ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ 2023ರ ಅಕ್ಟೋಬರ್ನಲ್ಲಿಯೇ ಅಧಿಸೂಚನೆ ಹೊರಡಿಲಾಗಿತ್ತು. ಆದರೂ, ಈವರೆಗೆ ನೇಮಕಾತಿ ನಡೆದಿಲ್ಲ. ಎರಡು ಬಾರಿ ಮುಂದೂಡಲಾಗಿದ್ದ ನಾಮಕಾತಿಗಾಗಿ ಪರೀಕ್ಷೆಯು ಜನವರಿ 17 ಮತ್ತು 18ರಂದು ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್ನಲ್ಲಿ ನಡೆಯಲಿದೆ. ಆದರೆ, ದಲಿತರ ಮೀಸಲಾತಿಯನ್ನು ಸಹಿಸದವರು ನೇಮಕಾತಿ ತಡೆಗೆ ಸಂಚು ಹೆಣೆಯುತ್ತಿದ್ದಾರೆ. ಪರೀಕ್ಷೆಯನ್ನು ತಡೆಯಲು ಯತ್ನಿಸುತ್ತಿದ್ದಾರೆ ಎಂದು ದಲಿತ ವಿದ್ಯಾರ್ಥಿ ಸಂಘ ಆರೋಪಿಸಿದೆ. ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಮುಂದೂಡದೆ, ನಡೆಸಬೇಕು ಎಂದು ಆಗ್ರಹಿಸಿದೆ.
ಪಟ್ಟಭದ್ರರ ಸಂಚು ಮತ್ತು ಪರೀಕ್ಷೆ ನಡೆಸುವ ಕುರಿತು ವಿದ್ಯಾರ್ಥಿ ಸಂಘವು ಪತ್ರಿಕಾ ಹೇಳಿಕೆ ನೀಡಿದೆ. “2023ರ ಅಧಿಸೂಚನೆಯಂತೆ ಮೀಸಲಾತಿ ರೋಸ್ಟರ್ ಬಿಂದುಗಳ ಅಡಿಯಲ್ಲಿ ಮೊದಲ ಬಿಂದು ಪರಿಶಿಷ್ಟ ಜಾತಿಗೆ ಮತ್ತು ಮೂರನೇ ರೋಸ್ಟರ್ ಬಿಂದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುತ್ತದೆ. ಅದರಂತೆ, ಪ್ರತಿ ವಿಷಯದ ಮೊದಲ ಮತ್ತು ಮೂರನೇ ಸ್ಥಾನಗಳು ಕ್ರಮವಾಗಿ ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಒಟ್ಟು 75 ಹುದ್ದೆಗಳಲ್ಲಿ 24 ಹುದ್ದೆಗಳು ಪರಿಶಿಷ್ಟ ಜಾತಿಗೆ ಹಾಗೂ 10 ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ ಒಟ್ಟು 34 ಹುದ್ದೆಗಳು ಮೀಸಲಾಗಿವೆ. ಈ ಮೀಸಲಾತಿಯನ್ನು ಸಹಿಸದ ಪ್ರಬಲ ಜಾತಿಗಳು ನೇಮಕಾತಿಗೆ ನಿರಂತರ ತಡೆಯೊಡ್ಡುತ್ತಿದ್ದಾರೆ” ಎಂದು ಆರೋಪಿಸಿದೆ.
“ನೇಮಕಾತಿಗಾಗಿ 2025ರ ಫೆಬ್ರವರಿ 22ರಂದು ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷೆಗೆ ಕೇವಲ ಒಂದು ವಾರ ಬಾಕಿಯಿದ್ದಾಗಲೇ ಅದನ್ನು ಮುಂದೂಡಲಾಯಿತು. ನಂತರ, 2025ರ ಮಾರ್ಚ್ 5ರಂದು ಪರೀಕ್ಷೆ ಮರುನಿಗದಿಯಾಗಿತ್ತು. ಆದರೆ, ಪರೀಕ್ಷೆಗೆ ಕೇವಲ 12 ಗಂಟೆಗಳು ಬಾಕಿಯಿದ್ದಾಗ ಯಾವುದೇ ಸಮಂಜಸ ಕಾರಣವಿಲ್ಲದೆ ಮತ್ತೆ ಪರೀಕ್ಷೆಯನ್ನು ಮುಂದೂಡಲಾಯಿತು. ಅಲ್ಲದೆ, ಪಟ್ಟಭದ್ರ ಹಿತಾಸಕ್ತಿಗಳು ನೇಮಕಾತಿ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು. ಅರ್ಜಿಯನ್ನು ಆಲಿಸಿದ ಹೈಕೋರ್ಟ್ ಕಲಬುರಗಿ ಪೀಠವು, ಆರಂಭದಲ್ಲಿ ಪರೀಕ್ಷೆಗೆ ಮಧ್ಯಂತರ ತಡೆ ನೀಡಿತ್ತಾದರೂ, ಆನಂತರ ಅರ್ಜಿಯನ್ನು ವಜಾಗೊಳಿಸಿತು. ಅಧಿಸೂಚನೆ ಮತ್ತು ನೇಮಕಾತಿ ಪ್ರಕ್ರಿಯೆಯು ಯುಜಿಸಿ ನಿಯಮಗಳಿಗೆ ಅನುಗುಣವಾಗಿದೆ. ಪರೀಕ್ಷೆಯನ್ನು ನಡೆಸಬೇಕೆಂದು ಆದೇಶಿಸಿತು. ಈ ಆದೇಶವನ್ನು ಹೈಕೋರ್ಟ್ನ ದ್ವಿಸದಸ್ಯ ಪೀಠವು ಎತ್ತಿಹಿಡಿಯಿತು” ಎಂದು ವಿವರಿಸಿದೆ.
