ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾದ ಬಳಿಕ ವಂಚಿಸಿದ ಪ್ರಕರಣ ಸಂಬಂಧ ಇದೀಗ ಡಿಎನ್ಎ ವರದಿ ಬಹಿರಂಗಗೊಂಡಿದೆ. ಆರೋಪಿಯೇ ಮಗುವಿನ ತಂದೆ ಎಂಬುದನ್ನು ವರದಿ ದೃಢಪಡಿಸಿರುವುದಾಗಿ ವಿಶ್ವಕರ್ಮ ಮಹಾಮಂಡಳ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿ ಅವರು ಶನಿವಾರ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು.
ಪುತ್ತೂರು ನಗರಸಭಾ ಸದಸ್ಯೆ, ಬಿಜೆಪಿ ನಾಯಕ ಪಿ ಜಿ ಜಗನ್ನಿವಾಸರಾವ್ ಅವರ ಪುತ್ರ, ಪ್ರಕರಣದ ಆರೋಪಿ ಶ್ರೀಕೃಷ್ಣ ಜೆ. ರಾವ್ ಮಗುವಿನ ತಂದೆ ಎಂಬ ವರದಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಆತನೇ ಮಗುವಿನ ತಂದೆ ಎಂದು ಸಂತ್ರಸ್ತೆಯ ಕುಟುಂಬಕ್ಕೂ ತಿಳಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ವಿರುದ್ಧ ಇಂತಹ ಕೃತ್ಯಗಳು ಗಂಭೀರ ಅನ್ಯಾಯ ಎಂದು ನಂಜುಂಡಿ ಅವರು ಅಭಿಪ್ರಾಯಪಟ್ಟರು.
ಹಿಂದಿನ ಕಾಲದಲ್ಲಿ ಸೀತಾಮಾತೆಗೆ ʼಅಗ್ನಿಪರೀಕ್ಷೆʼ ನಡೆಸುವ ಮೂಲಕ ಸತ್ಯಾಸತ್ಯತೆ ಪತ್ತೆ ಹಚ್ಚಲಾಗಿತ್ತು; ಈಗ ಡಿಎನ್ಎ ಪರೀಕ್ಷೆಯೇ ಅಂತಿಮ ಸತ್ಯವನ್ನು ತೋರಿಸುತ್ತದೆ. ಆರೋಪಿ ಶ್ರೀಕೃಷ್ಣ ಜೆ. ರಾವ್ ಸಂತ್ರಸ್ತೆಯನ್ನು ವಿವಾಹವಾಗಬೇಕು. ಇದು ಇಬ್ಬರಿಗೂ ಅನುಕೂಲ. ಕಾನೂನು ಕ್ರಮಗಳು ನ್ಯಾಯಾಲಯದಲ್ಲಿ ಮುಂದುವರಿಯುತ್ತಲೇ ಇರುತ್ತವೆಯಾದರೂ ಹಿಂದೂ ಸಮಾಜದ ಸಂತ್ರಸ್ತೆಗೆ ನ್ಯಾಯ ದೊರಕಿಸಲು ಆರ್ಎಸ್ಎಸ್, ಬಜರಂಗ ದಳ ಮತ್ತು ಶ್ರೀರಾಮ ಸೇನೆ ಸೇರಿದಂತೆ ಹಿಂದೂ ಪರ ಸಂಘಟನೆಗಳ ನಾಯಕರೂ ಮುಂದೆ ಬರಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Breaking News | ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು!
ಈ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ ಆಚಾರ್ಯ ಮತ್ತು ವಿಶ್ವಕರ್ಮ ಮಹಾಮಂಡಳದ ಪ್ರಮುಖ ಪ್ರತಿನಿಧಿಗಳು ಹಾಜರಿದ್ದರು.
ಆರೋಪಿ ಕೃಷ್ಣ ಜೆ.ರಾವ್ ಕುಟುಂಬ ಈ ಹಿಂದೆ ಸಂತ್ರಸ್ತೆ ಕುಟುಂಬಕ್ಕೆ ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿತ್ತು. ಆದರೆ ಹೆರಿಗೆ ಸಮಯ ಬಂದಾಗ ಆರೋಪಿ ಮದುವೆಗೆ ನಿರಾಕರಿಸಿದ್ದೂ ಅಲ್ಲದೇ ಡಿಎನ್ಎ ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿದ್ದರು. ಇದೀಗ ಡಿಎನ್ಎ ಟೆಸ್ಟ್ ಪಾಸಿಟಿವ್ ಬಂದಿದೆ. ಕೃಷ್ಣ ಜೆ.ರಾವ್ನಿಂದಲೇ ಸಂತ್ರಸ್ತೆ ಗರ್ಭವತಿಯಾಗಿರುವುದು ಸಾಬೀತಾಗಿದೆ. ಹಾಗಾಗಿ ಕೊಟ್ಟ ಮಾತಿನಂತೆ ಆರೋಪಿ ಕೃಷ್ಣ ಜೆ ರಾವ್, ಸಂತ್ರಸ್ತೆಯನ್ನು ವಿವಾಹವಾಗಲೇ ಬೇಕು ಎಂದು ಸಂತ್ರಸ್ತೆ ಪರ ಹೋರಾಟಗಾರರು ಆಗ್ರಹಿಸಿದ್ದಾರೆ.





