ಕಳೆದ 25 ವರ್ಷಗಳಿಂದ ಬೀದರ್ ನಗರದ ನೌಬಾದ ಬಳಿ ಬೀದಿ ಬದಿ ಜೋಪಡಿಗಳಲ್ಲಿ ಬದುಕು ಸಾಗಿಸುತ್ತಿರುವ ನೂರಕ್ಕೂ ಅಧಿಕ ಕುಟುಂಬಗಳಿಗೆ ವಸತಿ ಸೌಲಭ್ಯ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಂತೆ ಎಂದು ಅಲೆಮಾರಿ ಜನಾಂಗ ಬೀದರನಲ್ಲಿ ಪ್ರತಿಭಟನೆ ನಡೆಸಿತು.
ಬೀದರ್ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ಮಾನವ ಸರಪಳಿ ನಿರ್ಮಿಸಿ ವಿಭಿನ್ನವಾಗಿ ಮಾನವ ಹಕ್ಕುಗಳ ದಿನ ಆಚರಿಸಿ ಜಿಲ್ಲಾಡಳಿತ ವಿರುದ್ದ ಘೋಷಣೆ ಕೂಗಿದರು.
ಅಲೆಮಾರಿ ಜನಾಂಗ ಕಳೆದ ಆರೇಳು ವರ್ಷಗಳಿಂದ ಜಿಲ್ಲಾಡಳಿತ ನಿವೇಶನ ಕೊಡುವ ಭರವಸೆ ನೀಡುತ್ತಲೇ ಇದೆ. ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದರೂ ನಮ್ಮ ಮನವಿಗೆ ಕಿಮ್ಮಿತ್ತಿಲ್ಲ ಎನ್ನುವಂತಾಗಿದೆ. ಈಗಲಾದರೂ ಜಿಲ್ಲೆಯ ಇಬ್ಬರು ಸಚಿವರು ವಸತಿಗಾಗಿ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ನೇತ್ರತ್ವ ವಹಿಸಿದ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮಾತನಾಡಿ, “ನೌಬಾದ ಚೌಳಿ ಬಳಿಯ ಆಟೋ ನಗರ ರಸ್ತೆ ಪಕ್ಕದಲ್ಲಿ ವಾಸಿಸುವ ಅಲೆಮಾರಿ ಜನಾಂಗಕ್ಕೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಖಾಸಗಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡಿರುವ ಇವರು ಕತ್ತಲು, ಮಳೆ, ಚಳಿ, ಬಿಸಿಲು ಎನ್ನದೇ ಪುಟ್ಟ ಪುಟ್ಟ ಕಂದಮ್ಮಗಳಿಗೆ ಒಡಲಲ್ಲಿ ಇಟ್ಟುಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೂ ಜಿಲ್ಲಾಡಳಿವಾಗಲಿ, ಜನಪ್ರತಿನಿಧಿಗಳಾಗಲಿ ಇವರ ಸಂಕಟಕ್ಕೆ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಮುಂದಾಗದೇ ಇರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ” ಎಂದು ಕಳಕಳ ವ್ಯಕ್ತಪಡಿಸಿದರು.
“2017ರಲ್ಲಿ ಅಲೆಮಾರಿಗಳ ನಿವೇಶನಕ್ಕಾಗಿ ಅಂದಿನ ಸಚಿವರಾದ ರಹೀಂ ಖಾನ್ ಅವರ ನೇತ್ರತ್ವದ ಸಭೆಯಲ್ಲಿ ಎರಡು ಎಕರೆ ಜಾಗ ಗುರುತಿಸಿ ಠರಾವು ಪಾಸು ಮಾಡಲಾಗಿತ್ತು. ಆದರೆ 6 ವರ್ಷ ಕಳೆದರೂ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಅಲೆಮಾರಿಗಳಿಗೆ ನಿವೇಶನ ದಕ್ಕಲಿಲ್ಲ.ಈಗಲಾದರೂ ಜಿಲ್ಲೆಯ ಇಬ್ಬರು ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದ ಖಾನಾಪುರದಲ್ಲಿ ಬಹಳಷ್ಟು ಖಾಲಿ ಸ್ಥಳಾವಕಾಶವಿದ್ದು, ಅಲ್ಲಿ ವಸತಿ ವಂಚಿತರಾದ ಜನಾಂಗಕ್ಕೆ ನಿವೇಶನ ಗುರುತಿಸಿ ಇವರ ಮಕ್ಕಳಿಗೆ ವಸತಿ ಶಾಲೆ ಹಾಗೂ ಆರೋಗ್ಯ ಕೇಂದ್ರ ತೆರೆದು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಲೆಮಾರಿ ಜನಾಂಗದವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು. ಆದರೂ ಅಲೆಮಾರಿಗಳಿಗೆ ನಿವೇಶನ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಲು ಅಧಿಕಾರಿಗಳು ಇಚ್ಚಾಶಕ್ತಿ ತೋರಲಿಲ್ಲ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತುಕೊಂಡು ಅಲೆಮಾರಿಗಳಿಗೆ ಅಗತ್ಯ ಸೌಲಭ್ಯ ಸೂರು ಕಲ್ಪಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಅಭಿವೃದ್ಧಿಯಲ್ಲಿ ಎಸ್. ನಿಜಲಿಂಗಪ್ಪನವರ ಕೊಡುಗೆ ಅಪಾರ: ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ನ್ಯಾಯವಾದಿ ಜೈರಾಜ ಬುಕ್ಕಾ, ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವಿಲ್ಸನ್ ದೊಡ್ಮನಿ, ಉಪಾಧ್ಯಕ್ಷ ಪ್ರಶಾಂತ್ ಹಿರೇಮನಿ, ಯುವ ಘಟಕ ಜಿಲ್ಲಾಧ್ಯಕ್ಷ ಗುರುದಾಸ, ಉಪಾಧ್ಯಕ್ಷ ಸ್ಯಾಮ್ಸನ್ ರೈತ ಘಟಕ ಅಧ್ಯಕ್ಷ ಪರಮೇಶ್ ರಾಜಗಿರಿ, ಸದಸ್ಯರು ರಜನಿಕಾಂತ್ ಹಪ್ಪಳಕರ, ಸಂಜು ಕುಮಾರ್, ಪ್ರಶಾಂತ ಹೀರೆಮನಿ ಹಾಗೂ ಅಲೆಮಾರಿ ಜನಾಂಗದ ಮುಖಂಡರಾದ ದುರ್ಗಪ್ಪಾ, ಶ್ಯಾಮ, ರಾಮಲೂ, ಪೀರು, ಸುಶಿಲಮ್ಮಾ , ಶಾಂತಮ್ಮ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.





