ಮನರೇಗಾ ಯೋಜನೆಯಡಿ 200 ದಿನಗಳ ಕೆಲಸ ಮತ್ತು ₹600 ಕೂಲಿ ನಿಗದಿ ಮಾಡಬೇಕು. ಬಾಕಿ ಕೂಲಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮ ಪಂಚಾಯತಿ ಪಿಡಿಒಗೆ ಗ್ರಾಕೂಸ ಕಾರ್ಯಕರ್ತರು ಹಕ್ಕೊತ್ತಾಯ ಸಲ್ಲಿಸಿದ್ದಾರೆ. “ಬರಕ್ಕೆ ತುತ್ತಾಗಿರುವ ಕೂಲಿಕಾರರಿಗೆ 200 ದಿನಗಳ ಕೆಲಸ ಮತ್ತು ದಿನಕ್ಕೆ ₹600 ಕೂಲಿ ನೀಡಬೇಕು. ಬಾಕಿ ಕೂಲಿಯನ್ನು ಪಾವತಿಸಬೇಕು. ಇಂದಿನಿಂದಲೇ ಕೆಲಸ ನೀಡಬೇಕು. ಗುತ್ತಿಗೆದಾರರ ಉದ್ಯೋಗ ಖಾತ್ರಿ ರಕ್ಷಿಸಿ ಯಂತ್ರದ ಹಾವಳಿಯನ್ನು ತಪ್ಪಿಸಬೇಕು. ಕೃಷಿ ಕೂಲಿಕಾರರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಬೇಕು. ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ವಿಸ್ತರಿಸಬೇಕು” ಎಂದು ಒತ್ತಾಯಿಸಿದರು.
“ಕೂಲಿಕಾರರು ಬಯಸುವ ವೇಳೆಯಲ್ಲಿ ಕೆಲಸ ಕಲ್ಪಿಸಬೇಕು. ಮಹಿಳೆಯರು, ಅಂಗವಿಕಲರು, 11 ವರ್ಷ ಮೇಲ್ಪಟ್ಟವರಿಗೆ ಆವರಣದಲ್ಲಿ ನರ್ಸರಿ ಮಾಡುವಂತ ಗಿಡಗಳಿಗೆ ನೀರು ಹಾಕುವಂತ ಕೆಲಸಗಳನ್ನು ಕಲ್ಪಿಸಬೇಕು. ಎಸ್ಎಂಆರ್ ಅಂದಾಜು ಪಟ್ಟಿ, ಇತರೆ ವಿವರಗಳನ್ನು ಕನ್ನಡದಲ್ಲಿ ನುಡಿಸಿ ಕಾಯಕ ಗುಂಪಿನ ಕಾಯಕ ಬಂಧುಗೆ ನೀಡಬೇಕು” ಎಂದು ಮನವಿ ಮಾಡಿದರು.
“ಎನ್ಎಂಆರ್ ಆ್ಯಪ್ನಿಂದ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಕೂಲಿಕಾರರನ್ನು
ರಕ್ಷಿಸಬೇಕು. ಕೆಲಸ ಮಾಡಿದ ದಿನಗಳ ಎನ್ಎಂಆರ್ಗಳನ್ನು ಶೂನ್ಯ (ಜಿರೋ) ಮಾಡಿ ಕೂಲಿಕಾರರನ್ನು ಅಲೆಸುವುದನ್ನು ನಿಲ್ಲಿಸಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದರ ಹೊಣೆ ಹೊರಬೇಕು. ಮೊದಲ ಮತ್ತು ಎರಡನೇ ಹಾಜರಾತಿಯನ್ನು ಕೆಲಸ ಮುಗಿದ ಕೂಡಲೇ ಅಥವಾ 4 ಗಂಟೆ ಅವಧಿಯನ್ನು ಶಿಸ್ತಿನಿಂದ ಪಾಲಿಸಬೇಕು. ಕೆಲಸ ಮುಗಿದ ಮೇಲೆ ಕಾಯಿಸುವುದನ್ನು ತಪ್ಪಿಸಬೇಕು. ಕಾಯಕ ಬಂಧುಗಳಿಗೆ 7 ದಿನದ ಭೌತಿಕ ತರಬೇತಿ ಕೊಟ್ಟು, ಅವರಿಗೆ ಡೈರಿ, ಟೇಪು, ಕ್ಯಾಲ್ಕುಲೇಟರ್ ಮತ್ತು ಮೊಬೈಲ್ಗಳನ್ನು ನೀಡಬೇಕು” ಎಂದು ವಿವರಿಸಿದರು.
