ಕೋಲ್ಕತ್ತಾದ ಬಿರ್ಲಾ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಾಜಿಕಲ್ ಮ್ಯೂಸಿಯಂನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ವಿಜ್ಞಾನ ನಾಟಕೋತ್ಸವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸರ್ಕಾರಿ ಕೆ.ಪಿ.ಎಸ್. ಕೊಕ್ಕರ್ಣೆ ಹೈಸ್ಕೂಲ್ ವಿದ್ಯಾರ್ಥಿಗಳು ಅಭಿನಯಿಸಿದ ‘ಕ್ಯೂರಿಯಸ್’ ನಾಟಕವು ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆದು ಎಲ್ಲರ ಗಮನ ಸೆಳೆದಿದೆ.
ಈ ನಾಟಕವು ಪ್ರಶಸ್ತಿ ಪದಕದೊಂದಿಗೆ ರೂ 10,000 ನಗದು ಬಹುಮಾನ*ವನ್ನು ತನ್ನದಾಗಿಸಿಕೊಂಡಿದೆ. ಶಿಕ್ಷಕ ವರದರಾಜ್ ಬಿರ್ತಿ ಅವರು ರಚಿಸಿದ ಈ ನಾಟಕಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ರೋಹಿತ್ ಎಸ್. ಬೈಕಾಡಿ ಅವರು ಪಡೆದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದು, ದಕ್ಷಿಣ ಭಾರತ ವಿಭಾಗ ಮಟ್ಟದಲ್ಲೂ ವಿಜಯಿಯಾಗಿದ್ದ ಈ ತಂಡ, ರಾಷ್ಟ್ರಮಟ್ಟದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ತಂಡಗಳ ಮಧ್ಯೆ ನಡೆದ ಅಂತಿಮ ಸ್ಪರ್ಧೆಯಲ್ಲಿ ಖಾಸಗಿ ಶಾಲೆಗಳನ್ನೂ ಮೀರಿಸಿ ಶ್ರೇಷ್ಠತೆಯನ್ನು ಪ್ರದರ್ಶಿಸಿದೆ.
ಈ ಪ್ರಶಸ್ತಿ ಪಡೆದ ನಾಟಕದಲ್ಲಿ ಪೌರ್ಣಮಿ, ಪಂಚಮಿ, ಶ್ರಾವ್ಯ, ಶ್ರಾವ್ಯ ಸುಂದರ ಪೂಜಾರಿ, ನವಮಿ, ಭವೀಶ್ ಎಂ. ಶೆಟ್ಟಿ, ಸ್ವಸ್ತಿಕ್, ಸೌಜನ್ಯರವರು ಅಭಿನಯಿಸಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ರೋಹಿತ್ ಬೈಕಾಡಿ, ಶಿಕ್ಷಕರಾದ ವರದರಾಜ್ ಬಿರ್ತಿ, ಹರೀಶ್ ಕುಮಾರ್, ಶಿಕ್ಷಕಿ ಸುಪ್ರೀತ ಕೆ, ಹಾಗೂ ಪೋಷಕರ ಪರವಾಗಿ ನಂದಿನಿಯವರು ಭಾಗವಹಿಸಿದ್ದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಜಿಲ್ಲೆಯ ಗೌರವವನ್ನು ಹೆಚ್ಚಿಸಿದೆ.





