ಸುಸಜ್ಜಿತ ಕಟ್ಟಡಗಳು, ನವೀಕೃತ ವ್ಯವಸ್ಥೆ, ಕೋಟ್ಯಂತರ ವೆಚ್ಚದ ಯೋಜನೆಗಳು- ಆಧುನಿಕ ಆರೋಗ್ಯ ಸೇವೆಯ ಚಿಹ್ನೆಗಳೆಂದು ಸರ್ಕಾರ ಕಾಲ ಕಾಲಕ್ಕೆ ಪ್ರಕಟಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ. ಆದರೆ ತಳ ಮಟ್ಟದಲ್ಲಿಯೂ ಅಂತಹ ಯೋಜನೆಗಳು ನಿಜಕ್ಕೂ ಯಶಸ್ವಿಯಾಗಿವೆಯೇ ಎನ್ನುವುದು ಮುಖ್ಯವಾಗುತ್ತದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಖರಾಬದಿನ್ನಿ ಗ್ರಾಮದಲ್ಲಿರುವ ಎರಡು ಆರೋಗ್ಯ ಕೇಂದ್ರಗಳು ಈ ದ್ವಂದ್ವದ ಜೀವಂತ ಉದಾಹರಣೆಗಳು. ಆರೋಗ್ಯ ಕೇಂದ್ರಗಳೇನೋ ಇವೆ, ಆದರೆ ಸೇವೆಯೇ ಇಲ್ಲ. ಬಾಗಿಲು ತೆರೆದಿದ್ದರೆ ತಾನೆ..?
2013ರಲ್ಲಿ ಬಂದ ನೆರೆಯಿಂದ ಖರಾಬದಿನ್ನಿಯ ನದಿ ದಂಡೆ ಮೇಲಿದ್ದ ಬಹುತೇಕರು ದೂರಕ್ಕೆ ಸ್ಥಳಾಂತರಗೊಳ್ಳಬೇಕಾಯಿತು. ಆಗ ಸಂತ್ರಸ್ತರ ಆರೈಕೆಗಾಗಿ ತುರ್ತು ವೈದ್ಯಕೀಯ ಕೇಂದ್ರದ ಅಗತ್ಯಬಿತ್ತು. ಆಗಿನ ರಾಜ್ಯ ಸರ್ಕಾರ ತಕ್ಷಣಕ್ಕೆ ವೈದ್ಯಕೀಯ ಸೇವೆಗಾಗಿ ₹1.5 ಕೋಟಿ ವೆಚ್ಚದಲ್ಲಿ ಹೊಸ ಆರೋಗ್ಯ ಕೇಂದ್ರ ಕಟ್ಟಿಸಿತು. ಸುಸಜ್ಜಿತ ಕಟ್ಟಡದಲ್ಲಿ ರೋಗಿಗಳ ಪರೀಕ್ಷಾ ಕೊಠಡಿ, ಔಷಧ ಸಂಗ್ರಹ ಕೋಣೆ, ಲ್ಯಾಬ್ ಎಲ್ಲವೂ ಇದ್ದವು. 2014ರ ತರುವಾಯ ನೋಡ ನೋಡುತ್ತಿದ್ದಂತೆ ಕಟ್ಟಡ ಬಾಗಿಲು ಮುಚ್ಚಿತು. ದಶಕವೇ ಕಳೆದರೂ ಇಲ್ಲಿಯವರೆಗೆ ಈ ಕೇಂದ್ರದ ಬಾಗಿಲು ತೆರೆದಿಲ್ಲ. ಉದ್ಘಾಟನೆ ಕಂಡಿಲ್ಲ.
ಪಕ್ಕದಲ್ಲೇ ಇನ್ನೊಂದು ಹಳೆಯ ಆರೋಗ್ಯ ಕೇಂದ್ರವಿದೆ. ಅದರ ಸ್ಥಿತಿಯೂ ಸ್ಫಂದಿಸಲು ಹೆಣಗಾಡುತ್ತಿರುವ ರೀತಿ ಇದೆ. ವಾರಕ್ಕೊಂದು ದಿನ ಬರುವ ವೈದ್ಯರು, ತಿಂಗಳಿಗೊಮ್ಮೆ ಮಾತ್ರ ತೆರೆದುಕೊಳ್ಳುವ ಬಾಗಿಲುಗಳು – ಇದೇ ಇಲ್ಲಿ ಆರೋಗ್ಯದ ಭವಿಷ್ಯ. ತುರ್ತು ಪರಿಸ್ಥಿತಿಯಲ್ಲಿ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಹೋಗುವುದು ಜನರ ಪಾಲಿಗೆ ಏಕೈಕ ಆಯ್ಕೆ. ಆದರೆ ಹಾಳಾದ ರಸ್ತೆ, ಖರ್ಚು, ಸಮಯ ಎಲ್ಲವೂ ಗಣ್ಯವೇ!

