ಬಿಲ್ ಪಾವತಿ ಮಾಡದ ಕಾರಣಕ್ಕೆ ಸಣ್ಣ ಗುತ್ತಿಗೆದಾರರ ದೇವದುರ್ಗ ಘಟಕ ವತಿಯಿಂದ ಎನ್ಡಿ ವಡ್ಡರ್ ಕಂಪನಿಯ ಮಾಲೀಕರಾದ ಮಾನಪ್ಪ ವಜ್ಜಲ್ ಇವರ ಧೋರಣೆಯನ್ನು ಖಂಡಿಸಿ ಲಿಂಗೂಗೂರು ಪಟ್ಟಣದ ಸಹಾಯಕ ಆಯುಕ್ತರ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಿದರು.
ಉಪಗುತ್ತಿಗೆದಾರರಿಗೆ ಕಳೆದ ಏಳು ತಿಂಗಳಿಂದ ಒಂದು ರೂಪಾಯಿ ಬಿಲ್ ನೀಡಿಲ್ಲ. ಕಳೆದ ವರ್ಷಗಳಿಂದ ಕಂಪನಿಯ ಮಾಲೀಕರಾದ ಕರಿಯಪ್ಪ ವಜ್ಜಲ್ ಹಾಗೂ ಶಾಸಕ ಮಾನಪ್ಪ ವಜ್ಜಲ್ ಅವರನ್ನು ಹತ್ತಾರು ಬಾರಿ ಭೇಟಿ ನೀಡಿ ಬಿಲ್ ಪಾವತಿ ಮಾಡುವಂತೆ ಮನವಿ ಮಾಡಿದರು ಸ್ಪಂದಿಸಲಿಲ್ಲ. ಬಿಲ್ ಪಾವತಿ ಮಾಡದೇ ಸುಳ್ಳು ಹೇಳುತಾ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಉಪಗುತ್ತಿಗೆ ಪಡೆದ ಶರಣೇಗೌಡ ಸುಂಕೇಶ್ವರಹಾಳ ದೇವದುರ್ಗ ನಾರಾಯಣಪುರ ಬಲದಂಡೆ ಕಾಲುವೆ ಜೀರ್ಣೋದ್ಧಾರ ಹಾಗೂ ದುರಸ್ತಿ ಕಾಮಗಾರಿಯನ್ನು ಎರಡು ಪ್ಯಾಕೇಜ್ಗಳಲ್ಲಿ ಒಟ್ಟು 1466 ಕೋಟಿ ಮೊತ್ತದ ಗುತ್ತಿಗೆಯನ್ನು ಪಡೆದ ಎನ್.ಡಿ.ವಡ್ಡರ್ ಮತ್ತು ಕಂಪನಿ ಎರಡನೇ ಪ್ಯಾಕೇಜ್ನಲ್ಲಿ ಉಪ ಗುತ್ತಿಗೆಯನ್ನು ನೀಡಿರುವ ಕಂಪನಿ ಕೆಲಸ ಮಾಡಿಸಿಕೊಂಡು ಬಿಲ್ ಪಾವತಿ ಮಾಡದೇ ಉಪ ಗುತ್ತಿಗೆದಾರರಿಗೆ ಪಂಗನಾಮ ಹಾಕಲು ಹೊರಟಿದೆ ಎಂದು ಆರೋಪಿಸಿದರು.
24-04-2024 ರಂದು ಉಪಗುತ್ತಿಗೆ ಒಪ್ಪಂದವನ್ನು ಮಾಡಿಕೊಂಡು ಡಿಸ್ಟ್ರಿಬ್ಯೂಟರ್ ಗಳ ಒಟ್ಟು 13.5 ಕಿ.ಮೀ. ಕಾಮಗಾರಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಕಾಮಗಾರಿಯ ಅಂದಾಜು ಮೊತ್ತ 4.87 ಕೋಟಿ ರೂ.ಗಳು. ಪಡೆದುಕೊಂಡು 8 ಜನ ಸೇರಿ ಕೊಂಡು ಕಾಮಗಾರಿಯನ್ನು ಮುಗಿಸಿ, ಇಲಾಖೆಯಿಂದ ಕಾಮಗಾರಿ ಮುಗಿದ ಪ್ರಮಾಣ ಪತ್ರವನ್ನು ಸಹ ಪಡೆದಿರುತ್ತೇವೆ. ಆದರೆ ಎನ್.ಡಿ.ವಡ್ಡರ್ ಮತ್ತು ಕಂಪನಿ 1 ವರ್ಷ 6 ತಿಂಗಳು ಗತಿಸಿದರು ನಮಗೆ ಬಿಲ್ ಪಾವತಿ ಮಾಡುತ್ತಿಲ್ಲ. ಉಪ ಗುತ್ತಿಗೆ ಒಪ್ಪಂದದ ಪ್ರಕಾರ ಕಾಮಗಾರಿ ಮುಗಿದ 10 ದಿನಗಳೊಳಗಾಗಿ ಬಿಲ್ ಪಾವತಿ ಮಾಡಬೇಕಾಗಿತ್ತು. ಆದರೆ ಈ ಒಪ್ಪಂದವನ್ನು ಕಂಪನಿ ಉಲ್ಲಂಘಿಸಿ ನಮಗೆ ಬಿಲ್ ಪಾವತಿ ಮಾಡದೇ ತಮ್ಮ ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದರು.
ಎನ್ಡಿ ವಡ್ಡರ್ ಕಂಪನಿಗೆ ಸರ್ಕಾರ ಹೀಗಾಗಲೇ 375.3 ಕೋಟಿ ಬಿಲ್ ಪಾವತಿ ಮಾಡಿದ್ದರೂ ಸಹ ನಮಗೆ ಇನ್ನು ಬಿಲ್ ಪಾವತಿಯಾಗಿಲ್ಲ ಎಂದು ಸುಳ್ಳು ಹೇಳುವ ಮಾನಪ್ಪ ವಜ್ಜಲ್ ಶಾಸಕನಾಗಿರಲು ಅರ್ಹನಲ್ಲ. ನಮ್ಮ ಬಿಲ್ ಪಾವತಿ ಮಾಡದ ಮಾನಪ್ಪ ವಜ್ಜಲ್ ಕ್ಷೇತ್ರ ಜನತೆಯ ಸಮಸ್ಯೆ ಹೇಗೆ ಪರಿಹಾರ ಮಾಡಲು ಸಾಧ್ಯ. ಅವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ನಮ್ಮ ಬಿಲ್ ಪಾವತಿ ಮಾಡಬೇಕು ಇಲ್ಲವಾದರೆ ನಮ್ಮ ಪ್ರಾಣ ಹೋಗುವವರೆಗೆಈ ಧರಣಿಯನ್ನು ಕೈಬಿಡುವುದಿಲ್ಲ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಬಿಲ್ ಪಾವತಿಯಲ್ಲಿ ವಿಳಂಬ ; ಶಾಸಕ ಮಾನಪ್ಪ ವಜ್ಜಲ ಮನೆ ಮುಂದೆ ಉಪವಾಸ ಸತ್ಯಾಗ್ರಹ
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ತುಕರಾಮ್, ಅಂಜಿನಯ್ಯ ಬಡಿಗೇರ, ಪರಮಾನಂದ ಸಂಕೇಶ್ವರಹಾಳ, ವಿರೇಶ ಹುನಗಂದ್, ಶಿವುಕುಮಾರ ಸಾಹುಕಾರ, ಅಮರೇಶ ಇಟಗಿ, ರಂಗಪ್ಪ ಮುಸ್ಠೂರು, ಆದೇಶ ನಗನೂರು, ಚಿದಾನಂದ ಕಸಬಾಲಿಂಗಸುಗೂರು, ಬಸವರಾಜ ಬಡಿಗೇರ ಸೇರಿ ಇತರರು ಇದ್ದರು.





