ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದ್ದು ಕಲ್ಲಿದ್ದಲು ಆಧಾರಿತ ಘಟಕಗಳು ಸೇರಿದಂತೆ ಇತರೆ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆ ಇಳಿಕೆಯಾಗುತ್ತಿದೆ.
ರಾಯಚೂರು ಶಾಖೋತ್ಪನ್ನ ಕೇಂದ್ರದ ಐದು ಘಟಕಗಳು ಸ್ಥಗಿತಗೊಂಡಿದ್ದು, ಉಳಿದ ಮೂರು ಘಟಕಗಳಲ್ಲಿಯೂ ಉತ್ಪಾದನೆ ಇಳಕೆಯಾಗಿದೆ.
1720 ಮೆ ವ್ಯಾ ವಿದ್ಯುತ್ ಸಾಮರ್ಥ್ಯವಿರುವ ಆರ್ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ 160 ಮೆ ವ್ಯಾ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ. ಇನ್ನೂ ವೈಟಿಪಿಎಸ್, ಬಿಟಿಪಿಎಸ್ ವಿದ್ಯುತ್ ಘಟಕಗಳು ಪೂರ್ಣಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿವೆ. ಈ ಮಧ್ಯೆ ಮಳೆ ಕುಸಿತವಾದ ಪರಿಣಾಮ ಜಲಾಧಾರಿತ ಘಟಕಗಳು ಉತ್ಪಾದನೆ ನಿಲ್ಲಿಸಿವೆ.
ರಾಜ್ಯದಲ್ಲಿ 10 ಸಾವಿರ ಮೆ ವ್ಯಾ ವಿದ್ಯುತ್ ಬೇಡಿಕೆಯಿದ್ದು, ಉತ್ಪಾದನೆ ಮಾತ್ರ 2750 ಮೆ ವ್ಯಾ ಆಗುತ್ತಿದೆ. ಕೇಂದ್ರ ಗ್ರೀಡ್ ಹಾಗೂ ಸೋಲಾರ್ ಮೂಲದಿಂದ ವಿದ್ಯುತ್ ಲಭ್ಯವಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಸಾಧ್ಯವಾಗದೇ ಇರುವದರಿಂದ ಪೂರೈಕೆಯನ್ನು ಸರಿದೂಗಿಸಲು ಸಮಸ್ಯೆ ಎದುರಾಗಿದೆ.
ಕಲ್ಲಿದ್ದಲು ಕೊರತೆ, ತಾಂತ್ರಿಕ ಸಮಸ್ಯೆಯಿಂದ ಹೊರ ಬಾರದ ಕಲ್ಲಿದ್ದಲು ಘಟಕಗಳು ನಿರಂತರ ವಿದ್ಯುತ್ ಉತ್ಪಾದನೆ ಸಮಸ್ಯೆ ಸುಳಿಗೆ ಸಿಲುಕಿದತಾಗಿದೆ. ರಾಜ್ಯ ಸರ್ಕಾರ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ.
“ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ದುರಸ್ತಿ, ತಾಂತ್ರಿಕ ಸಮಸ್ಯೆ ಹೆಸರಿನಲ್ಲಿ ವಿದ್ಯುತ್ ಕಡಿತ ನಡೆಯುತ್ತಲೇ ಇದೆ. ಶಾಖೋತ್ಪನ್ನ ಘಟಕಗಳ ನಿರ್ವಹಣೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಉತ್ಪಾದನೆಯಲ್ಲಿ ಇಳಿಕೆಯಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಿ: ಆರ್.ಇಂದಿರಾ
ಸೋಲಾರ್, ಪವನ ಸೇರಿದಂತೆ ಇತರೆ ಮೂಲಗಳ ಉತ್ಪಾದನೆಯಿಂದ ಬೇಡಿಕೆ ಸಮತೋಲನ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ವಿದ್ಯುತ್ ಖರೀದಿ ಪ್ರಕ್ರಿಯೆಯೂ ಪ್ರಾರಂಭಗೊಂಡಿದೆ. ಯುಪಿಸಿಎಲ್, ಜಿಂದಾಲ್ ಸೇರಿದಂತೆ ಇತರೆ ಖಾಸಗಿ ಕಂಪನಿಗಳಿಂದ ಖರೀದಿ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುತ್ತಿದೆ. ಜಲಾಶಯಗಳ ಸಂಗ್ರಹ ಕುಸಿಯುತ್ತಿದೆ. ಮಳೆಯಾದರೆ ಮಾತ್ರ ವಿದ್ಯುತ್ ಬೇಡಿಕೆ ಇಳಿಕೆಯಾಗುವ ಸಾಧ್ಯತೆಯಿದೆ.
ರಾಯಚೂರು ಜಿಲ್ಲಾ ಸಿಟಿಜನ್ ಜರ್ನಲಿಸ್ಟ್ ಹಫೀಜುಲ್ಲ ಮಾಹಿತಿ ಆಧರಿಸಿದ ವರದಿ





