ಕಳೆದ ಒಂದು ವಾರದಿಂದ ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗುತ್ತಿದ್ದು, ಕೃಷಿ ಪಂಪಸೆಟ್ ಅವಲಂಬಿತ ಕೃಷಿಕರು ಸೇರಿದಂತೆ ವಿದ್ಯಾರ್ಥಿಗಳಿಗೂ ತೀವ್ರ ತೊಂದರೆಯಾಗುತ್ತಿದೆ. ಒಂದು ವಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ರೈತರು, ವಿದ್ಯಾರ್ಥಿಗಳೊಂದಿಗೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ರಾಯಚೂರು ಗ್ರಾಮೀಣ ಜೆಡಿಎಸ್ ಘಟಕದ ಅಧ್ಯಕ್ಷ ನಿಜಾಮುದ್ದೀನ್ ಎಚ್ಚರಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಮುಂಗಾರು ಬೆಳೆ ಕೆಳೆದುಕೊಂಡ ರೈತರು ಆತಂಕದಲ್ಲಿದ್ದಾರೆ. ಇಂಧನ ಸಚಿವರು ಲೋಡ್ ಶೆಡ್ಡಿಂಗ್ ಇಲ್ಲವೆಂದು ಹೇಳುತ್ತಿದ್ದಾರೆ. ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತಕ್ಕೆ ಕೆಪಿಟಿಸಿಎಲ್ ಕೇಳಬೇಕೆಂದು ಹೇಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ ಐದು ಗಂಟೆಯೂ ವಿದ್ಯುತ್ ದೊರೆಯುತ್ತಿಲ್ಲ. ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗಿನ ಜಾವ 5 ಗಂಟೆವರೆಗೆ ವಿದ್ಯುತ್ ನೀಡಿದರೆ ಕೃಷಿಗೆ ರಾತ್ರಿ ವೇಳೆ ನೀರು ಬಳಿಸಿಕೊಳ್ಳಲು ಆಗುವದಿಲ್ಲ. ಜೆಸ್ಕಾಂ ಅಧಿಕಾರಿಗಳು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರ ವಿದ್ಯುತ್ ಪೂರೈಕೆಯಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದು ಆರೋಪಿಸಿದರು.
“ನಾಲ್ಕರಿಂದ ಐದು ಸಾವಿರ ಮೆ.ವ್ಯಾ ವಿದ್ಯುತ್ ಬೇರೆ ಮೂಲಗಳಿಂದ ರಾಜ್ಯ ಸರ್ಕಾರ ಖರೀದಿ ಮಾಡುತ್ತಿದೆ. ಆದರೆ ಖರೀದಿಸಿದ ವಿದ್ಯುತ್ ಬೆಂಗಳೂರಿಗೆ ಸೀಮಿತವಾಗಿ ಗ್ರಾಮೀಣ ಜನರಿಗೆ ವಂಚಿಸಲಾಗುತ್ತಿದೆ. 24 ಗಂಟೆ ವಿದ್ಯುತ್ ಒದಗಿಸುವದಾಗಿ ಹೇಳುತ್ತಲೇ ಬಂದಿರುವ ಸರ್ಕಾರಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ತಳ್ಳುವ ಪ್ರಯತ್ನ ಮಾಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಿ ಅಭ್ಯಾಸ ಮಾಡಲು ಸಾಧ್ಯವಾಗದ ಸ್ಥಿತಿಯನ್ನು ನಿರ್ಮಾಣ ಮಾಡಿದೆ” ಎಂದರು.
“ಆರ್ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ. ರಾಜ್ಯಕ್ಕೆ ವಿದ್ಯುತ್ ನೀಡುವ ಘಟಕಗಳಿದ್ದರೂ ಗ್ರಾಮೀಣ ಜನರಿಗೆ ಮಾತ್ರ ವಿದ್ಯುತ್ ಇಲ್ಲದಂತಾಗಿದೆ ಎಂದರು. ಈ ಮಧ್ಯೆ ಕಾಂಗ್ರೆಸ್ ಸರ್ಕಾರ ವೈಟಿಪಿಎಸ್ ಘಟಕವನ್ನು ಖಾಸಗಿಯವರಿಗೆ ವಹಿಸಲು ಟೆಂಡರ್ ಪ್ರಕ್ರಿಯೆ ನಡೆಸಿದೆ. ಯಾಪಲದಿನ್ನಿ ಸೋಲಾರ ವಿದ್ಯುತ್ ಘಟಕವನ್ನೂ ಖಾಸಗಿಯವರಿಗೆ ನೀಡಲು ಹೊರಟಿದೆ. ಆದರೂ ಗ್ರಾಮೀಣ ಶಾಸಕ ಮೌನವಾಗಿರುವದು ಸಂಶಯಗಳಿಗೆ ಕಾರಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಸಂವಿಧಾನ ನಮ್ಮ ಬದುಕು, ಹಕ್ಕು, ಬಲ ನೀಡುವ ಮಹಾನ ಶಕ್ತಿ: ಸಚಿವ ಎಚ್.ಕೆ ಪಾಟೀಲ
“ಗ್ರಾಮೀಣ ಶಾಸಕರು ತಮ್ಮದೇ ಸರ್ಕಾರವಿದ್ದರೂ ಖಾಸಗೀಕರಣವನ್ನು ವಿರೋಧಿಸುತ್ತಿಲ್ಲ. ಸಮರ್ಪಕ ವಿದ್ಯುತ್ ಪೂರೈಕೆ ಮೇಲೆ ಗಮನ ಹರಿಸುತ್ತಿಲ್ಲ. ಈಗಾಗಲೇ ರೈತರು ಶಾಸಕರ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಇಚ್ಛಾಶಕ್ತಿ ಪ್ರದರ್ಶಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ ರೈತರು, ವಿದ್ಯಾರ್ಥಿಗಳು,ಪಾಲಕರು ಸೇರಿದಂತೆ ಗ್ರಾಮೀಣ ಜನರು ಸೇರಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ನಾಯಕ, ಮಹ್ಮದ ರಫಿ, ಉಪ್ಪಳ ಬಡೇಸಾಬ, ಗುಜ್ಜಲ ತಾಯಪ್ಪ ಇದ್ದರು.
ವರದಿ : ಹಫೀಜುಲ್ಲ