“ಅರೆಕುಶಲ ಕಾರ್ಮಿಕರೆಂದು ಪರಿಗಣಿಸಿ ಸಾಮಾಗ್ರಿ ವೆಚ್ಚದಡಿ ಇವರ ಕೂಲಿಯನ್ನು ಪಾವತಿಸಬೇಕು. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ನೀಡಬೇಕು. ಕುಡಿಯುವ ನೀರು, ನೆರಳು, ಔಷಧಿ ಕಿಟ್ಗಳ ವ್ಯವಸ್ಥೆ ಕಲ್ಪಿಸಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತಾಯಂದಿರು ಕೆಲಸಕ್ಕೆ ಬಂದರೆ ಆ ಮಕ್ಕಳ ಪಾಲನೆ ಮಾಡಬೇಕು. ಪ್ರತಿ ತಿಂಗಳು ಪಂಚಾಯಿತಿ ಕಚೇರಿಯಲ್ಲಿ ರೋಜ್ಗಾರ್ ದಿವಸವನ್ನು ಆಚರಿಸಬೇಕು. ಪ್ರತಿ ಕಾಯಕ ಗುಂಪಿನ ರಚನೆಗೆ ಕನಿಷ್ಠ 25 ಗರಿಷ್ಟ 50 ಮಂದಿ ಕೂಲಿಕಾರರು ಇರಬೇಕೆಂಬ ನಿಯಮ ರೂಪಿಸಿ 50 ಮಂದಿ ಕಾರ್ಮಿಕರು ಇರಲೇಬೇಕೆಂಬುದನ್ನು ಕೈಬಿಡಬೇಕು. ಉದ್ಯೋಗ ಖಾತ್ರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೂಲಿಕಾರರ ಅಗತ್ಯತೆ ಈಡೇರಿಕೆಗೆ ಆಗ್ರಹ
“ಕೂಲಿಕಾರರು ಕೇಳುವಷ್ಟು ದಿನದ ಕೆಲಸ ಕಲ್ಪಿಸಬೇಕು. ಉದ್ಯೋಗ ಖಾತ್ರಿ ಕೆಲಸಕ್ಕೆ ತೊಡಗಿಸಿಕೊಂಡಿದ್ದಾಗ ಅಪಘಾತವಾದರೆ, ಮೃತಪಟ್ಟರೆ 1 ಲಕ್ಷ ರೂ. ಪರಿಹಾರ ನೀಡಬೇಕು. ಗಾಯಾಳುಗಳಿಗೆ ಉಚಿತ ಉನ್ನತ ಚಿಕಿತ್ಸೆ ನೀಡಬೇಕು. ಅವರು ಕೆಲಸ ಮಾಡುವಂತೆ ಶಕ್ತರಾಗುವವರೆಗೂ ಎನ್ಎಂಆರ್ನಲ್ಲಿ ಕೂಲಿ ನೀಡಬೇಕು. ದಿನಕ್ಕೆ ಎರಡು ಬಾರಿ ಹಾಜರಿ ಹಾಕುವುದನ್ನು, ಆನ್ಲೈನ್ ಮೂಲಕ ಕೂಲಿ ನೀಡುವ ಪದ್ಧತಿಯನ್ನೂ ಕೈಬಿಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಸ್ಮಾಯಿಲ್ ಸಾಬ್, ನಾಗರಾಜ, ಹೊನ್ನಮ್ಮ, ಕರಿಯಪ್ಪ ಹಚೋಳ್ಳಿ,
ಗೋವಿಂದ ನಾಯಕ, ಹನುಮಯ್ಯ ನಾಯಕ, ಬಸವರಾಜ, ವೀರೇಶ, ಲಿಂಗಣ್ಣ, ಜಾಲಹಳ್ಳಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ




