ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ನಿಜ ಮುಖವನ್ನೇ ಬಯಲಿಗೆಳೆದ ಘಟನೆಯೊಂದು ಅಂಕೋಲಾ ತಾಲೂಕಿನ ಬೋಳೆ ಗ್ರಾಮದಲ್ಲಿ ನಡೆದಿದೆ. ಬಡ ಕೂಲಿ ಕಾರ್ಮಿಕರೊಬ್ಬರು ಅಪಘಾತಕ್ಕೊಳಗಾಗಿ 12 ಗಂಟೆಗಳ ಕಾಲ ಬದುಕಿಗಾಗಿ ಹೋರಾಡಿದರೂ, ಯಾವುದೇ ಆಸ್ಪತ್ರೆಯ ಬಾಗಿಲು ತೆರೆಯದಿರುವುದು ವ್ಯವಸ್ಥೆಯೇ ಬಿಳಿಚಿಕೊಳ್ಳುವಂತೆ ಮಾಡಿದೆ.
ಹೀಗೆ ಜೀವನ್ಮರಣದ ನಡುವೆ ಹೋರಾಡಿ ಆ್ಯಂಬುಲೆನ್ಸ್ನಲ್ಲೇ ಅಸುನೀಗಿದ ಬಡ ಕಾರ್ಮಿಕ ಚಂದ್ರಹಾಸ ಆಗೇರ (50). ಇವರು ಅಪಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡ ನಂತರ ಚಿಕಿತ್ಸೆಗಾಗಿ 12 ಗಂಟೆಗಳ ಕಾಲ ತಿರುಗಾಡಿದ್ದಾರೆ. ಅವರ ಹೋರಾಟ ಆಸ್ಪತ್ರೆಯಿಂದ ಆಸ್ಪತ್ರೆಗೆ ತಲುಪಲು ಸಾಧ್ಯವಾಯಿತೇ ಹೊರತು ಜೀವ ಉಳಿಸಿಕೊಳ್ಳಲು ಸಾಕಾಗಲಿಲ್ಲ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಆಯುಷ್ಮಾನ್ ಯೋಜನೆಗೂ ಬಡ ಕೂಲಿ ಕಾರ್ಮಿಕನ ಜೀವದ ಬೆಲೆ ಕಾಣಿಸಲಿಲ್ಲ. ಅವರಿಗೆ ಕಾಣಿಸಿದ್ದು ಹಣ ಮಾತ್ರ.
“ಅಕ್ಟೋಬರ್ 27ರಂದು ಮಧ್ಯಾಹ್ನ 2.15ರ ಸುಮಾರಿಗೆ ಕೆಲಸ ಮುಗಿಸಿ ಕಾಲ್ನಡಿಗೆಯಲ್ಲಿ ಮನೆಗೆ ಹೊರಟಿದ್ದ ಚಂದ್ರಹಾಸ ಅವರು, ಅಂಕೋಲಾ ಸಮೀಪದ ಶೆಟಗೇರಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಿಮ್ಮುಖದಲ್ಲಿ ಬಂದ ಕೆಂಪು ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಅಪಘಾತಕ್ಕೆ ಒಳಪಡಿಸಿದ ಕಾರು ಚಾಲಕ ಅವರಿಗೆ ಏನಾಗಿದೆ ಎಂದು ಮಾನವೀಯ ದೃಷ್ಟಿಯಿಂದ ಸಹಿತ ನೋಡದೆ ಸ್ಥಳದಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ. ತಕ್ಷಣ 108 ಆಂಬುಲೆನ್ಸ್ಗೆ ಕರೆ ಮಾಡಿದರೂ ಸಮಯಕ್ಕೆ ಬಂದಿಲ್ಲ. ಪರಿಚಿತರ ಆಟೋದಲ್ಲೇ ಅಂಕೋಲಾ ತಾಲೂಕು ಆಸ್ಪತ್ರೆಗೆ ಕರೆದೊಯ್ದಲಾಯಿತು. ತಲೆ ಮತ್ತು ಕಾಲುಗಳಿಗೆ ಗಂಭೀರ ಪೆಟ್ಟಾಗಿದ್ದರಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ಅಷ್ಟೊಂದು ಸೌಲಭ್ಯಗಳು ಇಲ್ಲದಿರುವುದರಿಂದ ಅವರನ್ನು ಹಚ್ಚಿನ ಚಿಕಿತ್ಸೆಗೆ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್)ಗೆ ರವಾನಿಸಲಾಯಿತು. ನಾಲ್ಕು ಗಂಟೆ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದರು. ರಾತ್ರಿ 9 ಗಂಟೆಗೆ ಕಾರವಾರದಿಂದ ಹೊರಟ ಆ್ಯಂಬುಲೆನ್ಸ್ ಮಂಗಳೂರಿಗೆ 270 ಕಿಲೋಮೀಟರ್ ಪ್ರಯಾಣಿಸಿ ಮಧ್ಯರಾತ್ರಿ 1ಕ್ಕೆ ತಲುಪಿತು. ಆದರೆ, ಅಲ್ಲಿನ ಸಿಬ್ಬಂದಿ ಹಾಸಿಗೆ ಇಲ್ಲ ಎಂಬ ಕಾರಣ ನೀಡಿ ಆಸ್ಪತ್ರೆಗೆ ದಾಖಲಿಸಿಕೊಳ್ಳುವುದೇ ಇಲ್ಲ. ಖಾಸಗಿ ಆಸ್ಪತ್ರೆಗೆ ಹೋದಾಗ ಆಯುಷ್ಮಾನ್ ಯೋಜನೆ ಕಾರ್ಡ್ ನಮ್ಮಲ್ಲಿ ನಡೆಯುವುದಿಲ್ಲ; 30 ಸಾವಿರ ರೂ. ಪಾವತಿಸಿದರೆ ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ ಎಂದರು. ಆಗ ನಮ್ಮ ಜಂಘಾಬಲವೇ ಕುಸಿದು ಹೋಯಿತು”… ಈದಿನಕ್ಕೆ ಪ್ರತಿಕ್ರಿಯಿಸಿದ ಚಂದ್ರಹಾಸ ಅವರ ಬಂಧು ಶ್ವೇತಾ ಆಗೇರ ಅವರ ಅಸಹಾಯಕ ನುಡಿಗಳಿವು.

ಅಲ್ಲಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋದಾಗಲೂ ಇದೇ ಪರಿಸ್ಥಿತಿ. ಕೈಯಲ್ಲಿ ಇದ್ದದ್ದು ಕೇವಲ 2,500 ರೂ. ಹಣ. ತುರ್ತು ಸಮಯದಲ್ಲಿ ಈ ಬಡ ಕುಟುಂಬದ ನೆರವಿಗೆ ಯಾರೂ ಬರದ ಕಾರಣ ಏನು ಮಾಡಬೇಕು ಎಂದು ತಿಳಿಯದೇ ಮುಂಜಾನೆ ಕಾರವಾರ ಆಸ್ಪತ್ರೆಗೆ ಮರಳುವಾಗ, ಅಂಕೋಲಾ ಸಮೀಪದ ರಸ್ತೆಯಲ್ಲಿಯೇ ಚಂದ್ರಹಾಸ ಅವರು ಉಸಿರು ನಿಲ್ಲಿಸಿ ಆ್ಯಂಬುಲೆನ್ಸ್ನಲ್ಲೇ ಶವವಾಗಿದ್ದಾರೆ. ಚಂದ್ರಹಾಸ ಅವರ ಪತ್ನಿ ಮನೆಗೆಲಸ ಮಾಡುತ್ತಿದ್ದು, ತಿಂಗಳಿಗೆ ಕೇವಲ ₹2,500 ಸಂಪಾದನೆ ಮಾಡುತ್ತಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಿದ ಆಂಬುಲೆನ್ಸ್ ಡೀಸೆಲ್ ಬಾಡಿಗೆ ₹6,500 ವನ್ನೂ ಸಹಿತ ಪಾವತಿಸಲಾಗದ ಸ್ಥಿತಿಯಲ್ಲಿ ಇದ್ದ ಇವರ ನೆರವಿಗೆ ಸ್ಥಳೀಯರು ಹಾಗೂ ಒಬ್ಬ ವಿಶೇಷಚೇತನ ವ್ಯಕ್ತಿ ನೆರವಿಗೆ ಬಂದು ತಮ್ಮ ಪಿಂಚಣಿ ಹಣದಿಂದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮೃತರ ಮಗಳು ಕವಿತಾ ಆಗೇರ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಅವ್ಯವಸ್ಥೆ ಬಗ್ಗೆ ನೋವು ವ್ಯಕ್ತಪಡಿಸುತ್ತಾ, “ನನ್ನ ತಂದೆಯನ್ನು ಯಾರೂ ಉಳಿಸಿ ಕೊಡಲಿಲ್ಲ. ಬಡ ಜನರ ಸಹಾಯಕ್ಕೆ ಸರ್ಕಾರದ ಯಾವುದೇ ಯೋಜನೆಯೂ ಬರಲಿಲ್ಲ. ಇದರಲ್ಲಿ ನನ್ನ ತಂದೆಯ ತಪ್ಪೇನಿದೆ? ಬಡವರಾಗಿದ್ದೇ ನಮ್ಮ ತಪ್ಪಾ? ಇಷ್ಟು ವರ್ಷಗಳಾದರೂ ಒಂದು ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸದ ಜಿಲ್ಲೆಯ ರಾಜಕಾರಣಿಗಳ ತಪ್ಪಾ? ಬಡ ಜನರ ಜೀವಕ್ಕೆ ಬೆಲೆ ಇಲ್ಲವಾ” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬಡ ಕೂಲಿಕಾರ್ಮಿಕ ಚಂದ್ರಹಾಸ ಆಗೇರ ಅವರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವಿಗೀಡಾದ ಘಟನೆ ನಂತರ, ಸರ್ಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸದಿರುವ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ, ಉತ್ತರ ಕನ್ನಡದ ಜನತೆ ಹಲವಾರು ವರ್ಷಗಳಿಂದ ಚಿಕಿತ್ಸೆಗಾಗಿ ಅವಲಂಬಿತರಾಗಿದ್ದ ಗೋವಾದ ಬಾಂಬೋಲಿಂ ಆಸ್ಪತ್ರೆಯಲ್ಲಿ ಈಗ ಕರ್ನಾಟಕದವರಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಆ ಆಸ್ಪತ್ರೆ ಹೊರರಾಜ್ಯದವರನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸಿದೆ ಎಂಬ ಮಾಹಿತಿ ದೊರೆತಿದೆ. ಗೋವಾ ಮುಖ್ಯಮಂತ್ರಿ ಹೊರ ರಾಜ್ಯದ ರೋಗಿಗಳನ್ನು ದಾಖಲು ಮಾಡಬೇಡಿ ಎಂದು ಸ್ವತಃ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ತಮ್ಮ ರಾಜ್ಯದ ಪ್ರಜೆಗಳಿಗೆ ಬಾಂಬೋಲಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಕರ್ನಾಟಕದವರಿಗೆ ಮಾತ್ರ ಆ ಅವಕಾಶ ದೊರತಿಲ್ಲ. ಕಾಂಗ್ರೆಸ್ ಶಾಸಕ ಸತೀಶ ಸೈಲ್ ಹೇಳುವಂತೆ, ಗೋವಾಕ್ಕೆ ತೆರಳುವ ರೋಗಿಗಳನ್ನು ಅಲ್ಲಿನ ಸಿಬ್ಬಂದಿಗಳು ಅವರ ಜೊತೆ ಹೀನಾಯವಾಗಿ ವರ್ತಿಸಿ ಅವರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಚಂದ್ರಹಾಸ ಅವರ ಸಾವಿಗೆ ಮರುಗಿರುವ ವಿಧಾನ ಪರಿಷತ್ ಶಾಸಕ ಶಿವಕುಮಾರ್ ಕೆ ಅವರು, “ವ್ಯವಸ್ಥೆಯಲ್ಲಿ ಇಷ್ಟೊಂದು ಲೋಪದೋಷಗಳೇಕೆ? ಈ ಸಾವಿಗೆ ಹೊಣೆ ಯಾರು? ಎಂದು ಪ್ರಶ್ನಿಸಿ, ಘಟನೆಯನ್ನು ಸಮಗ್ರ ತನಿಖೆಗೊಳಪಡಿಸಬೇಕು” ಎಂದು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕಾರಣದಿಂದ ಗಂಭೀರ ರೋಗಸ್ಥಿತಿ ಎದುರಾದರೂ ಜನರು ಗೋವಾ ರಾಜ್ಯಕ್ಕೆ ಚಿಕಿತ್ಸೆಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಇದೇ ವೇಳೆ, ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್) ಯಲ್ಲಿ ಎಂಆರ್ಐ ಯಂತ್ರದ ಬೇಡಿಕೆ ಸಲ್ಲಿಸಿ ನಾಲ್ಕು–ಐದು ವರ್ಷಗಳಾದರೂ ಇನ್ನೂ ಯಂತ್ರ ಬಂದಿಲ್ಲ. ತಜ್ಞ ವೈದ್ಯರ ಹುದ್ದೆಗಳೂ ಭರ್ತಿಯಾಗಿಲ್ಲ. ಈ ಪರಿಸ್ಥಿತಿಯಿಂದಾಗಿ, ಜಿಲ್ಲೆಯಲ್ಲಿ ಸಂಭವಿಸುವ ಅನೇಕ ಅಪಘಾತ ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗೆ ಪಕ್ಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಶಿಫಾರಸು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚಂದ್ರಹಾಸ ಅವರ ಸಾವು ಕೇವಲ ದುರಂತವಲ್ಲ; ಇದು ವ್ಯವಸ್ಥೆಯ ವೈಫಲ್ಯದ ಜೀವಂತ ಸಾಕ್ಷಿಯಾಗಿದೆ. ಉತ್ತರ ಕನ್ನಡದ ಜನರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಂತ ಅಗತ್ಯ ಎಂಬ ಕೂಗನ್ನು ಮತ್ತೆ ನೆನಪಿಸಿದೆ. ಜಿಲ್ಲೆಯ ಬಡ ಜನರು ಕೇವಲ ಆ್ಯಂಬುಲೆನ್ಸ್ನಲ್ಲೇ ಸುತ್ತಾಡಿ ಜೀವ ಕಳೆದುಕೊಳ್ಳುತ್ತಿರುವುದು ಈ ಆಧುನಿಕ ಕಾಲದ ವಿಷಾದಕರ ಸಂಗತಿ. ಆರೋಗ್ಯದ ಬಗ್ಗೆ ಇರುವ ಮೂಲಸೌಕರ್ಯ, ಆಯುಷ್ಮಾನ್ ಯೋಜನೆಯ ಕಾರ್ಯನಿರ್ವಹಣೆ ಹಾಗೂ ಆಸ್ಪತ್ರೆಗಳ ಮಾನವೀಯತೆ ಕುರಿತು ಆಡಳಿತ ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಯೋಚಿಸಬೇಕಾಗಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ
ಆರೋಗ್ಯ ಇಲಾಖೆಯು ಪ್ರತಿಯೊಂದು ಜಿಲ್ಲಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಆಯುಷ್ಮಾನ್ ಯೋಜನೆ ಅಡಿ ದಾಖಲಾಗಿರುವ ಆಸ್ಪತ್ರೆಗಳ ನಿಯಮಿತ ಪರಿಶೀಲನೆ ನಡೆಯಬೇಕು. ಉಚಿತ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಜನರಿಂದ ಕೇಳಿ ಬರುತ್ತಿದೆ.
ಸರ್ಕಾರದ ನಿಲುವು ʼಯೋಜನೆ ಇದೆ, ಪ್ರಯೋಜನ ಪಡೆಯಿರಿʼ ಎನ್ನುವಲ್ಲಿಗೆ ನಿಲ್ಲಬಾರದು; ಯೋಜನೆ ಯಾರಿಗೆ ತಲುಪುತ್ತಿಲ್ಲ, ಏಕೆ ತಲುಪುತ್ತಿಲ್ಲ ಎನ್ನುವುದನ್ನು ವಿಶ್ಲೇಷಿಸುವ ಜವಾಬ್ದಾರಿಯೂ ಅವರದೇ. ಚಂದ್ರಹಾಸ ಆಗೇರ ಅವರ ಸಾವಿನಂತಹ ಘಟನೆಗಳು ಅಧಿಕಾರಿಗಳಿಗೆ ಎಚ್ಚರಿಕೆಯ ಘಂಟೆಯಾಗಬೇಕು. ಆಯುಷ್ಮಾನ್ ಕಾರ್ಡ್ ಇದ್ದರೂ ಆಸ್ಪತ್ರೆಗೆ ದಾಖಲಾಗದಿರುವುದು ಇಂತಹದ್ದೊಂದು ಯೋಜನೆ ಇದೆಯೇ? ಇದ್ದರೂ ಯಾರಿಗಾಗಿ ಇದೆ? ಎನ್ನುವ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಆರೋಗ್ಯ ಸೇವೆ ಎನ್ನುವುದೊಂದು ಹಕ್ಕು; ದಯೆಯಲ್ಲ. ಅದನ್ನು ಖಚಿತಪಡಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಯೋಜನೆಗಳನ್ನು ಘೋಷಿಸುವುದಕ್ಕಿಂತ ಮಾನವೀಯ ಅಡಿಪಾಯದ ಮೇಲೆ ಅವುಗಳ ಅನುಷ್ಠಾನ ಮಾಡಬೇಕಾಗಿರುವ ಅಗತ್ಯ ಅತ್ಯಂತ ತುರ್ತಾಗಿದೆ.




