬರದಂತೆ ಇಲಾಖೆ ಗುಣಮಟ್ಟದ ಪಡಿತರ ವಿತರಣೆ ಮಾಡಿದೆ. ಡಿಸಂಬರ್ ತಿಂಗಳಿನಲ್ಲಿ ಹಾಸನದ ಜಾವಗಲ್ ಗೋದಾಮಿನಿಂದ ನಮಗೆ ಪೂರೈಕೆಯಾಗಿರುವ ರಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವುದು ನಮ್ಮ ಅರಿವಿಗೆ ಬಂದಿದೆ. ಜನವರಿ 19ರ ಸೋಮುವಾರ ಇಲಾಖೆಯ ಉನ್ನತ ಅಧಿಕಾರಿಗಳು ಪಟ್ಟಣಕ್ಕೆ ಆಗಮಿಸಿ ರೈತರ ದೂರು ಪರಿಶೀಲನೆ ಮಾಡಿ ಮುಂದಿನ ಕ್ರಮ ವಹಿಸಲಿದ್ದಾರೆ. ಅಲ್ಲಿಯವರೆಗೆ ರೈತರು ಪ್ರತಿಭಟನೆ ಕೈಬಿಟ್ಟು ಸಹಕರಿಸುವಂತೆ ಕೋರಿದರು. ಪಟ್ಟಣ ಪೊಲೀಸ್ ನಿರೀಕ್ಷಕರಾದ ಸುಮಾರಾಣಿ ನೇತೃತ್ವದಲ್ಲಿ ಸಂಧಾನ ಸಭೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜನವರಿ 19ರ ಗಡುವು ನೀಡಿದರಿಂದ ಪ್ರತಿಭಟನೆ ಹಿಂಪಡೆದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮೆಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ‘ಮಕ್ಕಳ ಸಂತೆ’
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ. ರಾಜೇಗೌಡ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಎಲ್.ಬಿ. ಜಗದೀಶ್, ಮುದ್ದುಕುಮಾರ್, ಮಡುವಿನಕೋಡಿ ಪ್ರಕಾಶ್, ಕರೋಟಿ ತಮ್ಮಯ್ಯ, ಮರಡಹಳ್ಳಿ ರಾಮೇಗೌಡ, ನೀತಿಮಂಗಲ ಮಹೇಶ್, ಚೇತನ್ ಸೇರಿದಂತೆ ಇನ್ನಿತರರು ಇದ್ದರು.





