ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯ ಯೋಜನೆಯಡಿಯನ್ನು ಜಿ ರಾಮ ಜೀ ಯೋಜನೆ ಎಂದು ಬದಲಾವಣೆ ಮಾಡುವದರೊಂದಿಗೆ ಹೊಸ ಮಸೂದೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಕ್ರಮವನ್ನು ವಿರೋಧಿಸಿ ಗ್ರಾಮೀಣ ಕೂಲಿಕಾರರ ಸಂಘದಿಂದ ಡಿ.22 ರಂದು ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಮಿತಿ ಸಂಚಾಲಕ ಗುರುರಾಜ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಷ್ಕರಿಸಿ ನೂರು ದಿನ ಬದಲು 125 ದಿನಗಳಿಗೆ ಹೆಚ್ಚಿಸಿರುವ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತಗೊಳಸಿದೆ. ಈ ಮೊದಲು ಕೇಂದ್ರದಿಂದ 90 ಪ್ರತಿಶತ ಹಾಗೂ ರಾಜ್ಯಗಳಿಂದ 10 ಪ್ರತಿಶತ ಅನುದಾನದಲ್ಲಿ ಜಾರಿಗೊಳಿಸುತ್ತಿದ್ದ ಯೋಜನೆಯನ್ನು ಈಗ 60;40 ಆನುಪಾತದಲ್ಲಿ ಜಾರಿಗೆ ಮುಂದಾಗಿದೆ ಎಂದು ಹೇಳಿದರು.
ನೂರು ದಿನ ಕೆಲಸ ನಿಗದಿಪಡಿಸಿದ್ದಾಗಲೇ 60 ದಿನ ಕೆಲಸ ನೀಡಲು ಆಗಿಲ್ಲ. ಅನುದಾನವೇ ಕಡಿತಗೊಳಿಸಿದ್ದರಿಂದ ಉದ್ಯೋಗ ಖಾತ್ರಿಯೇ ಅರ್ಥ ಕಳೆದುಕೊಳ್ಳುವಂತಾಗಲಿದೆ. ಉದ್ಯೋಗ ಖಾತ್ರಿ ಕಾಯ್ದೆಯನ್ನು ತಿದ್ದುಪಡಿಯಿಂದ ಬೇಡಿಕೆ ಆಧಾರದ ಬದಲು ಪೂರೈಕೆ ಆಧಾರದ ಮೇಲೆ ಜಾರಿಗೊಳಿಸಿ ಕಾರ್ಮಿಕ ಹಕ್ಕು ಕಸಿಯುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಅರೋಪಿಸಿಸಿದರು.
ವಿಕೇಂದ್ರಿಕರಣ ವ್ಯವಸ್ಥೆಯನ್ನು ಗಾಳಿಗೆ ತೂರಿ ಗ್ರಾಮಸಭೆ ಅಧಿಕಾರವೂ ಕಿತ್ತಿಕೊಂಡಿದೆ. ಮಹಿಳೆಯರು, ಕೂಲಿ ಕಾರ್ಮಿಕರು ನಂಬಿಕೊಂಡಿದ್ದ ಉದ್ಯೋಗಖಾತ್ರಿ ಕಳೆದುಕೊಂಡಂತಾಗಿದೆ. ಕೂಡಲೇ ಮಸೂದೆ ರದ್ದಿಗೆ ಆಗ್ರಹಿಸಿ ರಾಜ್ಯದಾಧ್ಯಂತ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಿರೋಧಿಸುವದಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಗಬ್ಬೂರು, ಮಾರೆಮ್ಮ, ರೂಪಾ, ಹುಚ್ಚಮ್ಮ ಇದ್ದರು.