ಈ ಲೇಖನ ಓದಿದ್ದೀರಾ?: ಸಾಮಾಜಿಕ ಬಹಿಷ್ಕಾರ ಹಾಕಿದ್ರೆ ಕಂಬಿ ಎಣಿಸೋದು ಪಕ್ಕಾ!
“ಆದರೂ, ಈವರೆಗೆ ಪರೀಕ್ಷೆಯಾಗಲೀ, ನೇಮಕಾತಿಯಾಗಲೀ ನಡೆದಿಲ್ಲ. ಪರೀಕ್ಷಾ ಪ್ರಕ್ರಿಯೆ ಹಾಗೂ ನೇಮಕಾತಿಯನ್ನು ವಿಳಂಬಗೊಳಿಸುವ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. ರಾಯಚೂರು ಕ್ಯಾಂಪಸ್ನಲ್ಲಿ ಪರೀಕ್ಷೆ ನಡೆಸಲು ನಿರಂತರ ಅಡ್ಡಿಗಳು ಎದುರಾಗುತ್ತಿರುವ ಹಿನ್ನೆಲೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಜನವರಿ 17 ಮತ್ತು 18ರಂದು ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಮತ್ತೆ ಮಂದೂಡಬಾರದು. ಬಲಾಢ್ಯರ ಕುಂತ್ರಕ್ಕೆ ವಿಶ್ವವಿದ್ಯಾಲಯದ ಆಡಳಿತವು ಮಣಿಯಬಾರದು” ಎಂದು ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.
ಪರೀಕ್ಷೆ ಮತ್ತು ನೇಮಕಾತಿಗೆ ವಿರೋಧವೊಡ್ಡುತ್ತಿರುವ ಷಡ್ಯಂತ್ರಗಳ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ದಲಿತ ವಿದ್ಯಾರ್ಥಿ ಸಂಘದ ಮುಖಂಡರೊಬ್ಬರು (ಹೆಸರನ್ನು ಗೌಪ್ಯವಾಗಿ ಇರಿಸಲಾಗಿದೆ), “ಈಗ ಒಳಮೀಸಲಾತಿ ವಿಚಾರವನ್ನು ಮುನ್ನೆಲೆಗೆ ತಂದು, ಪರೀಕ್ಷೆಗೆ ಮತ್ತೆ ಅಡ್ಡಿಯುಂಟುಮಾಡುವ ಷಡ್ಯಂತ್ರಗಳು ನಡೆಯುತ್ತಿವೆ. ಆದರೆ, ಈ ನೇಮಕಾತಿಯ ಅಧಿಸೂಚನೆಯು 2023ರಲ್ಲೇ ಬಂದಿರುವುದರಿಂದ, ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯವಾಗುವುದಿಲ್ಲ. ಈ ಅಧಿಸೂಚನೆಗೆ ಒಳಮೀಸಲಾತಿ ಅನ್ವಯವಾಗುವುದಿದ್ದರೆ, ನಾವೇ ಖುದ್ದು ಒಳಮೀಸಲಾತಿಗೆ ಒತ್ತಾಯಿಸುತ್ತಿದ್ದೆವು. ಒಳಮೀಸಲಾತಿ ಜಾರಿಗೂ ಮುನ್ನವೇ ಅಧಿಸೂಚನೆ ಹೊರಡಿಸಲಾಗಿದ್ದು, ಪರೀಕ್ಷೆ ಮತ್ತು ನೇಮಕಾತಿಗೆ ಒಳಮೀಸಲಾತಿ ವಿಚಾರ ಅಡ್ಡಿಯಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.




