ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಶನಿವಾರ ಒಂದು ಆನೆ ಮೃತಪಟ್ಟಿದ್ದು, ಆ ಮೃತ ಆನೆಯ ಬಳಿ 23 ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಅವುಗಳನ್ನು ಕಾಡಿಗೆ ಹಿಮ್ಮೆಟ್ಟಲು ಜಿಲ್ಲಾಡಳಿತ ಹೆಣಗಾಡುತ್ತಿದೆ. ಕಾಡಾನೆಗಳಿಂದ ಜನರಿಗೆ ಯಾವುದೇ ಅಪಾಯಗಳಾಗಬಾರದು ಎಂಬ ಕಾರಣಕ್ಕೆ ಜಿಲ್ಲೆಯ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ಜಿಲ್ಲಾಡಳಿತ ಆದೇಶಿಸಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರುಪುರ, ಹೊಸಹಳ್ಳಿ, ತುಡುಕೂರು, ತೋರಣಮಾವು ಮತ್ತು ಚಿತ್ತುವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಶನಿವಾರ, ಕಾಫಿ ತೋಟದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ತುಳಿದು ಒಂದು ಕಾಡಾನೆ ಮೃತಪಟ್ಟಿದೆ. ಮೃತ ಆನೆಯ ಬಳಿ ಸುಮಾರು 23 ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಮೃತ ಆನೆಯ ಬಳಿಗೆ ಹೋಗಲಾಗದೆ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.
ಕಾಡಾನೆಗಳು ಸ್ಥಳದಿಂದ ತೆರಳುವವರೆಗೂ ಸಾವನ್ನಪ್ಪಿರುವ ಆನೆಯ ಬಳಿಗೆ ಹೋಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತ ಪಟ್ಟಿರುವ ಆನೆ ಸಕಲೇಶಪುರ ಕಾಡಿನಿಂದ ಬಂದಿದೆ ಎಂದು ಹೇಳಲಾಗಿದೆ.




