ಕೃಷ್ಣ ನ್ಯಾಯಾಧೀಕರಣ ತೀರ್ಪು ಜಾರಿಗೊಳಿಸಿ ಕೃಷ್ಣ ಮೇಲ್ದಂಡೆ ಮೂರನೇ ಹಂತದ ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಹಾಗೂ ರೈತ ಸೇನೆಯಿಂದ ಫೆ.9 ರಂದು ರೈತರ ನಡೆ ಆಲಮಟ್ಟಿ ಜಲಾಶಯದ ಕಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್ ಮದ್ದರಕಿ ಹೇಳಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿ 9 ಉಪ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಬೇಕಾದ ಅವಶ್ಯಕತೆಯಿದೆ. ಕೇಂದ್ರ ಸರ್ಕಾರ ಕೃಷ್ಣ ನ್ಯಾಯಾಧೀಕರಣದ ತೀರ್ಪು ಜಾರಿಗೆ ಕಾನೂನಾತ್ಮಕ ಸಮಸ್ಯೆ ಪರಿಹರಿಸಿ ಅಧಿಕೃತ ಅಧಿಸೂಚನೆ ಹೊರಡಿಸಬೇಕು. ರಾಜ್ಯ ಪಾಲಿನ ನೀರು ಬಳಕೆ ಬದ್ದತೆ ತೋರಬೇಕೆಂದು ಆಗ್ರಹಿಸಿ ವಿವಿಧ ಜಿಲ್ಲೆಗಳಿಂದ ರೈತರು ಮುದ್ದೇಬಿಹಾಳ ಸಮಾವೇಶಗೊಂಡು ಅಲ್ಲಿಂದ ಅಲಮಟ್ಟಿ ಜಲಾಶಯಕ್ಕೆ ತೆರಳಿ ಬೃಹತ್ ಸಮಾವೇಶ ನಡೆಸಲಾಗುತ್ತದೆ ಎಂದರು.
ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಅಗತ್ಯ ಅನುದಾನವನ್ನು ಒದಗಿಸಬೇಕು. ಭೂ ಸ್ವಾಧೀನ, ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈಗಾಗಲೇ ಸುದೀರ್ಘ ವರ್ಷಗಳು ಕಳೆದುಹೋಗಿವೆ. ತೆಲಂಗಾಣ ಮತ್ತು ಮಹಾರಾಷ್ಟ್ರಗಳ ಆಕ್ಷೇಪದಿಂದ ಅಲಮಟ್ಟಿ ಜಲಾಶಯ ಎತ್ತರ ಕಾಮಗಾರಿ ಬಾಕಿ ಉಳಿದಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಯೋಜನೆ ಜಾರಿಗೆ ಮುಂದಾಗಬೇಕೆಂದು ಆಗ್ರಹಿಸಿ ನಡೆಯಲಿರುವ ಹೋರಾಟದಲ್ಲಿ ಮಠಾಧೀಶರು, ವಿವಿಧ ರೈತ ಸಂಘಟನೆಗಳು, ರೈತರು ಸೇರಿದಂತೆ ಎಲ್ಲರು ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ಕೃಷ್ಣ ಬಲದಂಡೆ ಕಾಲುವೆಯ 95 ಕಿಮೀ ರಿಂದ 168 ಕಿಮೀವರೆಗಿನ ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳ ಕಾಮಗಾರಿ ಶೇ. 85 ರಷ್ಟು ಪೂರ್ಣಗೊಂಡಿದೆ. ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕೊನೆಭಾಗದ ಗ್ರಾಮಗಳಿಗೆ ಕೂಡಲೇ ನೀರು ಒದಗಿಸುವಂತೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮದ್ಯಪಾನ ನಿಷೇಧಕ್ಕೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಇಂದ್ರಜಿತ್ ಯಾದವ, ಜಿಲ್ಲಾ ಕಾರ್ಯಾಧ್ಯಕ್ಷ ಮುಜಾಹಿದ್ ಮರ್ಚಡ್, ಮಲ್ಲಿಕಾರ್ಜುನ, ಮಹಾದೇವ ಯಾದವ, ಸುರೇಶ ಪೂಜಾರಿ,ಆನಂದಕುಮಾರ, ಯಲ್ಲಪ್ಪ ಅಂಬಿಗೇರ, ಗಂಗಪ್ಪ ತಿಮ್ಮಾಪುರು, ಗಂಗಪ್ಪ, ಯಂಕಣ್ಣ, ಬಸವರಾಜ ಕರಿಕಾಳ ಸೇರಿ ಅನೇಕರಿದ್ದರು.





