ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಹೋರಾಟ ಸಮಿತಿ ಆಯೋಜಿಸಿದ್ದ ಸಿದ್ದರಾಮಯ್ಯ ಹುಂಡಿ”ಯಿಂದ ಕಾಲ್ನಡಿಗೆ ಜಾಥಾವನ್ನು ಮೈಸೂರಿನಲ್ಲಿ ಪೊಲೀಸರು ತಡೆದು ಹೋರಾಟಗಾರರನ್ನು ಬಂಧಿಸಿದ ಕ್ರಮಕ್ಕೆ ಮಾದಿಗ ದಂಡೋರ ಜಿಲ್ಲಾ ಘಟಕ ವತಿಯಿಂದ ತೀವ್ರವಾಗಿ ಖಂಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಹೋರಾಟಗಾರರು ಭಾನುವಾರ ಪ್ರತಿಭಟಿಸಿ, ಪೊಲೀಸರ ಕ್ರಮವನ್ನು ಖಂಡಿಸಿದರು. ಜಾಥಾವನ್ನು ಹತ್ತಿಕ್ಕಿರುವುದು ಪ್ರಜಾಪ್ರಭುತ್ವದ ಹಕ್ಕಿನ ಮೇಲಿನ ದಾಳಿ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂವಿಧಾನವು ನಾಗರಿಕರಿಗೆ ಶಾಂತಿಯುತ ಹೋರಾಟ, ಕಾಲ್ನಡಿಗೆ ಜಾಥಾ ಸೇರಿದಂತೆ ಹಲವು ಪ್ರಜಾತಾಂತರ ಹಕ್ಕುಗಳನ್ನು ನೀಡಿರುವಾಗಲೂ, ಕಾಂಗ್ರೆಸ್ ಸರ್ಕಾರ ಸಂವಿಧಾನದ ಆತ್ಮವನ್ನು ಕಗ್ಗೊಲೆ ಮಾಡಿ ಹೋರಾಟಗಾರರನ್ನು ಬಂಧಿಸಿರುವುದು ಸಂವಿಧಾನ ಮೌಲ್ಯಗಳಿಗೆ ಧಕ್ಕೆ ತಂದಿದೆ ಎಂದು ಕಿಡಿಕಾರಿದರು.
ಬಂಧಿತ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಮುಂದೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಮಾದಿಗ ಸಮುದಾಯ ಕೆಲಸ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ನಾಯಕರು, ಒಳಮೀಸಲಾತಿ ಜಾರಿಯ ವಿಚಾರದಲ್ಲಿ ಸರ್ಕಾರವು ತಕ್ಷಣ ಸ್ಪಷ್ಟ ನಿಲುವು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 69ನೇ ಮಹಾಪರಿನಿರ್ವಾಣ ದಿನಾಚರಣೆ
ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷರು ನರಸಿಂಹಲು ಮರ್ಚಟಹಾಳ್, ಶ್ರೀನಿವಾಸ್ ಕೊಪ್ಪರ್, ಆಂಜನೇಯ ಕುರುಬುದೊಡ್ಡಿ, ತಾಯಪ್ಪ ಗಧರ್, ಶ್ರೀನಿವಾಸ್ ಕಲವಲದೊಡ್ಡಿ, ಆಂಜಿನೇಯ್ಯ ಗಾರಲದಿನ್ನಿ ಇನ್ನಿತರರು ಹಾಜರಿದ್ದರು.





