ಸರಕಾರಿ ಶಾಲೆಗಳಲ್ಲಿ ತರಕಾರಿ ಹಾಗೂ ಹಣ್ಣುಗಳ ಸರಬರಾಜನ್ನು ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ವಹಿಸುವ ಜಿಲ್ಲಾ ಪಂಚಾಯತ್ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (CITU) ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಮಾಯಿಸಿದ ನೌಕರರು, ಜಿಲ್ಲಾ ಪಂಚಾಯತ್ ತೀರ್ಮಾನವನ್ನು ರದ್ದುಗೊಳಿಸಿ ಬಿಸಿಯೂಟ ಯೋಜನೆಯನ್ನು ಮುಂದುವರಿಸಬೇಕೆಂದು ಘೋಷಣೆ ಕೂಗಿದರು. ಈ ವೇಳೆ ಜಿಲ್ಲಾಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ಬಿಸಿಯೂಟ ಯೋಜನೆ ಆರಂಭವಾದಾಗಿನಿಂದಲೇ ಬಿಸಿಯೂಟ ನೌಕರರು ಸಮರ್ಪಕವಾಗಿ ಅಡುಗೆ ಕಾರ್ಯ ನಿರ್ವಹಿಸುತ್ತಿದ್ದು, ಅಡುಗೆಗೆ ಅಗತ್ಯವಿರುವ ತರಕಾರಿಗಳನ್ನು ತಮ್ಮದೇ ಹಣದಿಂದ ಖರೀದಿಸಿ ನಂತರ ಎಸ್ಡಿಎಂಸಿ ಖಾತೆಯಿಂದ ಹಣವನ್ನು ಮರುಪಾವತಿ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಪೂರ್ವ ಮಾಹಿತಿ ನೀಡದೇ ಏಕಾಏಕಿ ಸ್ವಸಹಾಯ ಗುಂಪುಗಳಿಗೆ ತರಕಾರಿ ಹಾಗೂ ಹಣ್ಣುಗಳ ಸರಬರಾಜಿನ ಪರವಾನಿಗೆ ನೀಡಿರುವುದು ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 24 ವರ್ಷಗಳಿಂದ ಅತಿ ಕಡಿಮೆ ಸಂಬಳಕ್ಕೆ ಹೆಚ್ಚಿನ ಕೆಲಸ ಮಾಡುತ್ತಿದ್ದೇವೆ. ಇದೀಗ ತರಕಾರಿ ಮತ್ತು ಹಣ್ಣುಗಳ ಸರಬರಾಜನ್ನು ಸ್ವಸಹಾಯ ಗುಂಪುಗಳಿಗೆ ನೀಡಿದರೆ ನೌಕರರ ಉದ್ಯೋಗ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ತೀರ್ಮಾನವನ್ನು ಕೂಡಲೇ ಹಿಂಪಡೆದು ಬಿಸಿಯೂಟ ನೌಕರರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ಲಾರಿ ಹರಿದು 08 ಕ್ಕೂ ಹೆಚ್ಚು ಕುರಿಗಳು ಸಾವು
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರು ರೇಣುಕಮ್ಮ, ಜಿಲ್ಲಾ ಉಪಾಧ್ಯಕ್ಷ ಮರಿಯಮ್ಮ, ಜಿಲ್ಲಾ ಖಜಾಂಚಿ ಮಹ್ಮದ ಹನೀಫ್ ಇನ್ನಿತರರು ಉಪಸ್ಥಿತರಿದ್ದರು.





