ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆ ಕಾರಣದಿಂದ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದೇ ಅಪರೂಪವಾಗಿದೆ. ಹೀಗಿರುವಾಗ ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದೆ. ಇದರಿಂದ ಆತಂಕಗೊಂಡಿರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಅದರಿಂದ ಯಾವಾಗ ಬರುವ ಬೆಂಕಿ ಹೊತ್ತುತ್ತದೋ, ಯಾವಾಗ ಶಾರ್ಟ್ ಸರ್ಕ್ಯುಟ್ ಸಂಭವಿಸುತ್ತದೋ, ಯಾವಾಗ ಸ್ಫೋಟದಂತಹ ಅನಾಹುತಗಳು ಮಕ್ಕಳ ಜೀವಕ್ಕೆ ತೊಂದರೆ ಉಂಟು ಮಾಡಬಹುದೋ ಎಂಬ ಭಯವು ಪೋಷಕರನ್ನು ಚಿಂತೆಗೀಡು ಮಾಡಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕು ತುರುವಿಹಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಇಂತಹ ಅಪಾಯಕಾರಿ ಸಾಧನಗಳನ್ನು ಮಕ್ಕಳ ಸಂಪರ್ಕದಲ್ಲಿರಿಸುವುದು ತಪ್ಪು. ತಕ್ಷಣ ಸ್ಥಳಾಂತರಕ್ಕೆ ಒತ್ತು ನೀಡಿ, ಶಾಲಾ ಪರಿಸರವನ್ನು ಸುರಕ್ಷಿತಗೊಳಿಬೇಕು. ಈ ಶಾಲೆಯ ಮೈದಾನದಲ್ಲಿ ದಿನನಿತ್ಯ ಆಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಟ್ರಾನ್ಸ್ಫಾರ್ಮರ್ ಹತ್ತಿರ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈಗಾಗಲೇ ಟಿಸಿ ಮೇಲ್ಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬೀಳುವ ಭೀತಿಯೂ ಎದುರಾಗಿದೆ. ಅನಾಹುತದ ಅರಿವಿದ್ದರೂ ಜೆಸ್ಕಾಂ ಅಧಿಕಾರಿಗಳು ಗಪ್ ಚುಪ್ ಆಗಿರೋದ್ರಿಂದ ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿ ಹಿರಿಯ ಮುಖಂಡ ಮರಿಯಪ್ಪ ಪೂಜಾರಿ ಮಾತನಾಡಿ, ಶಾಲೆಯ ಆವರಣದಲ್ಲಿ ಟ್ರಾನ್ಸ್ಫಾರ್ಮರ್ ಇದ್ದರೆ ಮಕ್ಕಳು ಆಟವಾಡುತ್ತಾ ಎತ್ತ ಕಡೆ ಹೋಗುತ್ತಾರೆ ಅದು ಗೊತ್ತಾಗಲ್ಲ. ಶಾಲೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಉಪಕರಣಗಳನ್ನು ಮಕ್ಕಳಿಂದ ದೂರ ಇರಿಸಬೇಕು ಎಂದು ಕಾನೂನುಗಳು ಸ್ಪಷ್ಟವಾಗಿ ಹೇಳುತ್ತವೆ. ಆದರೂ, ಈ ಶಾಲೆಯಲ್ಲಿ ಇದು ಉಲ್ಲಂಘನೆಯಾಗಿದೆ. ಕೂಡಲೇ ಇದನ್ನು ಸ್ಥಳಾಂತರಿಸಬೇಕು” ಎಂದು ಹೇಳಿದರು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶಿವಪುತ್ರಪ್ಪ ಮಾತನಾಡಿ, “ಶಾಲೆಯ ಆವರಣದ ಕಾಂಪೌಂಡ್ ಬಳಿ ಟ್ರಾನ್ಸ್ಫಾರ್ಮರ್ ಇರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಟ್ರಾನ್ಸ್ಫಾರ್ಮರ್ ಅನ್ನು ಮಕ್ಕಳ ಸಂಪರ್ಕಕ್ಕೆ ಬಾರದಂತಹ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು. ಈ ಕ್ರಮದಿಂದ ಶಾಲೆಯ ಪರಿಸರ ಸುರಕ್ಷಿತಗೊಳ್ಳುವುದಷ್ಟೇ ಅಲ್ಲ, ಪೋಷಕರಲ್ಲಿ ಭರವಸೆಯೂ ಮೂಡುತ್ತದೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ; ಅಪರಾಧಿಗೆ 5 ವರ್ಷ ಜೈಲು
ಮಳೆಗಾಲದಲ್ಲಿ ಿದರಿಂದ ಅಪಾಯ ಇನ್ನಷ್ಟು ಹೆಚ್ಚುತ್ತದೆ. ಏಕೆಂದರೆ ವಿದ್ಯುತ್ ಶಾಕ್ ಅಥವಾ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಸಾಧ್ಯತೆ ಹೆಚ್ಚು. ಇಂತಹ ವಿದ್ಯುತ್ ಉಪಕರಣಗಳು ಶಾಲಾ ಪರಿಸರದಲ್ಲಿ ಇರಬಾರದು ಎಂಬುದು ಸುರಕ್ಷತಾ ನಿಯಮಗಳ ಮುಖ್ಯ ಅಂಶವಾಗಿದೆ. ಟ್ರಾನ್ಸ್ಫಾರ್ಮರ್ ಇರುವುದರಿಂದ ಮೈದಾನದಲ್ಲಿ ಮಕ್ಕಳು ಆಟವಾಡಲೂ ಭಯಪಡುವಂತಾಗಿದೆ. ಇದರಿಂದ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದು ಅವರ ದೈಹಿಕ ಚಟುವಟಿಕೆಗಳಿಗೂ ಅಡ್ಡಿಯಾಗುತ್ತದೆ. ಮಕ್ಕಳಿಗೆ ಸುರಕ್ಷಿತ ಪರಿಸರ ಕಲ್ಪಿಸುವುದು ಶಾಲೆಯ ಪ್ರಮುಖ ಜವಾಬ್ದಾರಿಯಾಗಿರುವುದರಿಂದ, ಟ್ರಾನ್ಸ್ಫಾರ್ಮರ್ ಅನ್ನು ತಕ್ಷಣವೇ ಶಾಲಾ ಆವರಣದಿಂದ ದೂರದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಅಗತ್ಯ. ಸ್ಥಳಾಂತರ ಮಾಡಿದ ನಂತರ ಮಾತ್ರ ವಿದ್ಯಾರ್ಥಿಗಳು ಭಯವಿಲ್ಲದೆ ಮೈದಾನದಲ್ಲಿ ಆಟವಾಡಬಹುದು ಹಾಗೂ ಪೋಷಕರು ಕೂಡ ನೆಮ್ಮದಿ ಪಡುತ್ತಾರೆ. ಶಾಲೆಯ ಒಟ್ಟೂ ಪರಿಸರ ಸುರಕ್ಷಿತವಾಗಲು ಈ ಕ್ರಮ ಅತ್ಯಂತ ತುರ್ತು ಮತ್ತು ಅಗತ್ಯವಾಗಿದೆ.





