ವೈಟಿಪಿಎಸ್ ಥರ್ಮಲ್ ಪವರ್ ಕಾರ್ಖಾನೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿದ್ದಲು ಸಾಗಾಟದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸೇನೆ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿ ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಯಚೂರು ತಾಲ್ಲೂಕಿನ ವೈಟಿಪಿಎಸ್ ಥರ್ಮಲ್ ಪವರ್ ಕಾರ್ಖಾನೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಅಕ್ರಮ ಕಲ್ಲಿದ್ದಲು ಸಾಗಾಟ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹೊರಗಡೆ ಲಕ್ಷಾಂತರ ರೂಪಾಯಿಗೆ ಸಣ್ಣ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಭ್ರಷ್ಟಾಚಾರ ನಡೆದಿದೆ ಎಂದು ಸಂಘಟನಾಕಾರರು ಆರೋಪಿಸಿದರು.
ಈ ಕುರಿತು ಮಾತನಾಡಿದ ದಲಿತ ಸೇನೆ ಜಿಲ್ಲಾಧ್ಯಕ್ಷ ಮಾರುತಿ ಚಿಕ್ಕಸೂಗೂರು, ವೈಟಿಪಿಎಸ್ ಕಾರ್ಖಾನೆಯೊಳಗೆ ಬರುವ ಕಲ್ಲಿದ್ದಲು ಸಾಗಾಟದಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿದ್ದು, ಕಾರ್ಖಾನೆಗೆ ಬಂದ ಕಲ್ಲಿದ್ದಲು ವ್ಯಾಗನ್ಗಳನ್ನು ಪೂರ್ಣ ಪ್ರಮಾಣದಲ್ಲಿ ಖಾಲಿ ಮಾಡದೆ, ಅಲ್ಪ ಪ್ರಮಾಣ ಉಳಿಸಿಕೊಂಡು ಕಾರ್ಖಾನೆಯ ಹೊರಗಡೆ ತಂದು ಯರಮರಸ್ ರೈಲ್ವೇ ನಿಲ್ದಾಣದ ಬಳಿ ಸಂಪೂರ್ಣ ಖಾಲಿ ಮಾಡಿ ಕೆಲವು ಸಣ್ಣ ಕಾರ್ಖಾನೆಗಳಿಗೆ ಲಕ್ಷಾಂತರ ರೂಪಾಯಿಗಳಿಗೆ ಕಲ್ಲಿದ್ದಲು ಮಾರಾಟ ಮಾಡಲಾಗುತ್ತಿದೆ ಎಂದರು.
ಈ ಅಕ್ರಮ ವ್ಯವಹಾರದಲ್ಲಿ ವೈಟಿಪಿಎಸ್ನ ಹಿಂದಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಗಂಗಾಧರ (ಹಾಲಿ ಟಿ.ಡಿ., ಬೆಂಗಳೂರು), ಸೆಕ್ಯೂರಿಟಿ ಇನ್ಚಾರ್ಜ್ ಎಇಇ ರವೀಶ್ ಹಾಗೂ ಪವರ್ಮ್ಯಾಕ್ ಕಂಪನಿ ಇನ್ಚಾರ್ಜ್ ಸುರೇಂದ್ರ ಅವರು ಪರಸ್ಪರ ಕೈಜೋಡಿಸಿ ನೇರವಾಗಿ ಪಾಲುದಾರರಾಗಿದ್ದಾರೆ. ಇಂತಹ ಆರೋಪಗಳ ನಡುವೆಯೂ ಗಂಗಾಧರ ಅವರಿಗೆ ಟಿ.ಡಿ. ಹುದ್ದೆಗೆ ಮುಂಬಡ್ತಿ ನೀಡಿರುವುದು ಕಾನೂನುಬಾಹೀರ ಮತ್ತು ಅನುಮಾನಾಸ್ಪದವಾಗಿದೆ ಎಂದರು.
ವೈಟಿಪಿಎಸ್ ಮತ್ತು ಆರ್ಟಿಪಿಎಸ್ ಥರ್ಮಲ್ ಪವರ್ ಘಟಕಗಳು ರಾಷ್ಟ್ರಮಟ್ಟದಲ್ಲಿ ಐಎಎಸ್ ಅಧಿಕಾರಿಗಳ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದರೂ, ಜಿಲ್ಲಾಮಟ್ಟದಲ್ಲಿ ಯಾವುದೇ ಅಹಿತಕರ ಘಟನೆಗಳು ಹಾಗೂ ಕುಂದುಕೊರತೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಆದ್ದರಿಂದ ಕಲ್ಲಿದ್ದಲು ಸಾಗಾಟ, ಪವರ್ಮ್ಯಾಕ್ ಕಂಪನಿಗೆ ಅಕ್ರಮವಾಗಿ ಸಂದಾಯವಾಗಿರುವ ಬೋಗಸ್ ಬಿಲ್ಲುಗಳು ಹಾಗೂ ಕಾರ್ಖಾನೆಯ ನಿರ್ವಹಣೆಯಲ್ಲಿ ನಡೆದಿರುವ ಹಗರಣಗಳ ಕುರಿತು ಸಮಗ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ; ಯುವಕ ಬಂಧನ
ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಜಾವೀದ್ ಖಾನ್, ಸುರೇಶಬಾಬು, ಬಾಬು, ಬಾವುದ್ದೀನ್ ಸೇರಿದಂತೆ ಇನ್ನಿತರರು ಇದ್ದರು




