ಜಿಲ್ಲೆಯ ಹಾವೇರಿ ವಿಶ್ವವಿದ್ಯಾಲಯ ಮತ್ತು ಜಗತ್ತಿನ ಏಕೈಕ ಜಾನಪದ ವಿಶ್ವವಿದ್ಯಾಲಯಗಳಿಗೆ ಮುಂಬರುವ 2026 ರಾಜ್ಯ ಬಜೆಟ್ ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ ಈ ಎರಡೂ ವಿಶ್ವ ವಿದ್ಯಾಲಯಗಳು ಅಭಿವೃದ್ಧಿಯಾಗಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಾವೇರಿ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ವತಿಯಿಂದ ಬುಧವಾರ ಮುಖ್ಯಮಂತ್ರಿಗಳು ಸಿದ್ಧರಾಮಯ್ಯ ಅವರಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮೂಲಕ ಮನವಿ ಸಲ್ಲಿಸಲಾಯಿತು.
“ಜಿಲ್ಲೆಯಲ್ಲಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯ ಮತ್ತು ಜಗತ್ತಿನ ಏಕೈಕ ಜಾನಪದ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತ್ತಕೋತ್ತರ ಪದವಿಯ ವಿವಿಧ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನೂರಾರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಬಹುತೇಕರು ಖಾಯಂಯೇತರ ಸಿಬ್ಬಂದಿಗಳಿದ್ದಾರೆ. ಸಂಬಳ ನೀಡಲಾಗದೇ ಸಿಬ್ಬಂದಿಗಳನ್ನು ಸೇವೆಯಿಂದ ಕೈಬಿಡುವ ಸ್ಥಿತಿ ನಿರ್ಮಾಣವಾಗಿದೆ” ಎಂದರು.
“ಅಲ್ಲದೇ ಅಗತ್ಯ ಅನುದಾನ ಇಲ್ಲದೇ, ಅಗತ್ಯ ಕಟ್ಟಡಗಳು, ಉಪಕರಣಗಳು, ಸಿಬ್ಬಂದಿ ಕೊರತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ವಿ.ವಿಗಳು ಅಭಿವೃದ್ಧಿ ಹೊಂದಲು ಸಮಸ್ಯೆಯಾಗುತ್ತಿದೆ. ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಸಹ ತೊಂದರೆಯಾಗುತ್ತಿದೆ” ಎಂದು ಹೇಳಿದರು.
“ಕೂಡಲೇ ಹಾವೇರಿ ವಿಶ್ವವಿದ್ಯಾಲಯ ಹಾಗೂ ಜಾನಪದ ವಿಶ್ವವಿದ್ಯಾಲಯಗಳಿಗೆ ಮುಂಬರುವ 2026 ರಾಜ್ಯ ಬಜೆಟ್ ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ, ಈ ಎರಡೂ ವಿಶ್ವ ವಿದ್ಯಾಲಯಗಳು ಅಭಿವೃದ್ಧಿಯಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿಯಲ್ಲಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರು ಬಸವರಾಜ ಪೂಜಾರ, ಪರಿಮಳ ಜೈನ, ಸತೀಶ್ ಎಂ.ಬಿ, ಲಕ್ಷ್ಮೀಪ್ರಭ ಎಸ್ ಹುಲ್ಲೂರು, ಮಜೀದ್ ಎಸ್.ಎಚ್, ಮಂಜುನಾಥ ಸಣ್ಣಿಂಗಣ್ಣನವರ, ಖಲಂದರ ಅಲ್ಲಿಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.





