ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದ ಹಣ ವರ್ಗಾವಣೆ ಪ್ರಕರಣದಲ್ಲಿ ಅಭಿವೃದ್ದಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಕೂಡಾ ಭಾಗಿಯಾಗಿರುವ ಶಂಕೆಯಿದ್ದು, ರಾಜೀನಾಮೆ ನೀಡಬೇಕು” ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷಿ ಆಗ್ರಹಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ಬಿಡುಗಡೆಯಾಗಿದ್ದು, ₹187 ಕೋಟಿ ಅನುದಾನವನ್ನು ಬೇರೆ ರಾಜ್ಯಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಿಂದ ಅಮಾಯಕ ಅಧಿಕಾರಿ ಬಲಿಯಾಗಿದ್ದಾನೆ. ನಿಗಮದ ಹಣ ವರ್ಗಾವಣೆಗೆ ಸಚಿವ ಸೂಚನೆಯಿದೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ನಿಗಮದ ಅಧ್ಯಕ್ಷರ ಮಾಹಿತಿಯಿಲ್ಲದೇ ಇಷ್ಟೊಂದು ಹಣವರ್ಗಾವಣೆ ಹೇಗಾಯಿತು ಎಂದು ಪ್ರಶ್ನಿಸಿದರು. ಯೂನಿಯನ್ ಬ್ಯಾಂಕ್ ಮೂಲಕ ₹83 ಕೋಟಿ ಅನುದಾನ ಬೇರೆ ಬೇರೆ ಖಾತೆಗೆ ವರ್ಗಾವಣೆಯಾಗಿರುವುದಾಗಿ ಬಯಲಾಗಿದೆ. ರತ್ನಾಕರ್ ಬ್ಯಾಂಕ್ನ ಮೂಲಕ ಸಾಫ್ಟ್ವೇರ್ ಕಂಪನಿ ಖಾತೆಗೆ ಹಣ ವರ್ಗಾವಣೆಯಾಗಿರುವುದರ ಹಿಂದೆ ಅನೇಕ ಸಚಿವರು, ಶಾಸಕರ ಕೈವಾಡವಿದೆ” ಎಂದು ಆರೋಪಿಸಿದರು.
“ಯೂನಿಯನ್ ಬ್ಯಾಂಕ್ ನೀಡಿರುವ ದೂರಿನ ಮೇರೆಗೆ ಸಿಬಿಐ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರದ ಮೂಲದ ನಕ್ಕುಂಟಿ ನಾಗೇಶ್ವರರಾವ್ ಎಂಬಾತನ ಬಂಧನವಾಗಿದೆ. ನಗರದ ಡಿವಿಆರ್ ಕ್ಲಬ್ ಕೂಡ ನಕ್ಕಂಟಿ ಕುಟುಂಬಕ್ಕೆ ಸೇರಿದೆ. ದೊಡ್ಡ ಮಟ್ಟದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೊಸರಾಜ ಅವರೂ ಕೂಡಾ ಪ್ರಕರಣದ ಹಿಂದಿರುವ ಸಂಶಯಗಳಿದ್ದು, ಸಮಗ್ರ ತನಿಖೆ ನಡೆಸಬೇಕಿದೆ. ತೆಲಂಗಾಣದ ಚುನಾವಣೆ ಉಸ್ತುವಾರಿಯಾಗಿದ್ದ ಎನ್.ಎಸ್.ಬೋಸರಾಜ ಇವರು ರಾಜ್ಯದಿಂದ ನಿಗಮದ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿರುವ ಸಾಧ್ಯತೆಗಳಿದ್ದು ಸಿಬಿಐ ತನಿಖೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.
“ಪರಿಶಿಷ್ಟ ಪಂಗಡದ ಮೀಸಲಾತಿ ಕ್ಷೇತ್ರದಿಂದ ಗೆದ್ದಿರುವ ಗ್ರಾಮೀಣ ಶಾಸಕ ದದ್ದಲ ಬಸನಗೌಡ ಅದೇ ಸಮುದಾಯಕ್ಕೆ ದ್ರೋಹ ಮಾಡಿದ್ದು, ನೈತಿಕತೆಯಿದ್ದರೆ ಸ್ವಯಂಪ್ರೇರಿತವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮಖ್ಯಮಂತ್ರಿಗಳು ನಿಗಮದ ಅಧ್ಯಕ್ಷರಿಗೆ ಸೂಚನೆ ನೀಡಿ ರಾಜೀನಾಮೆ ಪಡೆಯಬೇಕು. ಪಕ್ಷದಿಂದ ಉಚ್ಛಾಟಿಸುವ ಮೂಲಕ ಟಿಎಸ್ಪಿ ಅನುದಾನ ದುರ್ಬಳಕೆ ಮಾಡಿಕೊಂಡವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು” ಎಂದು ಒತ್ತಾಯಿಸಿದರು.
“ಶೋಷಿತ ಸಮುದಾಯಗಳನ್ನು ಮೇಲೆತ್ತುವುದಾಗಿ ಹೇಳುತ್ತಾ ಬಂದಿರುವ ಕಾಂಗ್ರೆಸ್ ನಾಯಕರು ಎಸ್ಇಪಿ ಮತ್ತು ಟಿಎಸ್ಪಿ ಅನುದಾನ ₹11,000 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರು. ಈಗ ಟಿಎಸ್ಪಿ ಅನುದಾನವನ್ನು ಚುನಾವಣೆಗೆ ಬಳಿಸಿಕೊಂಡಿದ್ದಾರೆ. ಈ ಕುರಿತು ಜೆಡಿಎಸ್ ಪಕ್ಷದ ಮುಖಂಡರ ಬಳಿ ನಿಯೋಗ ತೆರಳಿ ತನಿಖೆಗೆ ಒತ್ತಾಯಿಸುವಂತೆ ಮನವಿ ಮಾಡಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬಿತ್ತನೆ ಬೀಜದ ದರ ಏರಿಕೆಗೆ ಖಂಡನೆ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
ಈ ಸಂದರ್ಭದಲ್ಲಿ ಎನ್ ಶಿವಶಂಕರ ವಕೀಲ, ರಾಮಕೃಷ್ಣ, ನರಸಿಂಹನಾಯಕ, ಹಂಪಯ್ಯನಾಯಕ, ಲಕ್ಷ್ಮೀಪತಿ ಗಾಣಧಾಳ, ನಾಗರಾಜಗೌಡ ಇದ್ದರು.
ವರದಿ : ಹಫೀಜುಲ್ಲ





