ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಗೆ ಸೇರಿದ ಹನೆಹಳ್ಳಿ ಗ್ರಾಮದ ಕೂರಾಡಿ ಸಂಕಮ್ಮ ತಾಯಿ ರೆಸಾರ್ಟ್ನಲ್ಲಿ ಅಕ್ರಮವಾಗಿ ವಿದೇಶಿಗರು ನೆಲೆಸಿದ್ದು, ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಅವರನ್ನು ಕೆಲಸಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರಕೂರು ಸರಕಾರಿ ಆಸ್ಪತ್ರೆಗೆ ವಿದೇಶಿ ಮಹಿಳೆಯೊಬ್ಬರು ಗರ್ಭಿಣಿ ಚಿಕಿತ್ಸೆಗೆಂದು ಆಗಮಿಸಿದ ಸಂದರ್ಭ, ವೈದ್ಯರು ದಾಖಲಾತಿಗಳನ್ನು ಕೇಳಿದಾಗ ಯಾವುದೇ ಮಾನ್ಯ ದಾಖಲೆಗಳನ್ನು ನೀಡದಿರುವುದು ಕಂಡುಬಂದಿದೆ. ಇದರಿಂದ ಸಂಶಯಗೊಂಡ ಆಸ್ಪತ್ರೆ ಅಧಿಕಾರಿಗಳು ತಕ್ಷಣ ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರು ವಿಚಾರಣೆ ನಡೆಸಿದಾಗ, ರೆಸಾರ್ಟ್ನಲ್ಲಿ ರೀಪಕ್ ದಮಾಯಿ (28), ಸುನಿತ ದಮಾಯಿ (27), ಉರ್ಮಿಳ (19), ಕೈಲಾಶ್ ದಮಾಯಿ (18), ಕಪಿಲ್ ದಮಾಯಿ (19), ಸುನಿತ ದಮಾಯಿ (21) ಹಾಗೂ ಮೂರು ಸಣ್ಣ ಮಕ್ಕಳು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ.
ವಿಚಾರಣೆ ವೇಳೆ ಇವರು ಭಾರತೀಯ ರಾಷ್ಟ್ರೀಯತೆಯನ್ನು ಹೊಂದಿರದೇ ಇರುವುದೂ, ತಾವು ಯಾವ ದೇಶದ ಪ್ರಜೆಗಳು ಎಂಬುದನ್ನು ಸ್ಪಷ್ಟವಾಗಿ ತಿಳಿಸಲು ಯಾವುದೇ ದಾಖಲೆಗಳಿಲ್ಲದೆ ಇರುವುದೂ ಬೆಳಕಿಗೆ ಬಂದಿದೆ. ಇವರ ಬಳಿ ಗುರುತಿನ ಚೀಟಿ, ಜನ್ಮ ದಾಖಲೆ, ಮಾನ್ಯ ಪಾಸ್ಪೋರ್ಟ್, ಪ್ರಯಾಣ ದಾಖಲೆ ಅಥವಾ ವೀಸಾ ಯಾವುದೂ ಇಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 264/2025 U/S 3 R/W 21 The Immigration & Foreigners ACT 2025 ರಂತೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ರೆಸಾರ್ಟ್–ಲಾಡ್ಜ್ಗಳಿಗೆ ಕಟ್ಟುನಿಟ್ಟಿನ ಸೂಚನೆ – ಜಿಲ್ಲಾ ಪೊಲೀಸ್ ಪ್ರಕಟಣೆ
ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೆಸಾರ್ಟ್, ಲಾಡ್ಜ್ ಹಾಗೂ ವಸತಿ ವ್ಯವಸ್ಥೆ ಹೊಂದಿರುವ ಸಂಸ್ಥೆಗಳು ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ರೆಸಾರ್ಟ್ ಅಥವಾ ಲಾಡ್ಜ್ಗಳಲ್ಲಿ ಯಾವುದೇ ದೇಶದ ಪ್ರಜೆಗಳು ತಂಗಿದ್ದಲ್ಲಿ, ಅವರಿಂದ ಕಡ್ಡಾಯವಾಗಿ C Form ಪಡೆದು ಜಿಲ್ಲಾ ಪೊಲೀಸ್ ಕಚೇರಿಗೆ ಮಾಹಿತಿ ನೀಡಬೇಕು. ಯಾವುದೇ ದೇಶದ ಪ್ರಜೆಗಳು ಸಮರ್ಪಕ ದಾಖಲೆಗಳಿಲ್ಲದೆ ತಂಗಿರುವುದು ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಚೇರಿಗೆ ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವುದೇ ದೇಶದ ಪ್ರಜೆಗಳು ಅಕ್ರಮವಾಗಿ ದೇಶದಲ್ಲಿ ವಾಸಿಸುವುದು ದೇಶದ ಆಂತರಿಕ ಭದ್ರತೆಗೆ ಗಂಭೀರ ಅಪಾಯ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಇಂತಹ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ.
ಅದೇ ರೀತಿ, ರೆಸಾರ್ಟ್ ಹಾಗೂ ಲಾಡ್ಜ್ಗಳಲ್ಲಿ ಯಾವುದೇ ಮಾನ್ಯ ದಾಖಲೆಗಳಿಲ್ಲದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಅಂತಹ ರೆಸಾರ್ಟ್–ಲಾಡ್ಜ್ಗಳ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಇದಲ್ಲದೆ, ರೆಸಾರ್ಟ್ ಅಥವಾ ಲಾಡ್ಜ್ಗಳಲ್ಲಿ ಯಾವುದೇ ರೀತಿಯ ಅನೈತಿಕ ಅಥವಾ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದಲ್ಲಿ, ಸಂಬಂಧಿಸಿದ ಮ್ಯಾನೇಜರ್ ಹಾಗೂ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ರೆಸಾರ್ಟ್, ಲಾಡ್ಜ್ ಹಾಗೂ ವಸತಿ ಸಂಸ್ಥೆಗಳು ಯಾವುದೇ ರೀತಿಯ ಅಕ್ರಮ ಅಥವಾ ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡದೆ, ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಉಡುಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರ ರೆಸಾರ್ಟ್ನಲ್ಲಿ ಅಕ್ರಮ ವಿದೇಶಿ ವಲಸಿಗರಿಗೆ ಉದ್ಯೋಗ ನೀಡಿದ ಪ್ರಕರಣ ಗಂಭೀರ : ಅರುಣ್ ಕುಂದರ್ ಕಲ್ಗದ್ದೆ ತೀವ್ರ ಖಂಡನೆ

ಉಡುಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರ ರೆಸಾರ್ಟ್ನಲ್ಲಿ ಯಾವುದೇ ಮಾನ್ಯ ದಾಖಲೆಗಳಿಲ್ಲದ ಅಕ್ರಮ ವಿದೇಶಿ ವಲಸಿಗರಿಗೆ ಉದ್ಯೋಗ ನೀಡಿರುವ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಅತ್ಯಂತ ಗಂಭೀರ, ಕಳವಳಕಾರಿ ಹಾಗೂ ತೀವ್ರವಾಗಿ ಖಂಡನೀಯ ವಿಷಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು ಹಾಗೂ ನ್ಯಾಯವಾದಿಗಳಾದ ಅರುಣ್ ಕುಂದರ್ ಕಲ್ಗದ್ದೆ ತಿಳಿಸಿದ್ದಾರೆ.
ಒಂದೆಡೆ ದೇಶದ ಭದ್ರತೆ, ಕಾನೂನು ಪಾಲನೆ ಎಂಬ ವಿಷಯಗಳನ್ನು ರಾಜಕೀಯ ವೇದಿಕೆಯಲ್ಲಿ ದೊಡ್ಡ ಮಾತುಗಳಾಗಿ ಪ್ರಚಾರ ಮಾಡುವ ಆಡಳಿತ ಪಕ್ಷದ ನಾಯಕರೇ ಮತ್ತೊಂದೆಡೆ ಕಾನೂನನ್ನು ಧಿಕ್ಕರಿಸಿ ಅಕ್ರಮ ಚಟುವಟಿಕೆಗಳಿಗೆ ನೇರವಾಗಿಯೇ ಸಹಕಾರ ನೀಡಿರುವುದು ಅವರ ದ್ವಂದ್ವ ನೀತಿ ಮತ್ತು ದುರಾಡಳಿತವನ್ನು ಬಹಿರಂಗಪಡಿಸಿದೆ. ಅಕ್ರಮ ವಲಸಿಗರನ್ನು ಉದ್ಯೋಗಕ್ಕೆ ನೇಮಿಸುವುದು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಇದು ಸ್ಥಳೀಯ ಯುವಕರ ಉದ್ಯೋಗ ಹಕ್ಕಿಗೆ ನೇರ ಹೊಡೆತ ನೀಡುವ ಗಂಭೀರ ಅಪರಾಧವೂ ಆಗಿದೆ.
ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಣ್ಣ ವಿಷಯವಾಗಿ ಪರಿಗಣಿಸಬಾರದು. ರಾಜಕೀಯ ಒತ್ತಡಗಳು, ಪ್ರಭಾವಗಳು ಅಥವಾ ಪಕ್ಷಪಾತಗಳಿಗೆ ಮಣಿಯದೇ ಸಂಪೂರ್ಣ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರು ಎಂಬುದನ್ನು ಸ್ಪಷ್ಟವಾಗಿ ಪತ್ತೆಹಚ್ಚಿ, ಕಾನೂನಿನ ಪ್ರಕಾರ ಕಠಿಣ ಮತ್ತು ಮಾದರಿಯಾದ ಕ್ರಮ ಕೈಗೊಳ್ಳಬೇಕು ಎಂದು ನಾವು ಬಲವಾಗಿ ಆಗ್ರಹಿಸುತ್ತೇವೆ.
