ಫ್ಯಾಸಿಸಂ ಎಲ್ಲಾ ದೇಶಗಳಲ್ಲಿ ಜಾರಿಯಲ್ಲಿದೆ. ನಮ್ಮ ಧರ್ಮವೇ ಶ್ರೇಷ್ಠ, ಇತರೆ ಧರ್ಮ ಕನಿಷ್ಠ ಎಂಬ ಭಾವನೆಯಿಂದ ದೌರ್ಜನ್ಯ ಮಾಡಲಾಗುತ್ತಿದೆ. ನಾವೆಲ್ಲಾ ಸಾಂಸ್ಕೃತಿಕ ಚಳುವಳಿ ಜೊತೆ ತೊಡಗಿಸಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ರೆಹಮತ್ ತರೀಕೆರೆ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ’ಸಮುದಾಯ ರಾಯಚೂರು’ ಸಾಂಸ್ಕೃತಿಕ ಸಂಘಟನೆಯ ಸುವರ್ಣ ಮಹೋತ್ಸವದ ಪ್ರಯುಕ್ತ “ಮನುಷ್ಯತ್ವದೆಡೆ ಸಮುದಾಯ-50” ಜಾಥಾ ಕಾರ್ಯಕ್ರಮದಲ್ಲಿ ಫ್ಯಾಸಿಸಂ ಮತ್ತು ಸಾಂಸ್ಕೃತಿಕ ರಾಜಕಾರಣ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.
ಬಣ್ಣ, ಭಾಷೆ, ಸಂಸ್ಕೃತಿಯ ಹೆಸರಿನಲ್ಲಿ ಜನರನ್ನು ವಿಭಜಿಸಿ ದಬ್ಬಾಳಿಕೆ, ದೌರ್ಜನ್ಯ ಮಾಡಲಾಗುತ್ತಿದೆ. ಆಹಾರದ ಹಕ್ಕು ಕಸಿದುಕೊಂಡು ಸಸ್ಯಾಹಾರವೇ ಶ್ರೇಷ್ಠ, ನಾವು ಸೇವಿಸುವ ಆಹಾರವೇ ಇತರರು ಸೇವಿಸಬೇಕು ಎಂಬ ಧೋರಣೆ ನಡೆಯುತ್ತಿದೆ ಎಂದು ತಿಳಿಸಿದರು.
ರಾಜಕೀಯ ಸಮಾನತೆ, ಸಾಂಸ್ಕೃತಿಕ ಹೋರಾಟ ಅನಿವಾರ್ಯವಾಗಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಂಬ ಡಾ.ಬಿ.ಆರ್ ಅಂಬೇಡ್ಕರ್ ಆಶಯದಂತೆ ದೇಶ ನಿರ್ಮಾಣವಾಗಬೇಕು. ಜನರ ಮನಸ್ಸನ್ನು ಕಟ್ಟುವ ಕೆಲಸ ಆಗಬೇಕು. ಸಂವೇಧನಶೀಲತೆ ಜಾಗೃತಗೊಳಿಸಬೇಕು. ನಾವು ಬಿಕ್ಕಟ್ಟಿನ ಕಾಲದಲ್ಲಿದ್ದೇವೆ. ವೈಚಾರಿಕ ಪರಂಪರೆ ಬಸವಾದಿ ಶರಣರಿಂದ ಆರಂಭವಾಗಿತ್ತು, ಅದು ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ, ಭನ್ಸಾರೆ ಅವರೂ ಮುಂದುವರೆಸಿದ್ದರು ಇವರನ್ನು ಸಹಿಸದ ಫ್ಯಾಸಿಸಂ ಶಕ್ತಿ ಕೊಲೆ ಮಾಡಿದ್ದು ಅವರ ವಿಚಾರಗಳನ್ನು ಜೀವಂತವಾಗಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ನಂತರ ಮಾತನಾಡಿದ ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಜಾತಿ, ಧರ್ಮ, ಬಹುಸಂಖ್ಯೆಯ ಹೆಸರಿನಲ್ಲಿ ಅಭಿವ್ಯಕ್ತ ಸ್ವಾತಂತ್ರ್ಯ, ದೇಶದ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇವಲ ಒಂದು ತಂಡ ಮಾತ್ರ ಹಕ್ಕುಗಳ ವಿರುದ್ಧ ಕೆಲಸ ಮಾಡಿತ್ತು ಈಗ ಆಡಳಿತ ವ್ಯವಸ್ಥೆ, ನ್ಯಾಯಾಂಗ, ಮಾಧ್ಯಮಗಳು ಪರೋಕ್ಷವಾಗಿ ಸಮ್ಮತಿ ನೀಡಿವೆ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಗೆ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ರೂ.87.53 ಕೋಟಿ ಅನುದಾನ ಬಿಡುಗಡೆ
ಕಾರ್ಯಕ್ರಮದಲ್ಲಿ ಸಿ.ಬಸಲಿಂಗಯ್ಯ, ಚಂದ್ರಶೇಖರ ಬಾಳೆ, ಕರಿಯಪ್ಪ ಮಾಸ್ತರ್, ವಿ.ಎನ್ ಅಕ್ಕಿ, ಬಿ.ರಾಜಶೇಖರ, ವೀರಹನುಮಾನ ಬಸವರಾಜ ಕಳಸ ಸೇರಿ ಅನೇಕ ಸಾಧಕರಿಗೆ ಸನ್ಮಾನ ಮಾಡಲಾಯಿತು. ಶರಣು ಮಾಲಿಪಾಟೀಲ, ಶ್ಯಾಮಲಾ ಪೂಜಾರ, ಎಸ್. ದೇವೇಂದ್ರ ಗೌಡ ಉಪಸ್ಥಿತರಿದ್ದರು.





