ಬಸ್ ಸಮಯ ವಿಚಾರಿಸಲು ಹೋದ ವಿದ್ಯಾರ್ಥಿಗಳ ಜೊತೆ ಡಿಪೋ ಕಂಟ್ರೋಲ್ ಮ್ಯಾನೇಜರ್ ಅವಾಚ್ಯ ಪದ ಬಳಸಿ ನಿಂದನೆ ಮಾಡಿದರೆಂಬ ಆರೋಪಕ್ಕೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಲಿಂಗಸೂಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ಹೊಸ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಸ್ಥಳೀಯ ಶಾಲಾ–ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದು, ವಿವಿಧ ಸಂಘಟನೆಗಳ ನಾಯಕರು ಸಹ ಬೆಂಬಲ ಸೂಚಿಸಿದರು. ಬಸ್ ಸಮಯ ವಿಚಾರಿಸಲು ಹೋದ ವಿದ್ಯಾರ್ಥಿಗಳ ಮೇಲೆ ಅವಾಚ್ಯ ಶಬ್ದ ಬಳಕೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದರಿಂದ ಮನನೊಂದು ತರಗತಿಗಳ ಬಳಿಕ ವಿದ್ಯಾರ್ಥಿಗಳು ಗುಂಪುಗಟ್ಟಿಯಾಗಿ ಹೊಸ ಬಸ್ ನಿಲ್ದಾಣದಲ್ಲಿ ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ರಮೇಶ ವಿರಾಪುರ ಮಾತನಾಡಿ, ಪಟ್ಟಣದ ಸುತ್ತಮುತ್ತ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮಾತ್ರ ಬಸ್ ಸೌಲಭ್ಯ ಲಭ್ಯವಿದ್ದು, ಸಂಜೆ ಊರಿಗೆ ಹಿಂತಿರುಗಲು ಗಂಟೆಗಳ ಕಾಲ ಕಾಯಬೇಕಾದ ದುಸ್ಥಿತಿ ಮುಂದುವರೆದಿದೆ. ಇದರಿಂದ ಬೇಸತ್ತು ಮಕ್ಕಳು ಅಧಿಕಾರಿಗೆ ಕೇಳಲು ಮುಂದಾದಾಗ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, “ಡಿಪೋ ಮ್ಯಾನೇಜರ್ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು, ವಜಾ ಮಾಡಬೇಕು. ಇಲ್ಲದಿದ್ದರೆ ಧರಣಿ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳ ಆಕ್ರೋಶ ತೀವ್ರಗೊಂಡ ಹಿನ್ನೆಲೆಯಲ್ಲಿ ತಾಲ್ಲೂಕು ಡಿಪೋ ಮ್ಯಾನೇಜರ್ ಸ್ಥಳಕ್ಕೆ ಬಂದು ಹಳ್ಳಿ ಪ್ರದೇಶಗಳಿಗೆ ತಕ್ಷಣ ಬಸ್ ವ್ಯವಸ್ಥೆ ಮಾಡಿಸುವುದಾಗಿ ಹಾಗೂ ಮುಂದೆಯೂ ಪ್ರತಿದಿನ ವಿದ್ಯಾರ್ಥಿಗಳಿಗಾಗಿ ಬಸ್ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶವ ಸಂಸ್ಕಾರ ವಾಹನ ಹಾಗೂ ರೆಫ್ರಿಜರೇಟರ್ ಗಳ ಹಸ್ತಾಂತರ
ಪ್ರತಿಭಟನೆಯಲ್ಲಿ ವಿನೋದ್ ಕುಮಾರ್, ಸುರೇಶ್ ಗುರಿಕಾರ, ನಿಂಗಪ್ಪ, ಲಾಲ್ ಪೀರ, ವೆಂಕಟೇಶ್ ಗಿರಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಬೆಂಬಲ ನೀಡಿದರು.