ಬಳಕೆಯಾಗದ ಹೊಸ ಆಸ್ಪತ್ರೆ ಇಂದು ಜನರ ಸ್ವಂತ ಗೋದಾಮುಗಳಾಗಿ ಪರಿವರ್ತನೆಯಾಗಿದೆ. ಜನರು ತಮ್ಮ ತೋಟದ ಕೆಲಸಕ್ಕೆ ಬಳಸುವ ಸರಕುಗಳನ್ನು ಅಲ್ಲಿಟ್ಟು ಜೋಪಾನ ಮಾಡಿಕೊಳ್ಳುತ್ತಾರೆ. “ಅಲ್ಲಿರೋ ಅಡ್ಡ ಬಾಗಿಲಿಗೆ ಬೀಗ ಬಿಗಿದಿಲ್ಲ. ನಾವು ಬೀಗ ಹಾಕಿದ್ದೇವೆ. ಇಲ್ಲದಿದ್ದರೆ ಲೂಟಿ ಆಗ್ತಿತ್ತು” ಎನ್ನುತ್ತಾರೆ ಸ್ಥಳೀಯರು.
ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಪ್ರತಿದಿನದ ಕೆಲಸದ ವರದಿ, ಸರ್ಕಾರದ ನಿರ್ಲಕ್ಷ್ಯ ಮತ್ತು ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಗ್ರಾಮಗಳ ಅಗತ್ಯಕ್ಕೆ ತಕ್ಕಂತೆ ಸುಸಜ್ಜಿತ ಆಸ್ಪತ್ರೆ ಕಟ್ಟಡಗಳು ನಿರ್ಮಾಣವಾಗಿದ್ದರೂ, ಬಳಕೆಗೆ ಸಿಗುತ್ತಿಲ್ಲ. ಈ ಗ್ರಾಮಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗದಿರುವುದು ರೋಗಿಗಳಿಗೆ ತೀವ್ರ ತೊಂದರೆ ಉಂಟುಮಾಡಿದೆ.
ಈ ಬಗ್ಗೆ ಗ್ರಾಮದ ನಿವಾಸಿ ಬಸವರಾಜ್ ರೆಡ್ಡಿ ಮಾತನಾಡಿ, “ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದಿರುವುದು ದಶಕಗಳಿಂದ ಎದುರಿಸುತ್ತಿರುವ ಗಂಭೀರ ಸಮಸ್ಯೆ. ಗ್ರಾಮದಲ್ಲಿ ಎರಡು ಆಸ್ಪತ್ರೆಗಳಿವೆ. ಇದ್ದರೂ ಇಲ್ಲದಂತಿವೆ. ಆಸ್ಪತ್ರೆ ಬಗ್ಗೆ ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕೆಲವು ಕಡೆಗಳಲ್ಲಿ ವೈದ್ಯರಿದ್ದರೂ, ಮೂಲಸೌಕರ್ಯ ಕೊರತೆ, ಎಲ್ಲಾ ಮೂಲ ಸೌಕರ್ಯಗಳಿದ್ದರೂ ವೈದ್ಯರಿಲ್ಲದ ಪರಿಸ್ಥಿತಿಗಳು… ರೋಗಿಗಳ ಪರದಾಟಕ್ಕೆ ಕಾರಣವಾಗಿವೆ. ಇದು ‘ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲʼ ಎನ್ನುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಉದ್ಘಾಟನೆಗೆ ಮೀನಾಮೇಷ ಎಣಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹಳೆಯ ಆಸ್ಪತ್ರೆ ಕಟ್ಟಡದಲ್ಲೇ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಹಳೆಯ ಕಟ್ಟಡ ಶಿಥಿಲಾವಸ್ತೆ ತಲುಪಿದ್ದು, ಮಳೆ ಬಂದಾಗ ಚಾವಣಿ ಸೋರುತ್ತದೆ. ಹಾಸಿಗೆ ಸೌಲಭ್ಯ ಇಲ್ಲದೇ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ತಿಂಗಳಿಗೊಮ್ಮೆ ಬರುತ್ತಾರೆ. ತುರ್ತು ಸಂದರ್ಭಗಳಲ್ಲಿ ಗ್ರಾಮದ ರೋಗಿಗಳು ಪೋತ್ನಾಳ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ. ರಾತ್ರಿ ವೇಳೆ ಹೋದರೆ ಅಲ್ಲಿಯೂ ವೈದರಿಲ್ಲದೆ ಗೋಳಾಡುವಂತಾಗಿದೆ” ಎಂದರು.
ಈ ಬಗ್ಗೆ ಮಾನ್ವಿ ತಾಲೂಕು ವೈದ್ಯಾಧಿಕಾರಿ ಶರಣಬಸವರಾಜ ಗೌಡ ಅವರನ್ನು ಸಂಪರ್ಕಿಸಲಾಗಿ, “ಗ್ರಾಮದಲ್ಲಿ ಎರಡು ಆಸ್ಪತ್ರೆಗಳಿವೆ. 2013 ರಲ್ಲಿ ನೆರೆ ಹಾವಳಿ ಬಂದಾಗ ಸಂತ್ರಸ್ತರ ಅನುಕೂಲಕ್ಕಾಗಿ ಒಂದು ಕಟ್ಟಡ ನಿರ್ಮಾಣ ಮಾಡಲಾಗಿದೆ. ಶಿಫ್ಟಿಂಗ್ ವಿಲೇಜ್ ಇದ್ದವರು ಅಲ್ಲಿ ಯಾರೂ ಇರದ ಕಾರಣ ಆಸ್ಪತ್ರೆ ಉದ್ಘಾಟನೆಗೊಂಡಿಲ್ಲ. ಗ್ರಾಮದವರು ಹಳೆ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಾರೆ” ಎಂದರು. ಅಲ್ಲಿ ಗ್ರಾಮಸ್ಥರಿದ್ದರೆ ಕೇಂದ್ರ ಉದ್ಘಾಟನೆಯಾಗುತ್ತಿತ್ತು ಎನ್ನುವುದು ಅವರ ನಿಲುವು.

ಒಂದೆಡೆ ಸಾವಿರಾರು ಕೋಟಿ ರೂಪಾಯಿಗಳ ಆರೋಗ್ಯ ಯೋಜನೆಗಳನ್ನು ಘೋಷಿಸುತ್ತಿರುವ ಸರ್ಕಾರ, ಇನ್ನೊಂದೆಡೆ ಖರಾಬದಿನ್ನಿಯಂತಹ ಹಳ್ಳಿಗಳ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಮರೆತಿರುವುದು ವಿಷಾದನೀಯ. ಆಸ್ಪತ್ರೆಯ ಕಟ್ಟಡ ಇದ್ದರೆ ಸಾಕು ಎಂಬ ನಿರ್ಲಕ್ಷ್ಯ ಶೈಲಿ, ಗ್ರಾಮೀಣ ಆರೋಗ್ಯದ ಭವಿಷ್ಯವನ್ನೇ ತಲ್ಲಣಿಸುವಂತಾಗಿದೆ. ವೈದ್ಯರಿಲ್ಲದ ಆಸ್ಪತ್ರೆ, ಬಾಗಿಲು ತೆರೆಯದ ಕಟ್ಟಡಗಳು – ಇವೆಲ್ಲವೂ ಸರ್ಕಾರದ ಜವಾಬ್ದಾರಿಯ ಕೊರತೆಯ ಪ್ರತಿ ಪ್ರತಿಬಿಂಬ.
ಇದನ್ನೂ ಓದಿ: ಭಾರತ್ ಬಂದ್ | ಸಾರ್ವತ್ರಿಕ ಮುಷ್ಕರ ಎಂದರೇನು? ಇತಿಹಾಸದಲ್ಲಿ ಮುಷ್ಕರಗಳ ಮಹತ್ವವೇನು?
ಈ ಪರಿಸ್ಥಿತಿ ಸರಿದೂಗಿಸಲು ಬೇಕಾದದ್ದು ಕೇವಲ ಬಜೆಟ್ ಪ್ರಕಟಣೆಗಳಲ್ಲ; ನಿರಂತರ ನಿಗಾ, ಪ್ರಾಮಾಣಿಕ ಸೇವಾ ಮನೋಭಾವ ಮತ್ತು ಸ್ಥಳೀಯ ಜನರ ಅಳಲಿಗೆ ಸ್ಪಂದಿಸುವ ನೈತಿಕ ಆಡಳಿತ. ಇಲ್ಲದಿದ್ದರೆ, ʼಆಸ್ಪತ್ರೆ ಇದೆʼ ಎಂಬ ಬೋರ್ಡುಗಳು ಕೇವಲ ಖಾಲಿ ಭಿತ್ತಿಪತ್ರವಲ್ಲದೆ ಇನ್ನೇನು?

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




