ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಇಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಂತಿ ಸಭೆಯು ಯಾವುದೇ ಒಪ್ಪಂದ ಕಾಣದೇ ಕೊನೆಗೆ ಆರೆಸ್ಸೆಸ್ ಪರವಾಗಿ ಮಾತನಾಡಿದ ಬಿಜೆಪಿಯ ದಲಿತ ಮುಖಂಡ ಮತ್ತು ದಲಿತ ಸಂಘಟನೆಗಳ ನಡುವಿನ ವಾಗ್ವಾದದ ಮೂಲಕ ಸಭೆ ಮುಕ್ತಾಯಗೊಂಡಿದೆ.
ಬಿಜೆಪಿ ರಾಜ್ಯ ಪರಿಶಿಷ್ಟ ಜಾತಿ(ದಲಿತ) ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಆರೆಸ್ಸೆಸ್ ಪರವಾಗಿ ಮಾತನಾಡುವ ವೇಳೆ ವಾಗ್ವಾದ ಉಂಟಾಗಿದೆ. ಹಾಗಾಗಿ ಸಭೆಯನ್ನು ಮುಕ್ತಾಯಗೊಳಿಸಿ ಎಲ್ಲ ಸಂಘನಟನೆಯ ಮುಖಂಡರನ್ನು ಸಭೆಯಿಂದ ಹೊರಗೆ ಕಳುಹಿಸಲಾಯಿತು.
ಸಭೆಗೆ ಸಂಬಂಧಿಸಿದಂತೆ ಭೀಮ್ ಆರ್ಮಿ ಸಂಘಟನೆಯ ಸಂತೋಷ್ ಬಿ ಪಾಲ ಎಂಬುವವರು ಈ ದಿನ.ಕಾಮ್ನೊಂದಿಗೆ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್), ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ಸ್, ಗೊಂಡ ಕುರುಬ ಎಸ್ಟಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ 10 ಸಂಘಟನೆಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು. ಅದರಂತೆ ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಪ್ರಾರಂಭವಾದ ಸಭೆಗೆ ಸಂಘಟನೆಯ ಗರಿಷ್ಠ ಮೂವರು ಸದಸ್ಯರು ಪ್ರತಿನಿಧಿಸುವಂತೆ ತಿಳಿಸಲಾಗಿತ್ತು” ಎಂದರು.
ಅದರಂತೆ ಸಭೆಯಲ್ಲಿ ಪಥಸಂಚಲನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರು ಎಲ್ಲರಿಂದಲೂ ಲಿಖಿತ ಹೇಳಿಕೆಗಳನ್ನು ಪಡೆದಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಬಳಿಕ ನ್ಯಾಯಾಲಯ ಯಾವ ರೀತಿಯ ಆದೇಶ ನೀಡುವುದೋ ಅದರಂತೆ ಪಥಸಂಚಲನಕ್ಕೆ ಅನುಮತಿ ನೀಡಲಾಗುವುದೆಂದು ಹೇಳಿದ್ದಾರೆ. ಬಿಜೆಪಿಯಲ್ಲಿರುವ ದಲಿತ ಸಮುದಾಯದ ಮುಖಂಡ ಅಂಬರಾಯ ಅಸ್ಟಗಿ ಆರೆಸ್ಸೆಸ್ ಪರವಾಗಿ ಮಾತನಾಡಲು ಮುಂದಾದಾಗ ಪೊಲೀಸರು ಮತ್ತು ಅವರ ನಡುವೆ ವಾಗ್ವಾದ ಉಂಟಾಯಿತು. ಇದರಿಂದ ಸಭೆಯನ್ನು ಅರ್ಧಕ್ಕೇ ಮೊಟಕುಗೊಳಿಸಲಾಯಿತು” ಎಂದು ಹೇಳಿದರು.
ಶಾಂತಿಸಭೆ ನೇತೃತ್ವ ವಹಿಸಿದ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಸೇಡಂ ಸಹಾಯ ಆಯುಕ್ತರು, ಚಿತ್ತಾಪೂರ ತಹಶೀಲ್ದಾರ್, ಪುರಸಭೆಯ ಮುಖ್ಯಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ, ಶಹಾಬಾದ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರು, ಚಿತ್ತಾಪುರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಅಕ್ಟೋಬರ್ 28ರಂದು ಬೆಳಿಗ್ಗೆ 11.30ಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಸಂಭಾಗಣದಲ್ಲಿ ಎಲ್ಲ ಸಂಘಟನೆಗಳಿಗೂ 10 ನಿಮಿಷ ಮಾತನಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ ಆರೆಸ್ಸೆಸ್ ಸಂಘಟಕರು ನ್ಯಾಯಾಲಯ ನೀಡುವ ದಿನಾಂಕಕ್ಕೆ ಪಥಸಂಚಲನ ಮಾಡುವುದಾಗಿ ತಿಳಿಸಿದ್ದಾರೆ.
