ಕಲ್ಯಾಣ ಕರ್ನಾಟಕದ ಭಾಗಕ್ಕೆ ಸಂವಿಧಾನದಲ್ಲಿ ನೀಡಲಾಗಿರುವ 371(ಜೆ) ಅನುಷ್ಠಾನಕ್ಕೆ ಆಗ್ರಹಿಸಿ 371(ಜೆ) ರಕ್ಷಣಾ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದೆ.
ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ ಹೋರಾಟ ಸಮಿತಿ, ವಿವಿಧ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ಹೋರಾಟಗಾರರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟ ಸಮಿತಿ ಮುಖಂಡ ಪಾರಸಮಲ್ ಸುಖಾಣ, “ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ, ಶಿಕ್ಷಣ ಹಾಗೂ ಅಭಿವೃದ್ಧಿಗಾಗಿ ಕಳೆದ 10 ವರ್ಷದ ಹಿಂದೆ ಈ ಭಾಗಕ್ಕೆ 371(ಜೆ) ಅನುಚ್ಛೇದ ಜಾರಿ ಮಾಡಲಾಯಿತು. ಅದರೆ, ಅದರ ಸಮರ್ಪಕ ಅನುಷ್ಠಾನವಾಗಿಲ್ಲ. ಇಂದಿಗೂ ಸಹ ಉದ್ಯೋಗ ಮತ್ತು ಶಿಕ್ಷಣದಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ, ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು.
“ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ 371(ಜೆ) ಅನುಚ್ಛೇದ ಅನುಷ್ಠಾನಕ್ಕಾಗಿ ಪ್ರತೇಕ ಸಮಿತಿ ಮಾಡಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರಾಜ್ಯ ಮಟ್ಟದ ನೇಮಕಾತಿಯಲ್ಲಿ ಶೇ.8ರಷ್ಟು ಮೀಸಲಾತಿಯನ್ನು ತಪ್ಪಾಗಿ ಪರಿಗಣಸಲಾಗಿದ್ದು, ಅದನ್ನು ತಿದ್ದುಪಡಿ ಮಾಡಿ ಶೇ.20ಕ್ಕೆ ಏರಿಕೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪಿಎಚ್ಡಿ ಪ್ರವೇಶಕ್ಕೆ ಮೀಸಲಾತಿ ನೀಡಬಾರದು ಎಂದು ಸರ್ಕಾರ ಆದೇಶಿಸಿದೆ. ಇದು 371(ಜೆ) ನಿಯಮಗಳಿಗೆ ವಿರುದ್ಧವಾಗಿದೆ. ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಬೇಕು. ಪ್ರಮಾಣ ಪತ್ರ ವಿತರಣೆಯಲ್ಲಿಯೂ ದುರುಪಯೋಗ ಆಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರದೇ ಇರುವವರಿಗೂ ಪ್ರಮಾಣ ಪತ್ರ ನೀಡಲಾಗಿದೆ. ಇದರಿಂದ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಅನ್ಯಾಯವನ್ನು ಸರಿಪಡಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ರಜಾಕ್ ಉಸ್ತಾದ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರದಿಂದ ಬೋರ್ಡ್ನ ಅಡಿಯಲ್ಲಿ ಲೀಗಲ್ ಸೇಲ್ ಸ್ಥಾಪನೆ ಮಾಡಬೇಕು. ಅಧಿಕಾರಿಗಳು ಸಮರ್ಪಕವಾಗಿ ನೇಮಕಾತಿ ಹಾಗೂ ಬಡ್ತಿಗಳನ್ನು ಕಾನೂನು ಅಡಿಯಲ್ಲಿ ತಲುಪಿಸಲು ಈ ಭಾಗದವರನ್ನೆ ಮಾಡಬೇಕು. ಸಮರ್ಪಕ ಅನುಷ್ಠಾನಕ್ಕಾಗಿ ಈಗಾಗಲೇ ಮುಖ್ಯ ಮಂತ್ರಿಗಳಿಗೆ ಈ ಭಾಗದ ಶಾಸಕರು ಮನವಿ ಸಲ್ಲಿಸಿದ್ದಾರೆ.
“ನಂಜುಂಡಪ್ಪ ವರದಿ ಮಾದರಿಯಲ್ಲಿ ಸಮಿತಿ ಅನುಷ್ಠಾನ ಮಾಡಬೇಕು, 371ಜೆ ಅನುಷ್ಠಾನ ಪ್ರಾಧಿಕಾರ ರಚನೆ ಮಾಡಬೇಕು. ವ್ಯಾಜ್ಯಗಳು ನಿವಾರಣೆಗಾಗಿ ಈ ಭಾಗದಲ್ಲಿ ಕಲಬುರಗಿ ಹಾಗೂ ರಾಯಚೂರಿನ ಹೊಸ ನ್ಯಾಯಾಲಯದಲ್ಲಿ ಪ್ರತೇಕವಾಗಿ ಮಾಡಬೇಕು. ಇದರಿಂದ ಸಾಕಷ್ಟು ತೊಂದರೆ ತಪ್ಪಲಿದೆ. ಬೇರೆ ಕಡೆ ಅಭ್ಯರ್ಥಿಗಳು ಅಲೆದಾಡುವುದು ತಪ್ಪುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚುನಾವಣಾ ಫಲಿತಾಂಶಕ್ಕೂ ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎ. ವಸಂತ ಕುಮಾರ್, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಶಾಸಕ ಎ.ಪಾಪಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್ ಶಂಕ್ರಪ್ಪ, ನಗರಸಭೆ ಸದಸ್ಯ ಜಯಣ್ಣ, ಕೆ.ಶಾಂತಪ್ಪ, ಶ್ರೀಕಾಂತರಾವ್ ವಕೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು, ವಿವಿಧ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು, ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.
ವರದಿ : ಹಫೀಜುಲ್ಲ




