ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ (VB G RAM G) ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ ಹಾಗೂ ರಾಜ್ಯ ಮಹಿಳಾ ಒಕ್ಕೂಟದಲ್ಲಿ ರಾಯಚೂರು ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕೂಲಿಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಾಯಚೂರು – ಯಾದಗಿರಿ ಸಂಸದರು ಜಿ ಕುಮಾರ್ ನಾಯ್ಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಮಿಕರು, ಕಾರ್ಮಿಕ ಸಂಘಟನೆಗಳು, ಚಿಂತಕರು ಹಾಗೂ ಹೋರಾಟಗಾರರೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ ಈ ಮಸೂದೆಯನ್ನು ರಚಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಈ ಮಸೂದೆ ಜಾರಿಯಾದಲ್ಲಿ ಗ್ರಾಮೀಣ ಪ್ರದೇಶದ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಈಗಿರುವ ಉದ್ಯೋಗ ಭದ್ರತೆ ಮತ್ತು ಜೀವನೋಪಾಯ ಯೋಜನೆಗಳನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆ ಉದ್ದೇಶಿಸಿ ವಿದ್ಯಾ ಪಾಟೀಲ್ ಮಾತನಾಡಿ, MGNREGA ಕಾಯ್ದೆಯಡಿ ಕೂಲಿ ಕಾರ್ಮಿಕರ ಬೇಡಿಕೆಗೆ ಅನುಗುಣವಾಗಿ ಕೆಲಸ ಒದಗಿಸುವುದು ಹಾಗೂ ಕೆಲಸ ನೀಡದಿದ್ದಲ್ಲಿ ಪರಿಹಾರ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದದ್ದಾಗಿತ್ತು. ಆದರೆ VB G RAM G–2025 ಮಸೂದೆ 4(5)ರ ಪ್ರಕಾರ, ಕೇಂದ್ರ ಸರ್ಕಾರ ನಿಗದಿಪಡಿಸುವ ರಾಜ್ಯವಾರು ಬಜೆಟ್ ಹಂಚಿಕೆಯ ಆಧಾರದಲ್ಲಿ ಮಾತ್ರ ಮಾನವ ದಿನಗಳನ್ನು ನಿರ್ಧರಿಸಲಾಗುತ್ತದೆ. ಮಸೂದೆ ಪರಿಚ್ಛೇದ 4(6)ರಂತೆ ಈ ಬಜೆಟ್ ಮಿತಿಯನ್ನು ಮೀರಿದಲ್ಲಿ ಹೆಚ್ಚುವರಿ ಹೊರೆ ರಾಜ್ಯ ಸರ್ಕಾರಗಳ ಮೇಲೆ ಬೀಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು
ಈ ಯೋಜನೆ ಮಹಾತ್ಮ ಗಾಂಧೀಜಿಯವರ ಹೆಸರು ಬದಲಾವಣೆ ಮಾಡುವ ಗಾಂಧೀಜಿಯವರ ಆಶಯಗಳ ವಿರೋಧವಾಗಿ ರೂಪುಗೊಂಡಿದೆ, ಅಷ್ಟೆ ಅಲ್ಲದೆ ಕೋಟ್ಯಾಂತರ ಭೂಹೀನ ಕಾರ್ಮಿಕರ, ಮಹಿಳೆಯರ, ಆದಿವಾಸಿಗಳ, ದಲಿತರ ಬದುಕನ್ನು ಸಂಕಷ್ಟಕೊಳಪಡಿಸುತ್ತದೆ. ಕೂಡಲೇ ವಿಕಸಿತ ಭಾರತ -ಗ್ಯಾರಂಟಿ ಫಾರ್ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದರೆ ಇಡೀ ದೇಶಾದ್ಯಂತ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನರೇಗಾ ಹೆಸರು ಬದಲಾವಣೆಗೆ ವಿರೋಧಿಸಿ ಡಿ.22 ರಂದು ಸಂಸದರ ಕಚೇರಿ ಮುಂದೆ ಗ್ರಾಕೂಸ್ ಪ್ರತಿಭಟನೆ
ಈ ವೇಳೆ ರಾಜ್ಯ ಮಹಿಳಾ ಒಕ್ಕೂಟ ವಿರುಪಮಾ, ಮಾರೆಮ್ಮ ರಾಯಚೂರು, ಬಸವರಾಜ ಗಬ್ಬೂರು, ಮೌಕ್ಷಮ್ಮ , ಹನುಮೇಶ, ಗುರುರಾಜ್, ರೂಪಾ ಗುಂಜಳ್ಳಿ, ರಾಧಾ, ಪ್ರಸಾದ,ಲಕ್ಷ್ಮೀ ಹಲ್ಕಾವಟಗಿ, ಪ್ರಸಾದ, ಬಸವರಾಜ ಇನ್ನಿತರರು ಹಾಜರಿದ್ದರು.





