ಪುತ್ತೂರು ಹಾಗೂ ವಿಟ್ಲದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 6 ಕೋಟಿ ರೂ ಅನುದಾನ ನೀಡುವಂತೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ರಸ್ತೆ ಅಭಿವೃದ್ದಿಗೆ 5 ಕೋಟಿ ರೂ ಅನುದಾನ ನೀಡುವಂತೆ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದರು.
ಸಚಿವರನ್ನು ಭೇಟಿಯಾ ಮನವಿ ಸಲ್ಲಿಸಿದ ಅವರು, “ವಿಟ್ಲ ಹಾಗೂ ಪುತ್ತೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಅಗತ್ಯದ ಬೇಡಿಕೆಯಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇದ್ದು, ಇನ್ನೂ ಅದು ಈಡೇರಿಲ್ಲ. ವಿಟ್ಲ ಹಾಗೂ ಪುತ್ತೂರು ಭಾಗದಲ್ಲಿ ಅಂಬೇಡ್ಕರ್ ನಿರ್ಮಾಣ ಮಾಡುವ ಮೂಲಕ ದಲಿತ ಸಮುದಾಯದ ಬೇಡಿಕೆಗೆ ಮನ್ನಣೆ ನೀಡಬೇಕಿದೆ. ಈ ಉದ್ದೇಶದಿಂದ ಸರಕಾರ ಎರಡೂ ಕಡೆಗಳಲ್ಲಿ ಭವನ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನವನ್ನು ಒದಗಿಸಬೇಕು” ಎಂದು ಕೋರಿದ್ದಾರೆ.
ಮನವಿ ಸ್ವೀಕರಿಸಿದ ಸಚಿವರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಇಲಾಖೆಯಿಂದ ಅನುದಾನ ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ ಕಾಲನಿಗಳ ರಸ್ತೆ ಅಭಿವೃದ್ದಿಗೆ ಸಹಕಾರ ನೀಡಲು ಕನಿಷ್ಟ 5 ಕೋಟಿ ಅನುದಾನ ಒದಗಿಸುವಂತೆಯೂ ಶಾಸಕರು ಮನವಿ ಸಲ್ಲಿಸಿದರು.
ಇದನ್ನೂ ಓದಿ: ಪುತ್ತೂರು | ಆಟೋ ಚಾಲಕನ ಮೇಲೆ ಸಂಚಾರಿ ಪೊಲೀಸರ ದರ್ಪ: ಆಟೋ ಚಾಲಕರ ಯೂನಿಯನ್ ಪ್ರತಿಭಟನೆ
“ಪುತ್ತೂರು ಮತ್ತು ವಿಟ್ಲದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂಬುದು ನನ್ನ ಕನಸು. ಈಗಾಗಲೇ ದಲಿತ ಸಮುದಾಯದ ಮುಖಂಡರು ನನ್ನನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ. ಖಂಡಿತವಾಗಿಯೂ ಅನುದಾನ ಸಿಗುತ್ತದೆ ಎಂಬ ನಂಬಿಕೆ ಇದೆ. ದಲಿತ ಸಮುದಾಯದ ಅಭಿವೃದ್ದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಸರಕಾರದ ಯೋಜನೆಗಳು ಅನುಷ್ಟಾನಗೊಂಡಿದೆ. ಅಂಬೇಡ್ಕರ್ ಭವನ ನಿರ್ಮಾಣದ ಕನಸು ಶೀಘ್ರದಲ್ಲೇ ನನಸಾಗಲಿದೆ. ಜೊತೆಗೆ ರಸ್ತೆ ಅಭಿವೃದ್ದಿಗೂ ಅನುದಾನ ಕೇಳಿದ್ದು ಅದನ್ನು ಕೊಡಿಸುವ ಭರವಸೆ ಸಿಕ್ಕಿದೆ” ಎಂದು ಶಾಸಕ ಅಶೋಕ್ ರೈ ವಿಶ್ವಾಸ ವ್ಯಕ್ತಪಡಿಸಿದರು.





