ಗುಲ್ಬರ್ಗ ಮೂಲದ ಅಲೆಮಾರಿ ಕುಟುಂಬಗಳು ದಸರಾದಲ್ಲಿ ಹೊಟ್ಟೆಪಾಡಿಗಾಗಿ ಬಲೂನ್ ಮಾರಲು ಬಂದಿದ್ದರು. ಇದೇ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಮೇಲಾದ ಹೀನ ಕೃತ್ಯ ಖಂಡಿಸಿ ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಐಎಂಎಸ್ಎಸ್ ಮತ್ತು ಎಐಡಿಎಸ್ಓ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಎಐಎಂಎಸ್ಎಸ್ ರಾಜ್ಯ ಉಪಾಧ್ಯಕ್ಷೆ ಜಿ.ಎಸ್. ಸೀಮಾ ಮಾತನಾಡಿ, ಒಂಬತ್ತು ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಭೀಕರವಾಗಿ ಹತ್ಯೆಗೈಯ್ಯಲಾಗಿರುವ ಹೃದಯವಿದ್ರಾವಕ ಘಟನೆಯಿಂದಾಗಿ ಸಾಂಸ್ಕೃತಿಕ ನಗರಿಯ ಜನತೆಯಲ್ಲಿ ಆಘಾತ ಉಂಟಾಗಿದೆ. ದಸರಾದಲ್ಲಿ ತಮ್ಮ ಜೀವನೋಪಾಯಕ್ಕಾಗಿ ದುಡಿಯಲು ಬಂದ ಅಲೆಮಾರಿ ಸಮುದಾಯ ತಮ್ಮ ಮಗಳ ದುರಂತ ಅಂತ್ಯವನ್ನು ಕಾಣುವಂತಾಗಿದೆ. ಇಂತಹ ಘಟನೆಗಳು ಮತ್ತೆಂದೂ ಮರುಕಳಿಸದಂತೆ ಸರ್ಕಾರ ತಕ್ಷಣ ಎಲ್ಲಾ ರೀತಿಯ ಕ್ರಮ ವಹಿಸಬೇಕು. ಈ ಕುರಿತು ಸಮಗ್ರ ತನಿಖೆಯನ್ನು ನಡೆಸಿ ಅಪರಾಧಿಗೆ ಮರಣದಂಡನೆ ವಿಧಿಸಬೇಕು. ಮೃತ ಬಾಲಕಿಯ ಪೋಷಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಘಟನೆಯ ನ್ಯಾಯ ನಿರ್ಣಯದಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು. ಹಾಗೆಯೇ, ಸಮಾಜದಲ್ಲಿ ವಿಷಮಯವಾಗಿ ಹರಡುತ್ತಿರುವ ಅಶ್ಲೀಲ ಸಿನಿಮಾ, ಸಾಹಿತ್ಯ, ಕುಡಿತ, ಜೂಜು, ಮಾದಕ ವಸ್ತು ಸೇವನೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ನಿತಿನ್ ಮಾತನಾಡಿ, ಶಿಕ್ಷಣ ಪಡೆಯಬೇಕಾದ ಬಾಲಕಿ, ಜೀವನೋಪಾಯಕ್ಕಾಗಿ ಮೈಸೂರು ದಸರಾಗೆ ಬಂದು ಪೈಶಾಚಿಕ ಕೃತ್ಯಕ್ಕೆ ಒಳಗಾಗಿ ಅಂತ್ಯ ಕಂಡಿದ್ದು ಅತ್ಯಂತ ನೋವಿನ ಸಂಗತಿ. ಇಂದು ಸಮಾಜದಲ್ಲಿ ಭಗತ್ ಸಿಂಗ್, ನೇತಾಜಿ ಅಂತವರ ಆದರ್ಶ ಮೌಲ್ಯಗಳು ಇಲ್ಲದಿರುವುದು ಇಂತಹ ಘಟನೆಗಳು ಹೆಚ್ಚುವುದಕ್ಕೆ ಕಾರಣವಾಗಿದೆ. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು, ಆರೋಗ್ಯಕರ ಸಮಾಜ ಕಟ್ಟುವ ಜವಾಬ್ದಾರಿ ವಿದ್ಯಾರ್ಥಿ , ಯುವ ಜನರ ಮೇಲಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಶಾಸಕ ಜಿ ಡಿ ಹರೀಶ್ ಗೌಡ ಅವಿರೋಧ ಆಯ್ಕೆ
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಆಸಿಯಾ ಬೇಗಂ, ಸಾಮಾಜಿಕ ಹೋರಾಟಗಾರ ಉಗ್ರ ನರಸಿಂಹೇ ಗೌಡ, ಹಿರಿಯ ವಕೀಲ ಬಾಬು ರಾಜನ್, ಸಮತಾ ವೇದಿಕೆಯ ರತಿ ರಾವ್, ರೈತ ಸಂಘದ ಪಿ. ಮರಂಕಯ್ಯ, ನಾಗನಹಳ್ಳಿ ಚಂದ್ರಶೇಖರ್ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.





