ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಆನ್ವರಿ ಗ್ರಾಮಕ್ಕೆ ರೈತ ಸಂಪರ್ಕ ಕೇಂದ್ರ ಮಂಜೂರು ಮಾಡಬೇಕು ಎಂದು ಹಲವು ವರ್ಷಗಳಿಂದ ಆನ್ವರಿ ಗ್ರಾಮದ ಜನರ ಬೇಡಿಕೆಯಾಗಿದೆ.
ಅನ್ವರಿ ಗ್ರಾಮದ ಸುಮಾರು 20 ಕೀಮೀ ವ್ಯಾಪ್ತಿಯಲ್ಲಿ 4 ಗ್ರಾಮ ಪಂಚಾಯಿತಿಗಳು ಸೇರಿದಂತೆ ಸುಮಾರು 20 ಗ್ರಾಮಗಳು ಸೇರುತ್ತವೆ. ಅನ್ವರಿ ಗ್ರಾಮದ ರೈತರು ಹೊಲದಲ್ಲಿ ಬೆಳೆಯುವುದಕ್ಕೆ ಬೀಜಗಳು, ಗೊಬ್ಬರ, ಕೃಷಿ ಸಾಮಾಗ್ರಿಗಳು ಸೇರಿದಂತೆ ಇತರ ಸಾಮಗ್ರಿಗಳು ಬೇಕಾದರೆ ಅನ್ವರಿ ಗ್ರಾಮದಿಂದ ಸುಮಾರು 30 ಕಿಮೀ ಗುರುಗುಂಟ ಗ್ರಾಮಕ್ಕೆ ತೆರಳುವ ಪರಿಸ್ಥಿತಿ ಇದೆ.
“ಆನ್ವರಿ ಗ್ರಾಮದಿಂದ ಗುರುಗುಂಟ ಗ್ರಾಮಕ್ಕೆ ತೆರಳಬೇಕಾದರೆ ಹಟ್ಟಿ ಪಟ್ಟಣದಿಂದ ಸಾಗಿ ಹೋಗಬೇಕು. ಎರಡ್ಮೂರು ಬಸ್ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಲಿಂಗಸಗೂರು ತಾಲೂಕಿಗೆ ಹೋಗಿ ಅಲ್ಲಿಂದ ಹೋಗಬೇಕಾಗುವ ಅನಿವಾರ್ಯವಿದೆ” ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಸ್ಥಳೀಯ ರೈತರು ಬೆಳಗಿನ ಜಾವ ಸಾಲಾಗಿ ನಿಂತಿರುತ್ತಾರೆ. ನಾವು ಬಸ್ ವ್ಯವಸ್ಥೆ ಇಲ್ಲದೆ ಗುರುಗುಂಟ ಗ್ರಾಮಕ್ಕೆ ತೆರಳುವಷ್ಷರಲ್ಲಿ ಸರಿ ಸುಮಾರು ಮಧ್ಯಾಹ್ನವಾಗಿರುತ್ತದೆ. ಸಾಲಿನಲ್ಲಿ ನೂರಾರು ರೈತರು ಇರುತ್ತಾರೆ. ನಾವು ಸಂಜೆವರೆಗೂ ಕೂತು ಕಾದು ಕಾದು ಖಾಲಿ ಕೈಯಿಂದ ಬರುವಂತಾಗಿದೆ. ಜನ ದಟ್ಟಣೆಯಿಂದ ಸರ್ಕಾರದ ಕೃಷಿ ಇಲಾಖೆಯ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ.
ಗ್ರಾಮದ ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ಮುಖಂಡ ಜಿಲಾನಿಪಾಷಾ ಆನ್ವರಿ ಅವರು ಮಾತನಾಡಿ, “ಅನ್ವರಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ಅತಿ ಅವಶ್ಯಕತೆ ಇರುತ್ತದೆ .ರೈತ ಸಂಪರ್ಕ ಕೇಂದ್ರ ಪ್ರಾರಂಭಿಸಿದರೆ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಬಹಳ ಅನುಕೂಲವಾಗುತ್ತದೆ. ರೈತರಿಗೆ ಕೃಷಿಗೆ ಸಂಬಂಧಪಟ್ಟ ಸರ್ಕಾರದಿಂದ ಏನಾದರೂ ಸಿಗಬೇಕಾದರೆ ಗ್ರಾಮದ ಜನರು ತಮ್ಮ ಕೆಲಸವನ್ನು ಬಿಟ್ಟು ಗುರುಗುಂಟ ಗ್ರಾಮಕ್ಕೆ ತೆರಳುವಂತಿದೆ” ಎಂದರು.
“ಸದ್ಯ ಗುರುಗುಂಟಾ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದವನ್ನು ಸುಮಾರು 40 ಗ್ರಾಮಗಳಿಗಿಂತ ಹೆಚ್ಚು ರೈತರು ಅವಲಂಬಿಸಿರುತ್ತಾರೆ. ಇದರಿಂದ ಗುರುಗುಂಟಾ ರೈತ ಸಂಪರ್ಕ ಕೇಂದ್ರದಲ್ಲಿ ದಟ್ಟಣೆ ಹೆಚ್ಚಾಗಿ ರೈತರು ಕೃಷಿ ಇಲಾಖೆಯ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ” ಎಂದರು.
“ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಾರಗಟ್ಟಲೆ ಬೀಜ, ಗೊಬ್ಬರ ಸೇರಿದಂತೆ ಇತರ ಕೃಷಿ ಸಲಕರಣೆಗಳನ್ನು ಪಡೆಯಲು ಸಂಪೂರ್ಣ ಕೆಲಸ ಕಾರ್ಯಗಳನ್ನು ಬಿಟ್ಟು ಗುರುಗುಂಟಾ ರೈತ ಸಂಪರ್ಕ ಕೇಂದ್ರಕ್ಕೆ ಅಲೆಯಬೇಕಾಗಿದೆ. ಆದ್ದರಿಂದ 30-35ಸಾವಿರ ಜನಸಂಖ್ಯೆ ಹೊಂದಿದ ಆನ್ವರಿ ಗ್ರಾಮದಲ್ಲಿ ಹೊಸದಾಗಿ ರೈತ ಸಂಪರ್ಕ ಕೇಂದ್ರ ಆರಂಭಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡದ ಬೊಮ್ಮಾಯಿ: ಜಿ ಎಸ್ ಪಾಟೀಲ ಟೀಕೆ
“ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ಇದನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆನ್ವರಿ ಗ್ರಾಮದ ಜನರು ಮುತ್ತಿಗೆ ಹಾಕುವ ಸಮಯ ಬರುತ್ತದೆ” ಎಂದು ಎಚ್ಚರಿಕೆ ನೀಡಿದರು.





