ಮಸ್ಕಿ ತಾಲ್ಲೂಕು ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಇ–ಖಾತ ನೀಡುವಲ್ಲಿ ಅತಿಯಾದ ವಿಳಂಬ ಮಾಡಿ, ಒಂದು ಹಂತದ ಲಂಚ ಸ್ವೀಕರಿಸಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳ ವಿರುದ್ಧ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆ ಸೇರಿದಂತೆ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಂತೆಬಜಾರಿನಿಂದ ಪಂಚಾಯಿತಿ ಕಚೇರಿವರಗೆ ಅಣಕು ಭಿಕ್ಷಾಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಸಾರ್ವಜನಿಕ ಸೇವೆಗಳ ಹೆಸರಿನಲ್ಲಿ ಭ್ರಷ್ಟಾಚಾರ ಜಾರಿಗೊಳ್ಳುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಕೆಲವು ತಿಂಗಳುಗಳ ಹಿಂದೆ ಸಿಂಧನೂರಿನ ರಿಯಲ್ ಎಸ್ಟೇಟ್ ಉಧ್ಯಮಿ ಖಾಜಾಸಾಬ್ ಮತ್ತು ಪಾಲುದಾರರು ನಮೋನೆ 3 ಕೋರಿ ಬಳಗಾನೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಬಡಾವಣೆಯ ನಿವೇಶನಗಳ ನಮೂನೆ ಮೂರನ್ನು ಕೋರಿ ಅರ್ಜಿ ಸಲ್ಲಿಸಿದ್ದರು,ಅದನ್ನು ಕೇಳಲು ಪಟ್ಟಣ ಪಂಚಾಯ್ತಿಯ ಕಾರ್ಯಾಲಯಕ್ಕೆ ಹೋದಾಗ ಐದು ಲಕ್ಷ ಲಂಚನೀಡಿದರೆ ಮಾತ್ರ ನಮೂನೆ ಮೂರನ್ನು ಕೊಡುತ್ತೇವೆ ಇಲ್ಲವಾದರೆ ಇಲ್ಲವೆಂದು ಮಾತಿನ ಚಕಮಕಿ ನಡೆದು ದೈಹಿಕ ಹಲ್ಲೆಯೂ ಆಗಿ ಬಳಗಾನೂರು ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ.
ಪ್ರತಿಭಟನೆ ಉದ್ದೇಶಿಸಿ ಕೆಆರ್ಎಸ್ ಪಕ್ಷದ ಮುಖಂಡ ಕೆ. ನಿರುಪಾದಿ ಗೋಮರ್ಸಿ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡುವುದು, ಅಥವಾ ಎಂಪಿ–ಎಂಎಲ್ಎಗಳ ಶಿಫಾರಸು ಕಡ್ಡಾಯವಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲದಿದ್ದರೆ ಅಧಿಕಾರಿಗಳ ಕೈಕಾಲು ಹಿಡಿದು ಕೋರಿಕೆಯಿಡಬೇಕಾದ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕ ಸೇವೆಗಳ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ದಿನೇದಿನೇ ಮಿತಿಮೀರಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳ ಅಡಿಯಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್. ನಜೀರ್ ಆಕ್ರೋಶ ವ್ಯಕ್ತಪಡಿಸಿದರು.
“ಸಾರ್ವಜನಿಕರ ಸೇವಕರಾಗಬೇಕಾದ ಸಿಬ್ಬಂದಿ ಜನರ ರಕ್ತ ಹೀರುವ ರಕ್ತಪಿಪಾಸುಗಳಾಗಿ ವರ್ತಿಸುತ್ತಿದ್ದಾರೆ. ಸಾಮಾನ್ಯ ನಾಗರಿಕರು ಕೆಲಸಕ್ಕಾಗಿ ದೂರವಾಣಿ ಮಾಡಲಾದರೂ ಕರೆ ಸ್ವೀಕರಿಸುವುದಿಲ್ಲ. ಆದರೆ ‘ಲಂಚ ಕೊಡುತ್ತೇವೆ ಸರ್’ ಎಂದರೆ ಕ್ಷಣಾರ್ಧದಲ್ಲಿ ಹಾಜರಾಗುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ನಂತರ ನೂತನವಾಗಿ ಬಂದಿರುವ ಮುಖ್ಯಾಧಿಕಾರಿ ಗೋಪಾಲನಾಯಕರಿಗೆ ಮನವಿ ಪತ್ರ ನೀಡಿ ಶೀಘ್ರ ನಮೂನೆ ಮೂರನ್ನು ನೀಡುವಂತೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಲಿತ ಯುವಕನ ಹತ್ಯೆ ಪ್ರಕರಣ; ಆರೋಪಿತರ ಬಂಧನಕ್ಕೆ ಭೀಮ್ ಆರ್ಮಿ ಆಗ್ರಹ
ಪ್ರತಿಭಟನೆಯಲ್ಲಿ ಖಾಜಾಸಾಬ್, ಎಂ ಡಿ ಖಾಜಾ ಶೇಡ್ಮಿ, ಬಸವರಾಜ ಹಿರೇಕಡುಬೂರು, ನಿರುಪಾದಿ ಮುರಾರಿ, ಹುಸೇನ್ ಸಾಬ್, ಸೇರಿದಂತೆ ಹಲವರಿದ್ದರು.





