ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ನೀರು, ಆಹಾರ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಪರಿಸರ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ಮುಕ್ತ ಗ್ರಾಮದ ಬಗ್ಗೆ ತಿಳಿಸಲು, ಪರಿಸರ ಜಾಗೃತಿ ಮೂಡಿಸಲು ಬೆಂಗಳೂರಿನ ವಿದ್ಯಾರ್ಥಿಗಳು ರಾಜೋಳ್ಳಿ ಗ್ರಾಮ ಆಯ್ಕೆ ಮಾಡಿಕೊಂಡಿದ್ದು ನಮಗೆ ಸಂತಸ ತಂದಿದೆ ಎಂದು ಗ್ರಾಮದ ಶಿಕ್ಷಕ ವಿಜಯಕುಮರ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ 3 ದಿನಗಳ ಕಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು, ಬೆಂಗಳೂರು ಸಂತ ಜೋಸೆಫ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಮಾನ್ವಿ ತಾಲೂಕಿನ ಅರೋಲಿ ಗ್ರಾಮ ಪಂಚಾಯಿತಿ ಮತ್ತು ಲೊಯೋಲ ಸಮಾಜ ಸೇವಾಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಮರ-ಗಿಡಗಳನ್ನು ಬೆಳೆಸುವುದು ಬಹಳ ಅವಶ್ಯಕ, ಉತ್ತಮ ಗಾಳಿ ಮತ್ತು ಮಳೆಗೆ ಪ್ರತಿಯೊಬ್ಬರೂ ನಮ್ಮ ಸುತ್ತಲೂ ಮರ ಗಿಡಗಳನ್ನು ಬೆಳೆಸುವುದರತ್ತ ಹೆಚ್ಚು ಗಮನ ಕೊಡಬೇಕು. ಮಲ ವಿಸರ್ಜನೆಗೆ ಶೌಚಾಲಯವನ್ನ ಬಳಸಬೇಕು. ಬಯಲು ಶೌಚ ಮುಕ್ತ ಗ್ರಾಮ ಮಾಡಬೇಕು. ಪರಿಸರ ಕಾಳಜಿ ಪ್ರತಿಯೊಬ್ಬರಲ್ಲಿ ಬರಬೇಕು” ಎಂದು ವಿಜಯಕುಮರ್ ಹೇಳಿದರು.
ಲೊಯೋಲ ಸಮಾಜಸೇವಾ ಕೇಂದ್ರದ ನಿರ್ದೇಶಕ ವಂ.ಫಾ.ಡಾನ್ ಲೋಬೋ ಮಾತನಾಡಿ, “ಕಾಲೇಜು ವಿದ್ಯಾರ್ಥಿಗಳು ರಸ್ತೆಗಳಲ್ಲಿ ಕಂಡ ಕಂಡಲ್ಲಿ ಕಸ ಹಾಕುವುದು, ಗಿಡಮರಗಳನ್ನ ಕಡಿಯುವುದರಿಂದ ಪರಿಸರ ನಾಶ, ಪ್ಲಾಸ್ಟಿಕ್ ಚೀಲಗಳ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಮೂರು ದಿನಗಳ ಕಾಲ ಗ್ರಾಮದಲ್ಲಿ ಶ್ರಮದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಶ್ರಯ ಯೋಜನೆ ಜಮೀನು ಒತ್ತುವರಿ; 4 ಎಕರೆ ಸರ್ಕಾರಿ ಭೂಮಿ ಮರುವಶ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ವೀರರೆಡ್ಡಿ, ಕರವಸೂಲಿಗಾರ ರಮೇಶ, ಶಾಲೆಯ ಶಿಕ್ಷಕ ವಿಜಯಕುಮಾರ್, ಗ್ರಾ.ಪಂ ಸದಸ್ಯರಾದ ಶಿವಪ್ಪ, ಗೋವಿಂದ, ಹುಲಿಗೆಪ್ಪ, ಹನುಮಯ್ಯ, ಗ್ರಾಮದ ಮುಖಂಡ ಅಮರೇಶ್ ಸೇರಿದಂತೆ ಶಾಲೆಯ ಶಿಕ್ಷಕರು ಲೊಯೋಲ ಸಮಾಜ ಸೇವಾ ಕೇಂದ್ರದ ಸಿಬ್ಬಂದಿ ಇದ್ದರು.