ಇಂತಹ ಅಕ್ರಮ ಚಟುವಟಿಕೆಗಳಿಗೆ ಮೌನಸಮ್ಮತಿ ನೀಡುವ ಅಥವಾ ಪರೋಕ್ಷವಾಗಿ ರಕ್ಷಣೆ ಒದಗಿಸುವ ಯಾವುದೇ ಪ್ರಯತ್ನಗಳನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಕಾರ್ಯರೂಪದಲ್ಲಿ ಸಾಬೀತುಪಡಿಸುವ ಹೊಣೆಗಾರಿಕೆ ಆಡಳಿತದ ಮೇಲಿದೆ. ಈ ಪ್ರಕರಣದಲ್ಲಿ ನ್ಯಾಯ ವಿಫಲವಾದರೆ ಅದು ಸಾರ್ವಜನಿಕ ವಿಶ್ವಾಸಕ್ಕೆ ದೊಡ್ಡ ದ್ರೋಹವಾಗಲಿದೆ ಎಂದು ಅರುಣ್ ಕುಂದರ್ ಕಲ್ಗದ್ದೆ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರ ರೆಸಾರ್ಟಿನಲ್ಲಿ ಅಕ್ರಮ ವಲಸಿಗರು ಪತ್ತೆ ಪ್ರಕರಣ: ಕೂಲಂಕುಶ ಹಾಗೂ ನಿಷ್ಪಕ್ಷಪಾತ ತನಿಖೆಗೆ ಎಸ್ ಡಿ ಪಿ ಐ ಆಗ್ರಹ

ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾಲಿಕತ್ವದ ರೆಸಾರ್ಟಿನಲ್ಲಿ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸವನ್ನು ನೀಡುವ ಮೂಲಕ ಆಶ್ರಯ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ದೇಶದ ಭದ್ರತೆಗೆ ಸವಾಲಾಗಬಲ್ಲ ಈ ಪ್ರಕರಣವನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಲಂಕುಶ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತರವನ್ನು ಬಯಲಿಗೆಲೆಯಬೇಕು ಎಂದು ಎಸ್ಡಿಪಿಐ ಉಡುಪಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾಗಿರುವ ಅಬ್ದುಲ್ ರಹೀಮ್ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಸಾರ್ವಜನಿಕ ವೇದಿಕೆಗಳಲ್ಲಿ ದೇಶಪ್ರೇಮದ, ದೇಶದ ಭದ್ರತೆಯ ಬಗ್ಗೆ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರು ತಮ್ಮ ಸೂರುಗಳಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿರುವುದು ಇವರ ಡೋಂಗಿ ದೇಶಪ್ರೇಮವನ್ನು ಸಾಬೀತುಪಡಿಸುತ್ತದೆ.
ಒಂದು ವೇಳೆ ಬೇರೆ ಪಕ್ಷದವರ ಅಥವಾ ಬೇರೆ ಧರ್ಮದವರ ರೆಸಾರ್ಟ್ಗಳಲ್ಲಿ ಅಕ್ರಮ ವಲಸಿಗರು ಪತ್ತೆಯಾಗುತ್ತಿದ್ದರೆ ಸ್ವಯಂಘೋಷಿತ ದೇಶಪ್ರೇಮಿಗಳ ಚೀರಾಟ ರಂಪಾಟ ಮಿತಿಮೀರುತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಶಾಸಕರ ಮೌನ ಧರ್ಮ ರಕ್ಷಣೆ, ದೇಶಪ್ರೇಮ ಇವೆಲ್ಲವೂ ಕೇವಲ ಅಧಿಕಾರ ಹಿಡಿಯಲು ಇವರಿಗೆ ಬೇಕಾಗಿರುವ ಮೆಟ್ಟಿಲುಗಳೇ ಹೊರತು ಬೇರೇನೂ ಅಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸುತ್ತಿದೆ.
ಬ್ರಹ್ಮಾವರದಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ವಲಸಿಗರು ಯಾರು, ಎಷ್ಟು ಸಮಯದಿಂದ ಇಲ್ಲಿ ವಾಸವಾಗಿದ್ದಾರೆ, ಇವರನ್ನು ಇಲ್ಲಿ ಕೆಲಸಕ್ಕೆ ಇಟ್ಟಿರುವ ಉದ್ದೇಶ ಏನು ಹಾಗೂ ಇವರ ಹಿಂದೆ ಯಾರೆಲ್ಲ ಇದ್ದಾರೆ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ನಡೆಸುವ ರೆಸಾರ್ಟ್ ನಲ್ಲಿ ಯಾವೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನುವುದನ್ನು ಕೂಲಂಕುಶವಾಗಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್ ಡಿ ಪಿ ಐ ಉಡುಪಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ರಹೀಮ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.