ಆರೆಸ್ಸೆಸ್, ಭಾರತೀಯ ದಲಿತ ಪ್ಯಾಂಥರ್, ಭೀಮ್ ಆರ್ಮಿ, ರಾಜ್ಯ ಯುವ ಘಟಕ, ಗೊಂಡ-ಕುರುಬ ಎಸ್ಟಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ, ಬೀದರ್ನ ಕ್ರಿಶ್ಚನ್ ಹೌಸನ ಸಂಜಯ ಜಾಗೀರದಾರ, ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗ, ಡಾ. ವಿಠಲ ದೊಡ್ಡಮನಿ, ಸಂತೋಷ ಬಿ ಪಾಳಾ, ಜೈಭೀಮ್ ಸೇನೆ ಪಥಸಂಚಲನಕ್ಕೆ ಅವಕಾಶ ಕೇಳಿರುವುದಾಗಿ ತಿಳಿದುಬಂದಿದೆ.
ಘಟನೆ ಹಿನ್ನೆಲೆ
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನವನ್ನು ವಿರೋಧಿಸಿ ಸುಮಾರು 12 ಸಂಘಟನೆಗಳು ತಾವೂ ಬೀದಿಗಿಳಿಯುವುದಾಗಿ ಅನುಮತಿ ಕೋರಿದ ಬೆನ್ನಲ್ಲೇ ಸಂಘಟನೆಗಳ ನಡುವೆ ಶಾಂತಿಸಭೆ ನಡೆಸುವಂತೆ ಕಲಬುರಗಿ ಹೈಕೋರ್ಟ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಶಾಂತಿಸಭೆ ಹಮ್ಮಿಕೊಳ್ಳಲಾಗಿತ್ತು.
ಆರೆಸ್ಸೆಸ್ ತನ್ನ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 19ರಂದು ಆಯೋಜಿಸಿದ್ದ ಪಥಸಂಚಲನ ನಡೆಸಲು ಚಿತ್ತಾಪುರ ತಹಶೀಲ್ದಾರ್ ಅನುಮತಿ ನಿರಾಕರಿಸಿದ ನಂತರ ಆರೆಸ್ಸೆಸ್ನ ಕಲಬುರಗಿ ವಿಭಾಗದ ಮುಖ್ಯಸ್ಥ ಅಶೋಕ್ ಪಾಟೀಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಂತರ ಹೈಕೋರ್ಟ್ ನವೆಂಬರ್ 2ರಂದು ಪಥಸಂಚಲನ ನಡೆಸುವಂತೆ ಅನುಮತಿ ಪಡೆಯಲು ಸಂಘಟನೆಗೆ ಅವಕಾಶ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಚಿತ್ತಾಪುರ | ಪಥಸಂಚಲನಕ್ಕೆ ಅನುಮತಿ ಕೋರಿ 12 ಸಂಘಟನೆಗಳ ಮನವಿ: ಶಾಂತಿಸಭೆಗೆ ಹೈಕೋರ್ಟ್ ನಿರ್ದೇಶನ
ಈ ಹಿನ್ನೆಲೆಯಲ್ಲಿ ಭೀಮ್ ಆರ್ಮಿ ಮತ್ತು ದಲಿತ್ ಪ್ಯಾಂಥರ್ಸ್ ಕೂಡ ಅದೇ ದಿನ ಅಂದರೆ ನವೆಂಬರ್ 2ರಂದು ರ್ಯಾಲಿಗಳನ್ನು ಆಯೋಜಿಸಲು ಅನುಮತಿ ಕೋರಿ ಅಕ್ಟೋಬರ್ 21ರ ಮಂಗಳವಾರ ಕಲಬುರಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು.
“ಆರೆಸ್ಸೆಸ್ನ ಕಾರ್ಯಗಳು ಮತ್ತು ಆಲೋಚನೆಗಳು ಯುವಜನರು ಹಾಗೂ ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ದಲಿತ ಪ್ಯಾಂಥರ್ಸ್, ಒಂದು ಕೈಯಲ್ಲಿ ಸಂವಿಧಾನದ ಪೀಠಿಕೆ, ಇನ್ನೊಂದು ಕೈಯಲ್ಲಿ ನೀಲಿ ಧ್ವಜ ಹಿಡಿದುಕೊಂಡು ರ್ಯಾಲಿ ನಡೆಸಲು ಅನುಮತಿ ಕೋರಿತ್ತು. ಇದರ ನಡುವೆ ಭೀಮ್ ಆರ್ಮಿ ಕೂಡ ತ್ರಿವರ್ಣ ಧ್ವಜ, ಬೌದ್ಧ ಧರ್ಮದ ಪಂಚಶೀಲ ಧ್ವಜ ಮತ್ತು ಬಿದಿರಿನ ಕೋಲು ಹಿಡಿದು ರ್ಯಾಲಿ ನಡೆಸಲು ಅನುಮತಿ ಕೇಳಿತ್ತು. ಇದಾದ ನಂತರ ಈವರೆಗೆ ಸುಮಾರು 12 ಸಂಘಟನೆಗಳು ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು.





