ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ಅಡ್ಡಿ ಉಂಟು ಮಾಡುತ್ತಿರುವ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್, ಆಯುಕ್ತ ರಾಕೇಶ್ ಕುಮಾರ ಹಾಗೂ ಎಸ್.ಸಿ.ಪಿ., ಟಿ.ಎಸ್.ಪಿ. ಕೋ-ಆರ್ಡಿನೇಟರ್ ವೆಂಕಟಯ್ಯ ಸೇರಿ ಮೂವರನ್ನು ಬೇರೆ ಇಲಾಖೆಗೆ ವರ್ಗಾಯಿಸಬೇಕು ಎಂದು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ರಾಯಚೂರು ಜಿಲ್ಲಾ ಘಟಕ ವತಿಯಿಂದ ಕೂಡಲೇ ವರ್ಗಾಯಿಸಿ ಎಂದು ಘೋಷಣೆ ಕೂಗಿ ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಎಸ್ ಮಾರೆಪ್ಪ ವಕೀಲ ಮಾತನಾಡಿ, “ರಾಜ್ಯ ಸರ್ಕಾರ ಕಳೆದ ಒಂದು ತಿಂಗಳಿನಿಂದ ಪರಿಶಿಷ್ಟ ಒಳ ಮೀಸಲಾತಿ ಸಂಬಂಧ ನಿರ್ಣಯಗಳನ್ನು ಕೈಗೊಂಡಿದೆ. ಆದರೆ ಆ ನಿರ್ಣಯಗಳಲ್ಲಿ ಹಲವಾರು ಲೋಪ ದೋಷಗಳಿದ್ದು, ಅಲೆಮಾರಿ ಸಮುದಾಯವನ್ನು ಸೇರಿಸುವ ಮೂಲಕ ಅನ್ಯಾಯ ಮಾಡಲಾಗಿದೆ” ಎಂದು ಆರೋಪಿಸಿದರು.

ಒಳ ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳು ನಿರಂತರವಾಗಿ ದಾರಿ ತಪ್ಪಿಸುತ್ತಿದ್ದು, ಸರ್ಕಾರದಿಂದ ಬರುವ ಆದೇಶಗಳನ್ನು ಪಾಲನೆ ಮಾಡದೇ ಇರುವುದಾಗಿ ಅವರು ದೂರಿದರು. ಬಡ್ತಿ ಹಾಗೂ ಬ್ಲಾಕ್ ಲಾಗ್ ಸಂಬಂಧಿತ ವಿಷಯಗಳಲ್ಲಿಯೂ ತಡೆ ಉಂಟುಮಾಡುತ್ತಿರುವುದರಿಂದ ಸಾವಿರಾರು ಹಿಂದುಳಿದ ಸಮುದಾಯಗಳ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗಮೋಹನದಾಸ್ ಆಯೋಗದ ವರದಿಯನ್ನು ಸ್ವೀಕರಿಸಿ ಬಹಿರಂಗಪಡಿಸಿ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. 59 ಅಲೆಮಾರಿ ಸಮುದಾಯಗಳಿಗೆ ಶೇ.1 ರಷ್ಟು, 17 ಸಮುದಾಯಗಳುಳ್ಳ ಮಾದಿಗ-ಮಾದಿಗ ಸಂಬಂಧಿತ ಸಮುದಾಯಗಳಿಗೆ ಶೇ.6 ರಷ್ಟು, 19 ಸಮುದಾಯಗಳುಳ್ಳ ಛಲವಾದಿ-ಹೊಲೆ ಸಮುದಾಯಗಳಿಗೆ ಶೇ.5 ರಷ್ಟು ಸ್ಪೃಶ್ಯ ಸಮುದಾಯಗಳಾದ ಬಂಜಾರ, ವಡ್ಡ, ಕೊರಮ, ಕೊರಚ, 59 ಅಲೆಮಾರಿ ಸಮುದಾಯಗಳಿಗೆ ಶೇ.5 ರಂತೆ ಒಳಮೀಸಲಾತಿ ಕಲ್ಪಿಸಲಾಯಿತು. 2022 ನೇ ಸಾಲಿನ ರೋಸ್ಟರ್ ಬಿಂದುಗಳಿಗೆ ಸಂಬಂಧಿಸಿದ ಡಿ.ಪಿ.ಎ.ಆರ್. ಕಡತವನ್ನು ದುರುದ್ದೇಶದಿಂದ ವಾಪಸ್ ಮಾಡುವ ಸಂಭವವಿದೆ. ಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣವೇ ಸಮಾಜ ಕಲ್ಯಾಣ ಇಲಾಖೆಯು ಒಂದೇ ಸಮುದಾಯದ ಹತೋಟಿಯಲ್ಲಿ ಇರುವುದರಿಂದ ಇತರೆ ಪರಿಶಿಷ್ಟ ಸಮುದಾ ಯಗಳ ಹಿತಾಸಕ್ತಿಯನ್ನು ಬಲಿಕೊಡಲಾಗುತ್ತದೆ ಎಂದು ದೂರಿದರು.

ಸಮಾಜ ಕಲ್ಯಾಣ ಸಚಿವ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿನ ಪ್ರಮುಖ ಹುದ್ದೆಗಳನ್ನು ಹೊಂದಿದ ಹೊಲೆಯ-ಛಲವಾದಿ ಸಮುದಾಯದ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು, ಒಂದೇ ಸಮುದಾಯದ ಆಡಳಿತ ಆ ಸಮುದಾಯದ ಪಕ್ಷಪಾತಿತನವೇ ಆಗುತ್ತದೆ ಎಂದು ಆಪಾದಿಸಿದರು. ಹೊಲೆಯ-ಛಲವಾದಿ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಊಟಿ ಚಿನ್ನದ ಗಣಿ ರಸ್ತೆ ದುರಸ್ತಿಗೆ ಕೆಪಿಆರ್ ಎಸ್ ಆಗ್ರಹ
ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ, ಶಿವರಾಯ ಅಕ್ಕರಕಿ, ಎಸ್ ಮಾರೆಪ್ಪ ವಕೀಲ, ಹನುಮಂತ ಮನ್ನಾಪೂರ, ನರಸಿಂಹಲು ಮರ್ಚಟಾಳ, ಶ್ರೀನಿವಾಸ ಕೊಪ್ಪರ, ತಾಯಪ್ಪ ಗಧಾರ, ಲಕ್ಷ್ಮಣ ಕಲ್ಲೂರು, ಹನುಮಂತ ಕೋಟೆ ಸೇರಿದಂತೆ ಸಮುದಾಯದ ಅನೇಕರು ಇದ್ದರು.





