ಮೈಸೂರು ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ವಲಯದ ಕೆ.ಪಿ.ಎಸ್. ಕೊಕ್ಕರ್ಣೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ‘ಕ್ಯೂರಿಯಸ್’ ಎಂಬ ನಾಟಕವು ಪ್ರಥಮ ಶ್ರೇಷ್ಠ ನಾಟಕ ಪ್ರಶಸ್ತಿಯನ್ನು ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ವಿಜ್ಞಾನ ತತ್ವ ಮತ್ತು ಸಮಾಜದ ನಡುವಿನ ಸಂಬಂಧವನ್ನು ಮನೋರಂಜನಾತ್ಮಕ ಶೈಲಿಯಲ್ಲಿ ಚಿತ್ರಿಸಿರುವ ಈ ನಾಟಕವನ್ನು ವರದರಾಜ್ ಬಿರ್ತಿ ಅವರು ರಚಿಸಿದ್ದು, ರೋಹಿತ್ ಎಸ್. ಬೈಕಾಡಿ ಅವರು ನಾಟಕಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ವಿದ್ಯಾರ್ಥಿಗಳ ವೈಜ್ಞಾನಿಕ ಚಿಂತನೆ ಹಾಗೂ ಅಭಿನಯ ಕೌಶಲ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಈ ತಂಡಕ್ಕೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಸ್ಥಳೀಯರು ಶುಭಹಾರೈಸಿದ್ದಾರೆ.





